ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಕ್ಕೆ ಗೆಲುವು ಪ್ರಾಪ್ತಿಯಾಗಿತ್ತು. ಈ ಬಗ್ಗೆ ಲೇವಡಿ ಮಾಡಿದ್ದ ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್, ಇದೇ ವರ್ಷ ಭಾರತದಲ್ಲಿ ನಡೆಯಲಿರುವ ಟೂರ್ನಿ ಗೆಲ್ಲಲು ಕೇವಲ ಟಾಸ್ ಗೆದ್ದರಷ್ಟೇ ಸಾಕು ಎಂದಿದ್ದರು. ಆದರೆ, ಐದು ಪಂದ್ಯಗಳ ಸರಣಿಯಲ್ಲಿ 3-2 ಅಂತರದಲ್ಲಿ ಭಾರತ ತಂಡ ಜಯ ದಾಖಲಿಸುತ್ತಿದ್ದಂತೆಯೇ ಮೈಕಲ್ ವಾನ್ ಯೂ ಟರ್ನ್ ಹೊಡೆದಿದ್ದಾರೆ. ಸರಣಿಯ ಕೊನೇ ಎರಡೂ ಪಂದ್ಯಗಳಲ್ಲಿ ಟಾಸ್ ಸೋತರೂ ಟೀಮ್ ಇಂಡಿಯಾ ದಾಖಲಿಸಿದ ಅದ್ಭುತ ಗೆಲುವನ್ನು ಕಂಡು ವಾನ್ ಕಕ್ಕಾಬಿಕ್ಕಿಯಾದಂತ್ತಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಆರಂಭಿಸಿದ ದಿನದಿಂದಲೂ ವಾನ್ ಸೋಷಿಯಲ್ ಮೀಡಿಯಾ ಮೂಲಕ ಟೀಮ್ ಇಂಡಿಯಾವನ್ನು ಸ್ಲೆಡ್ಜ್ ಮಾಡುತ್ತಲೇ ಬಂದಿದ್ದಾರೆ. ಆದರೆ, ಟೆಸ್ಟ್ ಸರಣಿ ನಂತರ ಪ್ರವಾಸಿ ಪಡೆ ಈಗ ಟಿ20 ಸರಣಿಯಲ್ಲೂ ಮುಗ್ಗರಿಸಿದ ಬಳಿಕ ಇಂಗ್ಲೆಂಡ್ನ ಮಾಜಿ ನಾಯಕನಿಗೆ ಗರ್ವ ಭಂಗವಾದಂತ್ತಾಗಿದ್ದು, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವೇ ಗೆಲ್ಲೋ ಫೇವರಿಟ್ಸ್ ಎಂದು ಒಪ್ಪಿಕೊಂಡಿದ್ದಾರೆ. ಶನಿವಾರ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ರೋಹಿತ್ ಶರ್ಮಾ (64) ಮತ್ತು ವಿರಾಟ್ ಕೊಹ್ಲಿ (ಅಜೇಯ 80) ಅವರ ಭರ್ಜರಿ ಅರ್ಧಶತಕಗಳ ಬಲದಿಂದ 224/2 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಬಳಿಕ ಬ್ಯಾಟ್ ಮಾಡಿದ ಇಂಗ್ಲೆಂಡ್ ತನ್ನ ಸಂಪೂರ್ಣ ಸಾಮರ್ಥ್ಯ ಹೊರತಂದರೂ 20 ಓವರ್ಗಳಲ್ಲಿ 8 ವಿಕೆಟ್ಗೆ 188 ರನ್ ಮಾತ್ರವೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಯಿತು. ಈ ಬಳಿಕ ಕೂಡಲೇ ಟ್ವೀಟ್ ಮಾಡಿದ ಮೈಕಲ್ ವಾನ್, ತಮ್ಮ ಈ ಹಿಂದಿನ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. "ಈ ಸರಣಿಯಲ್ಲಿ ಭಾರತ ತಂಡ ಅದ್ಭುತ ಹೊಂದಾಣಿಕೆ ಪ್ರದರ್ಶಿಸಿದೆ. ಶ್ರೇಷ್ಠ ಆಟವಾಡಿದ ತಂಡ ಜಯ ದಾಖಲಿಸಿದೆ. ಈ ತಂಡಕ್ಕೆ ಇನ್ನು ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರ್ಪಡೆ ಆದರೆ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡ ಇದೇ," ಎಂದು ಭವಿಷ್ಯ ನುಡಿದಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸುತ್ತಿರುವ ಆಲ್ರೌಂಡರ್ ರವೀದ್ರ ಜಡೇಜಾ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲು ಜಡೇಜಾ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇನ್ನು ಜಸ್ಪ್ರೀತ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಂಡರೂ, ನಾಲ್ಕನೇ ಟೆಸ್ಟ್ನಿಂದ ತಂಡದಿಂದ ಹೊರಗುಳಿದು ತಮ್ಮ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರು. ಮಾರ್ಚ್ 15ರಂದು ಗೋವಾದಲ್ಲಿ ಖಾಸಗಿಯಾಗಿ ನಡೆದ ವಿವಾಹ ಮಹೋತ್ಸವದಲ್ಲಿ ಮುಂಬೈ ಮೂಲದ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಬುಮ್ರಾ ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದರು. ಪುಣೆಯಲ್ಲಿ ಏಕದಿನ ಸರಣಿಟೆಸ್ಟ್ ಮತ್ತು ಟಿ20 ಸರಣಿ ಗೆದ್ದಿರುವ , ಮಾರ್ಚ್ 23ರಂದು ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲೂ ಹಾಲಿ ವಿಶ್ವ ಚಾಂಪಿಯನ್ಸ್ ಇಂಗ್ಲೆಂಡ್ ಎದುರು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಮಾರ್ಚ್ 23ರಿಂದ 28ರವರೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್ ಸರಣಿಯ ಮೂರೂ ಪಂದ್ಯಗಳ ಆಯೋಜನೆ ಆಗಲಿದೆ. ಐದನೇ ಟಿ20 ಪಂದ್ಯದ ಸಂಕ್ಷಿಪ್ತ ಭಾರತ: 20 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 224 ರನ್ (ರೋಹಿತ್ ಶರ್ಮಾ 64, ವಿರಾಟ್ ಕೊಹ್ಲಿ ಅಜೇಯ 80, ಸೂರ್ಯಕುಮಾರ್ ಯಾದವ್ 32, ಹಾರ್ದಿಕ್ ಪಾಂಡ್ಯ 39; ಆದಿಲ್ ರಶೀದ್ 31ಕ್ಕೆ 1, ಬೆನ್ ಸ್ಟೋಕ್ಸ್ 26ಕ್ಕೆ 1). ಇಂಗ್ಲೆಂಡ್: 20 ಓವರ್ಗಳಲ್ಲಿ 8 ವಿಕೆಟ್ಗೆ 188 ರನ್ (ಜೋಸ್ ಬಟ್ಲರ್ 52, ಡಾವಿಡ್ ಮಲಾನ್ 68, ಬೆನ್ ಸ್ಟೋಕ್ಸ್ 14, ಸ್ಯಾಮ್ ಕರ್ರನ್ 14*; ಭುವನೇಶ್ವರ್ ಕುಮಾರ್ 15ಕ್ಕೆ 2, ಹಾರ್ದಿಕ್ ಪಾಂಡ್ಯ 34ಕ್ಕೆ 1, ಶಾರ್ದುಲ್ ಠಾಕೂರ್ 45ಕ್ಕೆ 3, ಟಿ ನಟರಾಜನ್ 39ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tI5qlC