ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮಂಗಳವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಆ ಮೂಲಕ ಕೋವಿಡ್-19 ಲಾಕ್ಡೌನ್ ಬಳಿಕ ತವರು ನೆಲದಲ್ಲಿ ನಡೆಯುತ್ತಿರುವ ಮೊದಲನೇ ಓಡಿಐ ಇದಾಗಿದೆ. ಮೊದಲನೇ ಹಣಾಹಣಿಗೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದು ಟೀಮ್ ಮ್ಯಾನೇಜ್ಮೆಂಟ್ಗೆ ಕಠಿಣ ಕಾರ್ಯವಾಗಿದೆ. ಮೊದಲನೇ ಹಣಾಹಣಿಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇನಿಂಗ್ಸ್ ಆರಂಭಿಸಲಿದ್ದಾರೆಂದು ಈಗಾಗಲೇ ಕೊಹ್ಲಿ ಸೋಮವಾರ ಬಹಿರಂಗಪಡಿಸಿದ್ದಾರೆ. ಇನ್ನುಳಿದ ಎಂಟು ಆಟಗಾರರನ್ನು ಆಯ್ಕೆ ಮಾಡುವುದು ಇನ್ನು ಬಾಕಿ ಇದೆ. ಇದರ ನಡುವೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ , ಮೊದಲ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಹಾಗೂ ಕುಲ್ದೀಪ್ ಇಬ್ಬರೂ ಕಣಕ್ಕೆ ಇಳಿಯಬೇಕೆಂದು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, ಕುಲ್ದೀಪ್ ಯಾದವ್ ಅವರನ್ನು ಓಡಿಐನಲ್ಲಿ ಆಡಿಸದೇ ಇದ್ದಲ್ಲಿ ಅವರನ್ನು ತಂಡದಲ್ಲಿ ಇಟ್ಟುಕೊಳ್ಳುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. "ಮೊದಲನೇ ಬೌಲಿಂಗ್ ವಿಭಾಗದ ಬಗ್ಗೆ ನಿಮಗೆ ಅನಿಸಿದ್ದು ಮಾಡಿ ಆದರೆ, ಸ್ಪಿನ್ ವಿಭಾಗದಲ್ಲಿ ದಯವಿಟ್ಟು ಕುಲ್ದಿಪ್ ಹಾಗೂ ಚಹಲ್ ಇಬ್ಬರನ್ನೂ ಕಣಕ್ಕೆ ಇಳಿಸಿ. ಒಂದು ವೇಳೆ ಇಲ್ಲಿಯೂ ನೀವು ಅವರನ್ನು ಆಡಿಸದೇ ಇದ್ದರೆ, ಮತ್ತೇಕೆ ಅವರು ತಂಡದಲ್ಲಿ ಇರಬೇಕು. ಟೆಸ್ಟ್ ಹಾಗೂ ಟಿ20 ಸರಣಿಗಳಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. ಇದನ್ನು ಪರಿಗಣಿಸಿ ಕುಲ್ದೀಪ್ಗೆ ಚಾನ್ಸ್ ಕೊಡಬೇಕು," ಎಂದು ಚೋಪ್ರಾ ಆಗ್ರಹಿಸಿದ್ದಾರೆ. ವೇಗಿ ನವದೀಪ್ ಸೈನಿ, ದೀಪಕ್ ಚಹರ್ ಮತ್ತು ಎಡಗೈ ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಭಾರತ ಏಕದಿನ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಚೋಪ್ರಾ ಇದೇ ವೇಳೆ ಪ್ರಶ್ನಿಸಿದ್ದಾರೆ. "ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದ ನವದೀಪ್ ಸೈನಿ, ಓಡಿಐ ತಂಡದಲ್ಲಿ ಏಕೆ ಇಲ್ಲ ಎಂಬ ಪ್ರಶ್ನೆ ನನಗೆ ಉದ್ಭವವಾಗಿದೆ. ಸೈನಿ ಒಂದೇ ಒಂದು ಪಂದ್ಯ ಕೂಡ ಆಡಿರಲಿಲ್ಲ. ಇನ್ನು ದೀಪಕ್ ಚಹರ್ ಕಥೆ ಕೂಡ ಇದೇ ರೀತಿ ಇದೆ. ಅಕ್ಷರ್ ಪಟೇಲ್ ಟೆಸ್ಟ್ ಹಾಗೂ ಟಿ20 ತಂಡಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ, ಅವರು ಓಡಿಐ ತಂಡದಲ್ಲಿ ಏಕಿಲ್ಲ," ಎಂದು ಮಾಜಿ ಆರಂಭಿಕ ಬ್ಯಾಟ್ಸ್ಮನ್ ಪ್ರಶ್ನಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಶಿಖರ್ ಧವನ್ ಮೂರು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಬೇಕೆಂದ ಅವರು, ಎಡಗೈ ಆಟಗಾರನನ್ನು ಬೆಂಬಲಿಸಿದರು. ಟಿ20 ಸರಣಿಯ ಮೊದಲನೇ ಪಂದ್ಯದ ಬಳಿಕ ಶಿಖರ್ ಧವನ್ ಅವರನ್ನು ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿರಲಿಲ್ಲ. "ಮೂರೂ ಓಡಿಐ ಪಂದ್ಯಗಳಲ್ಲಿ ಶಿಖರ್ ಧವನ್ ಓಪನಿಂಗ್ ಮಾಡಬೇಕು. ಏಕೆಂದರೆ ಅವರು ಆಡುತ್ತಿರುವುದು ಒಂದೇ ಒಂದು ಮಾದರಿ ಮಾತ್ರ. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು," ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vPqqJ1