ಕರುನಾಡ ರೈತಕ್ರಾಂತಿಗೆ ಸಾಕ್ಷಿಯಾದ ಮಲೆನಾಡು; ರೈತ ಮಹಾ ಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್ ಭಾಗಿ

ಶಿವಮೊಗ್ಗ: ರೈತಪರವಾದ ಹೋರಾಟಕ್ಕೆ ಕರ್ನಾಟಕದ ರೈತರು ದಿಲ್ಲಿಗೆ ಬರಬೇಕಾಗಿಲ್ಲ, ಬೆಂಗಳೂರನ್ನೇ ದಿಲ್ಲಿಯನ್ನಾಗಿ ಮಾಡಿಕೊಂಡು ನಿರ್ಣಾಯಕ ಚಳವಳಿ ರೂಪಿಸಬೇಕೆಂದು ರಾಷ್ಟ್ರೀಯ ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ಕರೆ ನೀಡಿದ್ದಾರೆ. ನಗರದ ಸೈನ್ಸ್‌ ಮೈದಾನದಲ್ಲಿ ರೈತಸಂಘ, ಡಿಎಸ್‌ಎಸ್‌ ಸೇರಿದಂತೆ ಹಲವು ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಕೇಂದ್ರ ಸರಕಾರದ ವಿರುದ್ಧ ಶನಿವಾರ ಆಯೋಜಿಸಿದ್ದ ರೈತ ಮಹಾ ಪಂಚಾಯತ್‌ ಉದ್ಘಾಟಿಸಿ ಅವರು ಮಾತನಾಡಿದರು. ದಿಲ್ಲಿಯಲ್ಲಿ ನಾಲ್ಕು ತಿಂಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕದಿಂದ ಬೆಂಬಲ ಸಿಕ್ಕಿರುವುದು ನಮಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ. ಕೇಂದ್ರ ಸರಕಾರವು ರೈತ ಕುಲವನ್ನೇ ನಾಶ ಮಾಡುವ ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ರದ್ದುಪಡಿಸುವುದು ಮತ್ತು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಗೊಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಅದು ನಾಲ್ಕು ತಿಂಗಳಲ್ಲ, ಇನ್ನೂ ಒಂದು ವರ್ಷವಾದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಎಂದರು. ಕೇಂದ್ರ ಸರಕಾರವು ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಎಂಪಿ ಮತ್ತು ಎಂಎಲ್‌ಎಗಳಿಗೆ ವೇತನ ಮತ್ತು ನಿವೃತ್ತಿ ವೇತನವನ್ನು ದುಪ್ಪಟ್ಟುಗೊಳಿಸಿ ಕಾರ್ಮಿಕರು ಮತ್ತು ನೌಕರರ ನಿವೃತ್ತಿ ವೇತನಕ್ಕೆ ಕನ್ನ ಹಾಕಿದೆ. ದೇಶವನ್ನು ಲೂಟಿ ಹೊಡೆಯುವ ಕಂಪನಿಗಳನ್ನು ಸರಕಾರವೇ ಪೋಷಣೆ ಮಾಡುತ್ತಿದೆ. ರೈತರಿಂದ ಭೂಮಿ, ಅವರಿಗೆ ನೀಡುವ ವಿದ್ಯುತ್‌ ಕಸಿದುಕೊಂಡು ಕಾರ್ಪೋರೇಟ್‌ ಕಂಪನಿಗಳಿಗೆ ಧಾರೆ ಎರೆದುಕೊಡುವ ಕಾನೂನು ರೂಪಿಸಿದೆ. ಭೂಮಿ ಕಳೆದುಕೊಂಡ ರೈತರು ಕೃಷಿ ಕೈಬಿಟ್ಟು ಕಾರ್ಪೋರೇಟ್‌ ಕಂಪನಿಗಳಲ್ಲಿ ಕೂಲಿ ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ನಡೆಸಿದೆ ಎಂದು ಆಪಾದಿಸಿದರು. ದಿಲ್ಲಿ ಹೋರಾಟದ ಮತ್ತೊಬ್ಬ ನೇತಾರ ಡಾ. ದರ್ಶನ್‌ ಪಾಲ್‌ ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವು ಕೇವಲ ಉತ್ತರಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಶಿವಮೊಗ್ಗದ ರೈತರ ಶಕ್ತಿ ನಿರೂಪಿಸಿದೆ. ಸ್ವಾತಂತ್ರ್ಯ ನಂತರದಲ್ಲಿ ಇದು ರೈತರ ಎರಡನೇ ಸ್ವಾತಂತ್ರ್ಯ ಹೋರಾಟವೆನಿಸಿಕೊಂಡಿದೆ. ಇಷ್ಟು ದೊಡ್ಡ ಪ್ರತಿರೋಧವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಗೆ ರೈತರ ಶಾಪ ತಟ್ಟದೆ ಬಿಡುವುದಿಲ್ಲ ಎಂದರು. ಯುದ್ಧವೀರ್‌ ಸಿಂಗ್‌ ಮಾತನಾಡಿ, ಕೇಂದ್ರ ಸರಕಾರದ ಹಠಮಾರಿ ಧೋರಣೆಯು ವಿಶ್ವದ ಅತಿದೊಡ್ಡ ರೈತರ ಆಂದೋಲನವನ್ನು ಸೃಷ್ಟಿಸಿದೆ. ಇಡೀ ವಿಶ್ವದ ಗಮನ ಸೆಳೆದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರಕಾರದ ನಡೆಗೆ ಟೀಕೆ ವ್ಯಕ್ತವಾಗಿದೆ. ಯಾವುದೇ ಆಮಿಷ, ಹುನ್ನಾರ, ಕುತಂತ್ರಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಕ್ಕಿಕ್ಕಲು ಪ್ರಯತ್ನಿಸಿದಷ್ಟೂ ನಮ್ಮ ಹೋರಾಟ ಗಟ್ಟಿಗೊಳ್ಳುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಚಾಲಕ ಕೆ.ಪಿ.ಶ್ರೀಪಾಲ್‌, ಸರಕಾರವು ರೈತ ಹೋರಾಟಕ್ಕೆ ಸ್ಪಂದಿಸದೆ ಹೋದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಿಂದ ಬೆಂಗಳೂರಿಗೆ ರೈತರ ಪಾದಯಾತ್ರೆ ರೂಪಿಸಲಾಗುವುದು ಎಂದರು. ಶೋಭಾ ಸುಂದರೇಶ್‌ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಕೆ.ಟಿ.ಗಂಗಾಧರ್‌, ಎಚ್‌.ಆರ್‌.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್‌, ಮಹಾ ಪಂಚಾಯತ್‌ ಸಂಚಾಲಕ ಎಂ.ಶ್ರೀಕಾಂತ್‌, ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಂ.ಗುರುಮೂರ್ತಿ, ಟಿ.ಎಸ್‌.ಹಾಲೇಶಪ್ಪ, ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್‌ ಶ್ರೀಧರ್‌, ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು. ವೇದಿಕೆಯಲ್ಲಿ ರೈತ ಮುಖಂಡರಾದ ಕಡಿದಾಳ್‌ ಶಾಮಣ್ಣ, ಡಾ.ಚಿಕ್ಕಸ್ವಾಮಿ, ಕುರುಬೂರು ಶಾಂತಕುಮಾರ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಎಚ್‌.ಎಂ.ಚಂದ್ರಶೇಖರಪ್ಪ, ಶಾರದಾ ಪೂರ್ಯಾನಾಯ್ಕ್‌, ಮುಖಂಡರಾದ ಆರ್‌.ಎಂ.ಮಂಜುನಾಥ ಗೌಡ ಮತ್ತಿತರರು ಹಾಜರಿದ್ದರು. ಸಂಚಾಲಕ ಎನ್‌.ರಮೇಶ್‌ ಸ್ವಾಗತಿಸಿ, ಕೆ.ಎಲ್‌.ಅಶೋಕ್‌ ನಿರೂಪಿಸಿದರು. ಎಚ್‌.ಸಿ.ಯೋಗೇಶ್‌ ನಿರ್ಣಯಗಳನ್ನು ಮಂಡಿಸಿದರು. ಮಹಾ ಪಂಚಾಯತ್‌ ನಿರ್ಣಯಗಳು ರೈತ ಮಹಾಪಂಚಾಯತ್‌ 10 ನಿರ್ಣಯಗಳನ್ನು ಅಂಗೀಕರಿಸಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಮುಂದಿಟ್ಟಿದೆ.
  • ಕೇಂದ್ರ ಸರಕಾರ ಜಾರಿಗೊಳಿಸಿರುವ 3 ರೈತ ವಿರೋಧಿ ಮತ್ತು ಕಾರ್ಪೋರೇಟ್‌ ಕಂಪನಿಗಳ ಪರವಾದ ಕಾಯಿದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು.
  • ರಾಜ್ಯ ಸರಕಾರ ಜನವಿರೋಧಿ ಭೂ ಸುಧಾರಣೆ, ಎಪಿಎಂಸಿ, ವಿದ್ಯುಚ್ಛಕ್ತಿ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯಿದೆಗಳಿಗೆ ತಂದ ತಿದ್ದುಪಡಿಗಳನ್ನು ಕೂಡಲೆ ರದ್ದುಪಡಿಸಬೇಕು.
  • ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸೌಜನ್ಯಕ್ಕೂ ರೈತ ಸಂಘಟನೆಗಳನ್ನು ಕರೆದು ಮಾತನಾಡುವ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನಡೆಯನ್ನು ಮಹಾಪಂಚಾಯತ್‌ ಖಂಡಿಸುತ್ತದೆ.
  • ಸ್ವಾಮಿನಾಥನ್‌ ಮತ್ತು ಪ್ರಕಾಶ್‌ ಕಮ್ಮರಡಿ ಅವರ ವರದಿಗಳನ್ನು ಆಧರಿಸಿ ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಅದರ ಅನುಷ್ಠಾನ ಕಡ್ಡಾಯಕ್ಕೆ ಕಾನೂನು ಜಾರಿಗೊಳಿಸಬೇಕು.
  • ಬಗರ್‌ ಹುಕುಂ ರೈತರ ಭೂಮಿಗಳನ್ನು ಮತ್ತು ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡಜನರ ಜಾಗಗಳನ್ನು ಕೂಡಲೇ ಮಂಜೂರು ಮಾಡಬೇಕು.
  • ಪರಿಶಿಷ್ಟರ ಭೂಮಿ ಪರಭಾರೆ ತಡೆ ಕಾಯಿದೆಯ ಮೂಲ ಆಶಯಕ್ಕೆ ಧಕ್ಕೆ ತರುವಂತೆ ರೆವಿನ್ಯೂ ನ್ಯಾಯಾಲಯಗಳು ಆದೇಶ ನೀಡುತ್ತಿರುವುದರಿಂದ ಪಿಟಿಸಿಎಲ್‌ ಕಾಯಿದೆಗೆ ತಿದ್ದುಪಡಿ ತಂದು ಮೂಲ ಕಾಯಿದೆಯನ್ನು ಬಲಪಡಿಸಬೇಕು.
  • ಅನ್ನಭಾಗ್ಯ ಯೋಜನೆಯನ್ನು ದುರ್ಬಲಗೊಳಿಸದೆ, ಪಡಿತರ ವ್ಯವಸ್ಯೆ ರದ್ದುಗೊಳಿಸದೆ ಜನಸಾಮಾನ್ಯರಿಗೆ ಎಲ್ಲ ಮೂಲ ಅಗತ್ಯ ಧಾನ್ಯಗಳು ಕಡಿಮೆ ಬೆಲೆಯಲ್ಲಿಲಭ್ಯವಾಗುವಂತೆ ಪಡಿತರ ವ್ಯವಸ್ಥೆ ಬಲಪಡಿಸಬೇಕು.
  • ಮಲೆನಾಡಿನ 33,000 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡುವ ಸಲುವಾಗಿ ಐದು ವರ್ಷದ ಹಿಂದೆ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಗೆ ನೀಡಿದ ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್‌ ನೀಡಬೇಕು.
  • ಪಶ್ಚಿಮಘಟ್ಟ ಮತ್ತು ಮಲೆನಾಡ ತಪ್ಪಲ ಜನರನ್ನು ಅಭದ್ರತೆಯಿಂದ ಬದುಕುವಂತೆ ಮಾಡಿರುವ ಕಸ್ತೂರಿರಂಗನ್‌, ಸೆಕ್ಷನ್‌ - 4, ಹುಲಿ ಯೋಜನೆ, ಅಭಯಾರಣ್ಯ, ರಕ್ಷಿತ ಅರಣ್ಯ ಮುಂತಾದ ಯೋಜನೆಗಳನ್ನು ಕೂಡಲೇ ರದ್ದುಗೊಳಿಸಬೇಕು.
  • ಜನರೊಡನೆ ಸಮಾಲೋಚನೆ ನಡೆಸಿ ಮಲೆ ಮತ್ತು ನಾಡು ಎರಡೂ ಉಳಿಯುವಂತಹ ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕು.
ತಂಪೆರೆದ ಕಲ್ಲಂಗಡಿ, ನೀರು, ಮಜ್ಜಿಗೆರೈತ ಮಹಾಪಂಚಾಯತ್‌ನಲ್ಲಿ ಅಲ್ಲದೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ದಿಲ್ಲಿಯಿಂದ ಆಗಮಿಸಿದ ರೈತ ಮುಖಂಡರೊಂದಿಗೆ ವಿವಿಧ ರಾಜ್ಯಗಳಿಂದ ನೂರಕ್ಕೂ ಹೆಚ್ಚು ಜನರು ಬಂದಿದ್ದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರಿಗೆ ದಾನಿಗಳು ಒಂದು ಲೋಡ್‌ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಂಚಿದರು. ಪ್ರತಿಯೊಬ್ಬರಿಗೂ ನೀರು, ಮಜ್ಜಿಗೆ ಮತ್ತು ಮಂಡಕ್ಕಿ ಪ್ಯಾಕೇಟ್‌ಗಳನ್ನು ವಿತರಿಸಿದರು. ಬಂದೋಬಸ್ತ್‌ಗಾಗಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದರೂ ಅವರಿಗೆ ಕೆಲಸ ಕೊಡದೆ ಮಹಾಪಂಚಾಯತ್‌ನ ಕಾರ್ಯಕರ್ತರು ಜನರನ್ನು ನಿಯಂತ್ರಿಸಿದರು. ಬಸ್‌ಗಿಂತ ಸ್ವಂತ ವಾಹನಗಳಲ್ಲಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.


from India & World News in Kannada | VK Polls https://ift.tt/3qZSgyA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...