​​ಶಿವಸೇನೆಯವರಿಗೆ ಕನ್ನಡದ ಅಕ್ಷರಮಾಲೆ ಕಲಿಸುತ್ತೇವೆ: ಸಚಿವ ಆರ್.ಅಶೋಕ್ ಗುಡುಗು

ಬೆಳಗಾವಿ: ಲೋಕಸಭೆ ಉಪ ಚುನಾವಣೆ ಟಿಕೆಟ್ ಪೈಪೋಟಿಯಲ್ಲಿ ಸುರೇಶ್ ಅಂಗಡಿ ಕುಟುಂಬ ಸೇರಿದಂತೆ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿಯ ಗೆಲುವಿನ ಕ್ಷೇತ್ರವಾದ್ದರಿಂದ ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಅಭ್ಯರ್ಥಿ ಬಗ್ಗೆ ಅರುಣ ಸಿಂಗ್ ಜೊತೆಗೆ ನಾನೂ ಒನ್ ಟು ಒನ್ ಮಾತಾಡಿ ಚರ್ಚಿಸಿದ್ದೇನೆ. ನನ್ನ ದೃಷ್ಟಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಎನ್ನುವ ಸಲಹೆ ನೀಡಿದ್ದೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಮೊದಲ ಆದ್ಯತೆ ಇದೆ. ಅದೇ ರೀತಿ ದಿ.ಸುರೇಶ ಅಂಗಡಿಯವರ ಕುಟುಂಬ ಕೂಡ ಪಕ್ಷದೊಂದಿಗೆ ಉತ್ತಮ ಒಡನಾಟ ಹೊಂದಿದೆ. ಈ ವಿಚಾರವನ್ನೂ ಪಕ್ಷದ ಗಮನಕ್ಕೆ ತರಲಾಗಿದೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ನಾವೆಲ್ಲರು ಸಹಕಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಕೋರ್ ಕಮಿಟಿ ಮೀಟಿಂಗ್‍ನಲ್ಲಿ 3 ಜನ ಗೆಲ್ಲುವಂತಹ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಹೈಕಮಾಂಡ್‍ಗೆ ಕಳಿಸಿದ್ದೇವೆ ಎಂದು ಹೇಳಿದರು. ಶಿವಸೇನೆ ಪುಂಡಾಟಿಕೆ ಕಡಿವಾಣ ಇನ್ನು ಗಡಿ ಭಾಗದಲ್ಲಿ ಶಿವಸೇನೆ ಪುಂಡಾಟಿಕೆ ಕಡಿವಾಣ ಹಾಕಲು ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಶಿವಸೇನೆ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಭಾಗದಲ್ಲಿ ಶಿವಸೇನೆ ಪುಂಡಾಟಿಕೆ ನಿರಂತರವಾಗಿ ನಡೆಯುತ್ತಿದೆ. ಕಠಿಣ ಕ್ರಮ ಜರುಗಿಸಿ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಪುಂಡಾಟಿಕೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ಸೂಚನೆ ಕೊಡುತ್ತೇನೆ. ಬೆಳಗಾವಿ ಗಡಿಯಲ್ಲಿ ಮರಾಠಿಗರು, ಕನ್ನಡಿಗರು, ಉರ್ದು ಭಾಷಿಕರು ಸೇರಿದಂತೆ ಎಲ್ಲರೂ ಸೌಹಾರ್ಧತೆಯಿಂದ ಇದ್ದಾರೆ. ಅವರೆಲ್ಲಾ ಶಾಂತಿ ಬಯಸುತ್ತಾರೆ. ಆದರೆ, ಸೌಹಾರ್ದತೆ ಕೆಡಿಸುವ ಶಿವಸೇನೆ ಕಾರ್ಯಕರ್ತರಿಗೆ ಮಾತ್ರ ಸರಕಾರ ತಕ್ಕ ಪಾಠ ಕಲಿಸಲಿದೆ. ಶಿವಸೇನೆಯವರಿಗೆ ಎಬಿಸಿಡಿಯಿಂದ ಹಿಡಿದು ಕನ್ನಡದ ಅಕ್ಷರಮಾಲೆ ಎಲ್ಲವನ್ನು ಕಲಿಸುತ್ತೇವೆ ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಶಿವಸೇನೆ ನಿಷೇಧಿಸುವ ವಿಚಾರವಾಗಿ ಪ್ರತಿಕ್ರಯಿಸಿದ ಸಚಿವ ಆರ್.ಅಶೋಕ್, ಶಿವಸೇನೆ ಅದೊಂದು ರಾಜಕೀಯ ಪಕ್ಷ. ಅದನ್ನು ನಿಷೇಧಿಸುವ ಅಧಿಕಾರ, ಅವಕಾಶ ಇದಿಯೋ ಇಲ್ಲವೋ ಗೊತ್ತಿಲ್ಲ. ಇದರ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಒಟ್ಟಿನಲ್ಲಿ ಕನ್ನಡ ಭಾಷೆ, ನೆಲ, ಜಲ ರಕ್ಷಣೆ ವಿಷಯದಲ್ಲಿ ಯಾವುದೇ ಬೆಲೆ ತೆತ್ತಾದರೂ ರಕ್ಷಣೆ ಮಾಡಲು ನಮ್ಮಸರಕಾರ ಬದ್ಧವಾಗಿದೆ ಎಂದರು.


from India & World News in Kannada | VK Polls https://ift.tt/3s8EJpC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...