ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಳಿಕ ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಘೋಷಿಸಿದ್ದರು. ವಿರಾಟ್ ಕೊಹ್ಲಿ ಬಳಿಕ ಆರ್ಸಿಬಿ ನಾಯಕ ಯಾರಾಗಬಹುದೆಂದು ಹಲವು ಕ್ರಿಕೆಟ್ ಪಂಡಿತರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಭಾರತದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಪ್ರತಿಕ್ರಿಯಿಸಿದ್ದು, ಮುಂದಿನ ಮೂರು ಅಥವಾ ನಾಲ್ಕು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿಗೆ ಬೆಂಗಳೂರು ಫ್ರಾಂಚೈಸಿ ನಾಯಕನನ್ನು ನೇಮಿಸಬಹುದು ಎಂದಿದ್ದಾರೆ. "ಎಬಿ ಡಿ ವಿಲಿಯರ್ಸ್ರನ್ನು ಆರಿಸಿದರೂ ಅವರು ಎಷ್ಟು ವರ್ಷಗಳ ಕಾಲ ನೀವು ನಾಯಕನನ್ನಾಗಿ ಪಡೆಯಬಹುದು? ಹಾಗಾಗಿ, ಕನಿಷ್ಠ ಮೂರು ವರ್ಷಗಳ ಕಾಲ ತಂಡವನ್ನು ಮುನ್ನಡೆಸಬಹುದಾದ ಯಾರನ್ನಾದರೂ ಆಯ್ಕೆ ಮಾಡುವುದನ್ನು ನಾನು ಇಷ್ಟಪಡುತ್ತೇನೆ," ಎಂದು ಮಾಂಜ್ರೇಕರ್ ಇಎಸ್ಪಿಎನ್ ಕ್ರಿಕ್ಇನ್ಪೊ ವಿಡಿಯೋದಲ್ಲಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಹಿರಿಯ ಆಟಗಾರನಾಗಿ ಆಡಿದರೆ, ಸೂರ್ಯಕುಮಾರ್ ಯಾದವ್ ಆರ್ಸಿಬಿ ತಂಡವನ್ನು ಮುನ್ನಡೆಸಬಹುದು ಎಂದು ಹೇಳಿದ ಸಂಜಯ್ ಮಾಂಜ್ರೇಕರ್, ಇವರ ಜೊತೆಗೆ ಬೆಂಗಳೂರು ಫ್ರಾಂಚೈಸಿಯನ್ನು ಮುನ್ನಡೆಸಲು ಕೈರೊನ್ ಪೊಲಾರ್ಡ್ ಹಾಗೂ ಡೇವಿಡ್ ವಾರ್ನರ್ ಕೂಡ ಸ್ಪರ್ಧೆಯಲ್ಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಾಯಕತ್ವ ಗುಣಗಳಿರುವವರ ಪೈಕಿ ಕೈರೊನ್ ಪೊಲಾರ್ಡ್ ಕೂಡ ಒಬ್ಬರು. ಇವರ ಜೊತೆಗೆ ಸೂರ್ಯಕುಮಾರ್ ಯಾದವ್ ಹಾಗೂ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕೂಡ ಇದ್ದಾರೆ," ಎಂದು ಮಾಂಜ್ರೇಕರ್ ತಿಳಿಸಿದ್ದಾರೆ. ಮುಂಬರುವ 2022ರ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡದ ನಾಯಕತ್ವಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಪತ್ತೆ ಮಾಡಲಿದೆ. ಶುಕ್ರವಾರ ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ವಿರಾಟ್ ಕೊಹ್ಲಿ (53) ಹಾಗೂ ದೇವದತ್ ಪಡಿಕ್ಕಲ್(70) ಅವರ ಅರ್ಧಶತಕಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ತನ್ನ ಪಾಲಿನ 20 ಓವರ್ಗಳಿಗೆ 156 ರನ್ಗಳಿಗೆ ಸೀಮಿತವಾಯಿತು. ಬಳಿಕ ಗುರಿ ಹಿಂಬಾಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಉತ್ತಮ ಪ್ರದರ್ಶನದ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ಗಳ ಗೆಲುವು ದಕ್ಕಿಸಿಕೊಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಸಿಎಸ್ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿತು. ಇನ್ನು ಆರ್ಸಿಬಿ 3ನೇ ಸ್ಥಾನದಲ್ಲಿಯೇ ಉಳಿಯಿತು. ನಮ್ಮ ಬೌಲರ್ಗಳಿಗೆ ಎಕ್ಸ್-ಫ್ಯಾಕ್ಟರ್ ಕೊರತೆಯಿದೆ : ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಪವರ್ಪ್ಲೇನಲ್ಲಿ ನಮ್ಮ ಬೌಲರ್ಗಳಿಗೆ ಎಕ್ಸ್-ಫ್ಯಾಕ್ಟರ್ ಕೊರತೆಯಿದೆ ಹಾಗೂ ಚೆಂಡಿನೊಂದಿಗೆ ಸಾಕಾಗುವಷ್ಟು ಧೈರ್ಯದ ಸಮಸ್ಯೆ ಕೂಡ ಇದೆ ಎಂದರು. ಇದರ ಜೊತೆಗೆ ನಾವು 175 ರನ್ ಗಳಿಸಬೇಕಾಗಿತ್ತು ಎಂದು ಹೇಳಿಕೊಂಡಿದ್ದಾರೆ. "ಇಲ್ಲಿನ ವಿಕೆಟ್ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು. 15 ರಿಂದ 20 ರನ್ ನಮ್ಮ ಪಾಲಿಗೆ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. 175 ರನ್ ಇಲ್ಲಿ ಗೆಲುವಿನ ಮೊತ್ತವಾಗುತ್ತಿತ್ತು. ಇದರ ಜೊತೆಗೆ ಸ್ಥಿರವಾಗಿ ನಾವು ಬೌಲ್ ಕೂಡ ಮಾಡಲಾಗಲಿಲ್ಲ ಹಾಗೂ ಸಾಕಷ್ಟು ಬೌಂಡರಿ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದೇವೆ. ಒಟ್ಟಿನಲ್ಲಿ ಚೆಂಡಿನೊಂದಿಗೆ ನಾವು ಸಾಕಷ್ಟು ಧೈರ್ಯ ತೋರಿಸುವಲ್ಲಿ ವಿಫಲರಾಗಿದ್ದೇವೆ," ಎಂದು ಬೇಸರ ವ್ಯಕ್ತಪಡಿಸಿದ್ದರು. "ಕೆಲ ಜಾಗದಲ್ಲಿ ಪಿಚ್ ಮಾಡಬಾರದೆಂಬ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು, ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ಅದರಲ್ಲೂ ಆರಂಭಿಕ 5-6 ಓವರ್ಗಳಲ್ಲಿ ನಮಗೆ ಎಕ್ಸ್-ಫ್ಯಾಕ್ಟರ್ ಮಿಸ್ ಆಗಿದೆ. ಇದರ ಹೊರತಾಗಿಯೂ ನಿರ್ಣಾಯಕ ಸನ್ನಿವೇಶಗಳಲ್ಲಿ ಉತ್ತಮ ಎಸೆತಗಳನ್ನು ಕಾರ್ಯಗತಗೊಳಿಸುವುದು ಅಗತ್ಯ. ಇಂಥಾ ಕೆಲ ಸನ್ನಿವೇಶಗಳಲ್ಲಿ ನಾವು ಎಡವುತ್ತಿದ್ದೇವೆ," ಎಂದು ಕೊಹ್ಲಿ ಹೇಳಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uci65v