₹80 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ತಡೆಯೊಡ್ಡಿದ ಸಚಿವ! ಸರ್ಕಾರದ ಪ್ರಭಾವ ಬಳಸಿ ಒತ್ತುವರಿ ಕಾರ್ಯ ಸ್ಥಗಿತ

ಬೆಂಗಳೂರು: ರಾಜ್ಯ ಸರಕಾರದ ಸಚಿವರೊಬ್ಬರು ತಮ್ಮ ಪ್ರಭಾವ ಬೀರಿ ಬಿಡಿಎಗೆ ಬರಬೇಕಿದ್ದ ಸುಮಾರು 80 ಕೋಟಿ ರೂ.ಮೌಲ್ಯದ ಆಸ್ತಿ ತಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬಿಡಿಎಗೆ ಸೇರಿದ ಜಾಗವನ್ನು ವಶಕ್ಕೆ ಪಡೆದುಕೊಳ್ಳಲು ಪೊಲೀಸ್‌ ಭದ್ರತೆಯೊಂದಿಗೆ ಕಾರ್ಯಪಾಲಕ ಎಂಜಿನಿಯರ್‌ ಜಿ.ಕುಮಾರ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಭಾಸ್ಕರ್‌ ನೇತೃತ್ವದ ತಂಡ ಗುರುವಾರ ಬೆಳಗ್ಗೆ ಕಾರ್ಯಾಚರಣೆಗೆ ಮುಂದಾಗಿತ್ತು. ಈ ವೇಳೆ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್‌ ಮತ್ತು ಕೋಳಿ ಫಾರಂ ನೆಲಸಮ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಈ ವಿಷಯಕ್ಕೆ ಸಂಬಂಧಪಡದೇ ಇದ್ದರೂ ಸಚಿವರೊಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಜಾಗ ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರೂ ಸಚಿವರು ಸರಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಸಚಿವರು ಬಿಡಿಎ ಉನ್ನತಾಧಿಕಾರಿಗಳ ಮೇಲೂ ಪ್ರಭಾವ ಬೀರಿದರೂ ಫಲ ನೀಡಿಲ್ಲ. ಅಂತಿಮವಾಗಿ, ಸರಕಾರದ ಉನ್ನತ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿ ಸ್ಥಳದಲ್ಲಿದ್ದ ಬಿಡಿಎ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ. ಏನಿದು ವಿವಾದ?ಬೆಂಗಳೂರಿನ ಭೂಪಸಂದ್ರದ ಸರ್ವೆ ನಂಬರ್‌ 17 ರ ಒಂದು ಎಕರೆ ಜಾಗವನ್ನು ಆರ್‌ಎಂವಿ 2 ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1982ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕರಾದ ಆಂಜನಪ್ಪ ಅವರು 1983ರಲ್ಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ 2000ನೇ ಇಸವಿವರೆಗೆ ನಡೆದು ಬಿಡಿಎ ಪರ ತೀರ್ಪು ಬಂದಿತ್ತು. ನಂತರ ಈ ತೀರ್ಪಿನ ವಿರುದ್ಧ ಆಂಜನಪ್ಪ ಅವರ ಪತ್ನಿ ಕೆಂಪಮ್ಮ ಮತ್ತು ಮಗ ಚಂದ್ರಶೇಖರ್‌ ಭೂಸ್ವಾಧೀನ ರದ್ದುಗೊಳಿಸುವಂತೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 2003ರಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2011ರಲ್ಲಿ ಬಿಡಿಎ ಪರ ತೀರ್ಪು ನೀಡಿತ್ತು. ನಂತರ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿ ಭೂ ಸ್ವಾಧೀನದಿಂದ ತಮ್ಮ ಜಮೀನನ್ನು ಬಿಟ್ಟುಕೊಡುವಂತೆ ಕೋರಿದ್ದರು. ಈ ಸಂಬಂಧ 2019ರಲ್ಲಿ ಅರ್ಜಿ ತಿರಸ್ಕರಿಸಿದ್ದ ವಿಭಾಗೀಯ ಪೀಠ ಬಿಡಿಎ ಪರ ತೀರ್ಪು ಕೊಟ್ಟಿತ್ತು. ಅರ್ಜಿದಾರರು ಸಲ್ಲಿಸಿದ್ದ ಮತ್ತೊಂದು ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರು ಒಂದೇ ಜಾಗಕ್ಕೆ ಸಂಬಂಧಿಸಿದಂತೆ ಪದೇ ಪದೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ ಮತ್ತು ಬಿಡಿಎ ಪರವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಹೀಗಾಗಿ, ಅವರು ಸದರಿ ಜಾಗದಲ್ಲಿ ಬಿಡಿಎ ನಿವೇಶನ ಹಂಚಿಕೆ ಪತ್ರ ಪಡೆದಿರುವವರಿಗೆ ಒಟ್ಟು 3.75 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕೆಂದು 2021ರ ಜನವರಿಯಲ್ಲಿ ತೀರ್ಪು ನೀಡಿ ಅರ್ಜಿ ಇತ್ಯರ್ಥ ಮಾಡಿತ್ತು. ಆದರೆ, ಈ ಜಾಗವನ್ನು ಬಿಡಿಎಗೆ ಬಿಟ್ಟುಕೊಡದ ಚಂದ್ರಶೇಖರ್‌, ಕಾಂಪೌಂಡ್‌ ಜತೆಗೆ 2 ಕೋಳಿ ಫಾರಂ ಮತ್ತು ಕಾರ್ಮಿಕರು ವಾಸ ಮಾಡಲು ತಾತ್ಕಾಲಿಕ ಶೆಡ್‌ ನಿರ್ಮಿಸಿದ್ದರು. ಈ ಒತ್ತುವರಿ ತೆರವುಗೊಳಿಸದಂತೆ ಪ್ರಭಾವಿ ಸಚಿವರ ದೂರವಾಣಿ ಕರೆ ಬಂದಾಗಲೂ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದರು. ಅಂತಿಮವಾಗಿ ಸರಕಾರದ ಉನ್ನತ ಮಟ್ಟದವರಿಂದ ಕರೆ ಬರುವ ವೇಳೆಗೆ ಶೇ.90ರಷ್ಟು ತೆರವು ಕಾರ್ಯಾಚರಣೆ ಪೂರ್ಣಗೊಂಡಿತ್ತು. ಬಿಬಿಎಂಪಿಯಿಂದ 2.07 ಕೋಟಿ ತೆರಿಗೆ ವಸೂಲಿ:ಆದರ್ಶ ರಿಯಾಲಿಟಿ ಮತ್ತು ಹೋಟೆಲ್‌ ಪ್ರೈ., ಲಿಮಿಟೆಡ್‌ 2019-20ನೇ ಸಾಲಿನ ಬಾಕಿ ಉಳಿಸಿಕೊಂಡಿದ್ದ ಸುಮಾರು 2.07 ಕೋಟಿ ರೂ. ತೆರಿಗೆಯನ್ನು ಬಿಬಿಎಂಪಿ ಅಧಿಕಾರಿಗಳು ಗುರುವಾರ ವಸೂಲಿ ಮಾಡಿದ್ದಾರೆ. ವಸಂತನಗರ ವಾರ್ಡ್‌ ಸಂಖ್ಯೆ- 93 ಕಂದಾಯ ವಿಭಾಗದ ಅಧಿಕಾರಿಗಳ ತಂಡ ಆನ್‌ಲೈನ್‌ ಮೂಲಕ ಇಷ್ಟೊಂದು ಬೃಹತ್‌ ಪ್ರಮಾಣದ ತೆರಿಗೆಯನ್ನು ವಸೂಲಿ ಮಾಡಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.


from India & World News in Kannada | VK Polls https://ift.tt/3EXyewW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...