ಸ್ಪೀಕರ್ ಸಂಧಾನ ಸಭೆ ವಿಫಲ: ಬೊಮ್ಮಾಯಿ ಪರ ನಿಲ್ಲಲು ಸಚಿವರಿಗೆ ಸಿಎಂ ಆದೇಶ!

ಬೆಂಗಳೂರು: ಮಾಜಿ ಸಚಿವ ಇದ್ದಾರೆ ಎಂದು ಹೇಳಲಾದ ಅಶ್ಲೀಲ ಸಿ.ಡಿಯನ್ನು, ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಪ್ರದರ್ಶನ ಮಾಡಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೇ ಕಾಂಗ್ರೆಸ್ ಸದಸ್ಯರು ಜಾರಕಿಹೊಳಿ ಸಿ.ಡಿ ಪ್ರದರ್ಶನ ಮಾಡಿದ್ದರಿಂದ ಭಾರೀ ಕೋಲಾಹಲ ಉಂಟಾಯಿತು. ಪರಿಣಾಮವಾಗಿ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು. ಇನ್ನು ಮತ್ತೆ ಕಲಾಪವನ್ನು ಆರಂಭಿಸಲು ಬಯಸಿರುವ ಸ್ಪೀಕರ್ ಕಾಗೇರಿ, ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಸಂಧಾನ ನಡೆಸಲು ಮುಂದಾಗಿದ್ದು, ಕಾಂಗ್ರೆಸ್ ಪಟ್ಟು ಹಿಡಿದ ಕಾರಣಕ್ಕೆ ಈ ಸಂಧಾನ ಸಭೆ ವಿಫಲವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸ್ಪೀಕರ್ ಕಾಗೇರಿ, ಸಂಧಾನ ಏರ್ಪಡಿಸಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಸಲು ನಿರಾಕರಿಸಿದರು. ಕಲಾಪ ಸುಗಮವಾಗಿ ನಡೆಯುವುದು ಅತ್ಯವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಿ.ಡಿ ಜಗಳವನ್ನು ನಿಲ್ಲಿಸುವಂತೆ ಸ್ಪೀಕರ್ ಕಾಗೇರಿ ಉಭಯ ಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. ಆದರೂ ಸಂಧಾನ ಸಭೆ ಅಆಂತಿಮವಾಗಿ ವಿಫಲವಾಯಿತು. ಸ್ಪೀಕರ್ ಸಂಧಾನ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕೆಲವು ಕಾಂಗ್ರೆಸ್ ಸದಸ್ಯರು ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದ ಆಡಳಿತ ಪಕ್ಷದ ಕೆಲವು ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಬೇಡಿಕೆಗಳೇನು?: ಸಂಧಾನ ಸಭೆಯಲ್ಲಿ ಕಾಂಗ್ರೆಸ್ ಮೂರು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ. ಮೊದಲನೆಯದಾಗಿ ಸಂತ್ರಸ್ತ ಯುವತಿ ಹೇಳಿಕೆ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಾಗಬೇಕು. ಆರು ಜನ ಸಚಿವರು ರಾಜೀನಾಮೆ ನೀಡಬೇಕು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಿ.ಡಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತು. ಆದರೆ ಕಾಂಗ್ರೆಸ್ ಬೇಡಿಕೆಗಳಿಗೆ ಸರ್ಕಾರ ಒಪ್ಪದ ಕಾರಣ ಸ್ಪೀಕರ್ ಕರೆದಿದ್ದ ಸಂಧಾನ ಸಭೆ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಮತ್ತೆ ಧರಣಿ ಮುಂದುವರೆಸಲು ಕಾಂಗ್ರೆಸ್ ನಿರ್ಧರಿಸಿದೆ. ಬೊಮ್ಮಾಯಿ ಪರ ನಿಲ್ಲುವಂತೆ ಸಿಎಂ ಸೂಚನೆ: ಇನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಯಶಸ್ವಿಯಾಗಿ ಎದುರಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸದನದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪರ ಗಟ್ಟಿಯಾಗಿ ನಿಲ್ಲುವಂತೆ ಸಚಿವರಿಗೆ ಸೂಚಿಸಿದ್ದಾರೆ. ಬೊಮ್ಮಾಯಿ ಏಕಾಂಗಿಯಾಗಿ ಕಾಂಗ್ರೆಸ್ ಸದಸ್ಯರನ್ನು ಎದುರಿಸುತ್ತಿದ್ದು, ಇದರ ಬದಲಾಗಿ ಸಾಂಘಿಕವಾಗಿ ಕಾಂಗ್ರೆಸ್‌ನ್ನು ಎದುರಿಸಲು ಸಿಎಂ ಬಿಎಸ್‌ವೈ ಸಚಿವರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸಿ.ಡಿ ಪ್ರಕರಣವನ್ನೇ ಮುಂದಿಟ್ಟುಕೊಂಡು ಧರಣಿ ನಡೆಸುವುದು ಖಚಿತವಾಗಿದ್ದು, ಬೊಮ್ಮಾಯಿ ಪರ ನಿಂತು ಕಾಂಗ್ರೆಸ್ ಧ್ವನಿ ಅಡಗಿಸಲು ಮುಂದಾಗುವಂತೆ ಸಿಎಂ ಆದೇಶ ನೀಡಿದ್ದಾರೆ.


from India & World News in Kannada | VK Polls https://ift.tt/2PkghTX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...