ನೆನಪು ಮಾಡಿಕೊಳ್ಳಿ.. 2020ರ ಮಾರ್ಚ್ ಮಧ್ಯ ವಾರದಿಂದ ಆರಂಭವಾಗಿತ್ತು ಲಾಕ್ಡೌನ್ ಭರಾಟೆ.. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿತ್ತು.. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟುತ್ತಿದ್ದಂತೆಯೇ ಎಲ್ಲೆಲ್ಲೂ .. ಆತಂಕ.. ಆದ್ರೆ ಈಗ..?! ಜನರಿಗೂ ಭಯವಿಲ್ಲ, ಲಾಕ್ಡೌನ್ ಮಾಡಲು ಸರ್ಕಾರಕ್ಕೂ ಧೈರ್ಯವಿಲ್ಲ..! 2020ರ ಮಾರ್ಚ್ನಲ್ಲಿ ಇದ್ದ ಪರಿಸ್ಥಿತಿಯೇ 2021ರ ಮಾರ್ಚ್ನಲ್ಲೂ ಇದೆ..! ಆದ್ರೆ, ಭಯ, ಆತಂಕ ಮಾಯವಾಗಿದೆ..! ಬಸ್, ಮೆಟ್ರೋ ರೈಲು, ಕಚೇರಿ, ಮಾಲ್, ಥಿಯೇಟರ್, ಮಾರ್ಕೆಟ್ ಎಲ್ಲೆಲ್ಲೂ ಜನವೋ ಜನ..! ಕೊರೊನಾ ಕಥೆ ಮುಗಿದೇ ಹೋಗಿದೆ ಎಂಬಂಥಾ ಪರಿಸ್ಥಿತಿ.. ಮಾಸ್ಕ್ ಧರಿಸದ ಜನರೇ ಎಲ್ಲೆಲ್ಲೂ ಕಾಣ ಸಿಗುತ್ತಾರೆ. ಇನ್ನು ಮರೆತೇ ಹೋಗಿದೆ. ಕೈ ತೊಳೆಯೋದು ಇರಲಿ, ಸ್ಯಾನಿಟೈಸರ್ ಎಂಬ ಪದವೇ ಎಷ್ಟೋ ಜನಕ್ಕೆ ಮರೆತು ಹೋಗಿದೆ..! ಏಕೆ ಹೀಗೆ..? ಲಸಿಕೆ ಬಂದಿದೆ ಎಂಬ ಧೈರ್ಯವೇ..? ನಾವು ನಮ್ಮದೇ ನಿರ್ಲಕ್ಷ್ಯದಿಂದ ಕೊರೊನಾ ಪೀಡತರಾದರೆ ಅದು ಈಗಲೂ ಮಾರಣಾಂತಿಕವೇ ಎಂಬ ಎಚ್ಚರಿಕೆ ಬೇಡವೇ..? ಬಿಪಿ, ಶುಗರ್, ಹೃದಯ, ಕಿಡ್ನಿ ಸಮಸ್ಯೆ ಇರುವ ಜನರು ಕೊರೊನಾ ಸೋಂಕಿತರಾದರೆ ಇಂದಿಗೂ ಕೂಡಾ ಸೋಂಕನ್ನು ಎದುರಿಸೋದು ಕಠಿಣವೇ ಸರಿ. ಹಾಗಂತಾ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರೂ ಕೊರೊನಾ ವಿರುದ್ಧ ಜಯ ಸಾಧಿಸಿಬಿಡಬಹುದು ಎಂಬ ಹುಸಿ ನಂಬಿಕೆ ಕೂಡಾ ಬೇಡ..! ಶಾಲೆ, ಕಾಲೇಜು, ಕಚೇರಿಗೆ ಹೋಗುವವರು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲೂ ಕಡ್ಡಾಯವಾಗಿ ಫೇಸ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರಬೇಕು ಎಂಬ ನಿಯಮವನ್ನು ಇನ್ನಷ್ಟು ದಿನ ಪಾಲನೆ ಮಾಡಬೇಕಾದ್ದು ಅತ್ಯಗತ್ಯ. ಇನ್ನು ವಾರಾಂತ್ಯದಲ್ಲಿ ಮಾಲ್ಗಳಲ್ಲಿ, ಥಿಯೇಟರ್ಗಳಲ್ಲಿ, ಹೊಟೇಲ್ಗಳಲ್ಲಿ ಗಿಜಿಗಿಡುವ ಜನರನ್ನು ಕಂಡರೆ ಗಾಬರಿ ಆಗದೆ ಇರದು. ಆದಷ್ಟು ಜನನಿಬಿಡ ಪ್ರದೇಶಗಳಿಗೆ ಹೋಗಬಾರದು, ಹೋಟೆಲ್ಗಳಲ್ಲಿ ತಿನ್ನುವುದನ್ನು ಕಡಿಮೆ ಮಾಡಬೇಕು, ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ತಿಂಡಿ ತಿನ್ನಬೇಕು ಎಂಬ ಎಚ್ಚರಿಕೆಯ ಸಂಗತಿಗಳು ಜನರಿಗೆ ಮರೆತೇ ಹೋಗಿದೆ. ಇನ್ನು ಬಸ್, ರೈಲು, ಮೆಟ್ರೋನಂಥಾ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸೋದನ್ನು ಕಡಿಮೆ ಮಾಡಿ ಆದಷ್ಟೂ ಸ್ವಂತ ವಾಹನಗಳನ್ನು ಅವಲಂಬಿಸಿದರೆ ಉತ್ತಮವಲ್ಲವೇ..? ನಾವು ಎಚ್ಚರಿಕೆಯಿಂದ ಇರಬೇಕು, ಇತರರಿಗೂ ಎಚ್ಚರಿಕೆಯಿಂದ ಇರುವಂತೆ ಹೇಳಬೇಕು.. ಇದು ಈ ಕ್ಷಣದ ಅನಿವಾರ್ಯತೆ.. ಕೊರೊನಾಗೆ ಲಸಿಕೆ ಬಂದಿದೆ ಎಂಬ ಭಂಡ ಧೈರ್ಯ ಬೇಡ.. ನಮಗೆ ಯಾವ ರೋಗವೂ ಇಲ್ಲ, ಕೊರೊನಾ ಬಂದರೂ ಗೆಲ್ಲುವ ಗಟ್ಟಿ ಗುಂಡಿಗೆ ಇದೆ ಎಂಬ ಹುಂಬತನ ಬೇಡ.. ಒಂದು ವೇಳೆ ನೀವು ಸೋಂಕಿತರಾಗಿ, ಸೋಂಕಿನಿಂದ ಮುಕ್ತರಾಗುವಲ್ಲಿ ಯಶಸ್ವಿಯಾದ್ರೂ ಕೂಡಾ, ಚಿಕಿತ್ಸೆಗಾಗಿ ಆಗುವ ವೆಚ್ಚವೆಷ್ಟು ಎಂಬುದರ ಕುರಿತು ಚಿಂತಿಸಿ..! ಕೊರೊನಾ ಸೋಂಕಿತರಾದಾಗ ದೇಹಕ್ಕೆ ಆಗುವ ಹಾನಿ, ಚಿಕಿತ್ಸೆ ವೇಳೆ ಔಷಧಗಳಿಂದ ದೇಹಕ್ಕೆ ಆಗುವ ಕೆಲವೊಂದು ಅಡ್ಡ ಪರಿಣಾಮಗಳ ಬಗ್ಗೆಯೂ ನಾವು ಚಿಂತಿಸಬೇಕಲ್ಲವೇ..? ಜೀವಕ್ಕೂ, ಜೇಬಿಗೂ ಹಾನಿಯಾಗುವ ಸಂದರ್ಭವನ್ನು ನಾವೇ ಏಕೆ ಸೃಷ್ಟಿಸಿಕೊಳ್ಳಬೇಕು..?
from India & World News in Kannada | VK Polls https://ift.tt/38ZXDHM