ಎತ್ತಿನಹೊಳೆ ಕಾಮಗಾರಿಯ ಸ್ಫೋಟದ ಶಬ್ದಕ್ಕೆ ಮೂರು ತಿಂಗಳ ಹೆಣ್ಣು ಮಗು ಸಾವು!; ಶವಸಂಸ್ಕಾರಕ್ಕೂ ಅಡ್ಡಿ!

ಎನ್‌.ಮೂರ್ತಿ ಕೊರಟಗೆರೆ: ಎತ್ತಿನಹೊಳೆ ಕಾಮಗಾರಿಯ ಬ್ಲಾಸ್ಟಿಂಗ್‌ ಶಬ್ದದಿಂದ 3 ತಿಂಗಳ ಹಸುಗೂಸು ಗುಡಿಸಲಿನಲ್ಲಿಯೇ ಮೃತಪಟ್ಟಿರುವ ಆತಂಕಕಾರಿ ಘಟನೆ ಜಿಲ್ಲೆಯ ಪಟ್ಟಣ ಸಮೀಪದ ಜಂಪೇನಹಳ್ಳಿ ಸಮೀಪ ನಡೆದಿದೆ. ಘಟನೆಯ ಬಗ್ಗೆ ಅರಿವೇ ಇಲ್ಲದ ಅಮಾಯಕ ದಲಿತ ಕುಟುಂಬ ತನ್ನ ಪುಟ್ಟ ಮಗುವನ್ನು ಸುವರ್ಣಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮೃತ ಮಗುವಿನ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ ವೇಳೆ ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಅಮಾನವೀಯ ಘಟನೆಯೂ ನಡೆದಿದೆ. ಆ ಜಾಗದ ಸೆಕ್ಯುರಿಟಿಯೊಬ್ಬ ಶಬ್ದದ ತೀವ್ರತೆಗೆ ಮೃತಪಟ್ಟ 3 ತಿಂಗಳ ಹಸುಗೂಸಿನ ಮೃತ ಮಗುವಿನ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿ ತಾನೊಬ್ಬ ಮನುಷ್ಯನೇ ಅಲ್ಲದಂತೆ ವರ್ತಿಸಿದ್ದಾನೆ. ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಸಮೀಪದ ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆಯ ಬ್ರಿಡ್ಜ್‌ನ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್‌ಲೈನ್‌ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನೆಲೆ ಶನಿವಾರ ರಾತ್ರಿ ಸ್ಥಳೀಯರಿಗೆ ಮಾಹಿತಿಯೇ ನೀಡದೇ ಬ್ಲಾಸ್ಟಿಂಗ್‌ನ ಕೆಲಸ ನಡೆದಿದೆ. ಬ್ಲಾಸ್ಟಿಂಗ್‌ ಕರ್ಕಶ ಶಬ್ದದಿಂದ ಬೆಚ್ಚಿಬಿದ್ದ 3 ತಿಂಗಳ ಹಸುಗೂಸು ಹೆಣ್ಣು ಮಗು ಮನೆಯಲ್ಲಿಯೇ ಮೃತಪಟ್ಟಿದೆ. ಬ್ಲಾಸ್ಟಿಂಗ್‌ ಸ್ಥಳದಿಂದ ಕೇವಲ 50 ಮೀಟರ್‌ ದೂರದಲ್ಲಿಯೇ ಕುಟುಂಬ ವಾಸವಿತ್ತು. ಈ ನೋವಿನ ವಿರುದ್ಧ ಪ್ರಶ್ನಿಸುವ ಶಕ್ತಿಯಿಲ್ಲದ ದಲಿತ ಕುಟುಂಬವೊಂದು ದಾರಿಕಾಣದೇ ಸುವರ್ಣಮುಖಿ ನದಿಯ ರಾಜಕಾಲುವೆ ದಡೆಯಲ್ಲಿ ಭಾನುವಾರ ಮಗುವಿನ ಅಂತ್ಯಕ್ರಿಯೆ ನಡೆಸಲು ಮುಂದಾಗಿದೆ. ಮಗುವಿನ ಅಂತ್ಯಕ್ರಿಯೆಗೆ ಗುಂಡಿ ತೆಗೆದು ಬಾಳೆ ಎಲೆ ಜೋಡಿಸಿ ಮೃತ ಹೆಣ್ಣು ಮಗುವನ್ನು ಗುಂಡಿಯೊಳಗೆ ಇಳಿಸಿದ್ದಾರೆ. ನಂತರ ಅಂತ್ಯಕ್ರಿಯೆ ನಡೆಸಲು ಮುಂದಾದ ವೇಳೆ ಶಾಹಿ ಗಾರ್ಮೆಂಟ್ಸ್‌ನ ಸೆಕ್ಯುರಿಟಿ ಶಿವಲಿಂಗಯ್ಯ ಎಂಬಾತ ಗುಂಡಿಯಿಂದ ಬಲವಂತವಾಗಿ ಮೃತದೇಹವನ್ನು ಹೊರಗೆಡೆ ತೆಗೆಸಿ ಅಮಾನವೀಯವಾಗಿ ವರ್ತಿಸುವ ಮೂಲಕ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಕೆಲಸ ಮಾಡಿದ್ದಾನೆ. ಜಮೀನು ಮತ್ತು ಮನೆಯೇ ಇಲ್ಲದಿರುವ ದಲಿತ ಕುಟುಂಬದ ಮಗುವಿನ ಅಂತ್ಯಕ್ರಿಯೆ ನಡೆಸುತ್ತಿರುವ ವೇಳೆ ಸೆಕ್ಯುರಿಟಿ ತನ್ನ ಮನುಷ್ಯತ್ವದ ಗುಣವನ್ನೇ ಮರೆತು ತೋರಿಸಿರುವ ದುರ್ವರ್ತನೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುಷ್ಯತ್ವ ಮರೆತು ಮಾನವಹಕ್ಕು ಉಲ್ಲಂಘನೆ ಮಾಡಿರುವ ಸೆಕ್ಯುರಿಟಿಯ ಜತೆ ಗಾರ್ಮೆಂಟ್ಸ್‌ನ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಸೀೕಲ್ದಾರ್‌ಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ತಹಸೀಲ್ದಾರರು ತಕ್ಷಣ ಗಾರ್ಮೆಂಟ್ಸ್‌ನ ಮಾಲೀಕರ ಬಗ್ಗೆ ವಿಚಾರಿಸಿದರೆ, ಸೆಕ್ಯುರಿಟಿ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. ಹಾಗಾಗಿ, ಇನ್ನಷ್ಟೇ ಮಾಲೀಕರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಗಾರ್ಮೆಂಟ್ಸ್‌ ದಾಖಲೆಯೇ ಅಲಭ್ಯ!ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಯ ಜತೆ ದಲಿತರ ಸ್ಮಶಾನವು ನಾಶವಾಗಿದೆ. ಜೆಟ್ಟಿ ಅಗ್ರಹಾರ ಗ್ರಾಪಂಗೆ ಮಾಹಿತಿಯೇ ಇಲ್ಲದೆ ಸರಕಾರಿ ಜಾಗದಲ್ಲಿಅಕ್ರಮವಾಗಿ ಕಾಂಪೌಂಡು ನಿರ್ಮಾಣ ಮಾಡಲಾಗಿದೆ. ಆದರೆ ಗಾರ್ಮೆಂಟ್ಸ್‌ಗೆ ಸಂಬಂಧಿಸಿದ ದಾಖಲೆ ಅಥವಾ ನಾಮಫಲಕದ ಬಗ್ಗೆ ಖುದ್ದು ತಹಸೀಲ್ದಾರ್‌ ಕೇಳಿದರೂ ಸಹ ಮಾಲೀಕರು ಕೊಡದೇ ಇರುವುದೇ ಅಕ್ರಮ ಒತ್ತುವರಿಗೆ ಸಾಕ್ಷಿಯಾಗಿದೆ.


from India & World News in Kannada | VK Polls https://ift.tt/3rbCJM2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...