ಬೆಂಗಳೂರು: ವನ್ಯಜೀವಿ ಹಾಗೂ ಮಾನವನ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಲಿಡಾರ್ ತಂತ್ರಜ್ಞಾನ ಬಳಸಿ ಪ್ರಾಣಿಗಳಿರುವಲ್ಲಿಯೇ ಆಹಾರ-ನೀರು ಒದಗಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ನಗರದಲ್ಲಿ ಭಾನುವಾರ ಈಶ ಫೌಂಡೇಷನ್ನ 'ಕಾವೇರಿ ಕೂಗು' ಅಭಿಯಾನದ 2ನೇ ಹಂತದ ಕಾರ್ಯಕ್ರಮದಲ್ಲಿ ಮಾತನಾಡಿ, ''ದೇಶದಲ್ಲಿ ವನ್ಯಜೀವಿ ಮತ್ತು ಮಾನವನ ನಡುವೆ ಸಂಘರ್ಷ ಹೆಚ್ಚುತ್ತಿದೆ. ಆಹಾರ, ನೀರು ಅರಸಿ ಪ್ರಾಣಿಗಳು ನಗರ ಪ್ರವೇಶಿಸುತ್ತಿವೆ. ಈ ಹಿನ್ನೆಲೆಯಲ್ಲಿ ಲಿಡಾರ್ ತಂತ್ರಜ್ಞಾನವನ್ನು ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿದೆ''ಎಂದರು. ಪ್ರತಿ ವರ್ಷ 500 ಜನರ ಸಾವು ''ಮಾನವ, ಆನೆ ಸಂಘರ್ಷದಲ್ಲಿ ಪ್ರತಿ ವರ್ಷ 500 ಜನ ಸಾವಿಗೀಡಾಗುತ್ತಿದ್ದರೆ. 100 ಆನೆಗಳು ಮರಣ ಹೊಂದುತ್ತಿವೆ. ಲಿಡಾರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್ ) ತಂತ್ರಜ್ಞಾನವು ಅರಣ್ಯಪ್ರದೇಶದ ಸಂಪೂರ್ಣ ಚಿತ್ರಣ ನೀಡುತ್ತದೆ. ನೀರಿನ ಲಭ್ಯತೆ ಎಲ್ಲಿದೆ ಅಥವಾ ನೀರಿನ ಒದಗಿಸಲು ಇರುವ ಸೂಕ್ತ ಸ್ಥಳ ಯಾವುದು, ಪ್ರಾಣಿಗಳಿಗೆ ಹುಲ್ಲುಅಥವಾ ಆಹಾರ ಯಾವ ಸ್ಥಳದಲ್ಲಿ ಸಿಗುತ್ತದೆ ಎಂಬುದನ್ನು ನಿಖರವಾಗಿ ತಿಳಿದು ಒದಗಿಸಲಾಗುತ್ತದೆ'' ಎಂದರು. ಸಿಎಂ ಯಡಿಯೂರಪ್ಪ ಮಾತನಾಡಿ ''ಅರಣ್ಯ ಸಂರಕ್ಷಣೆಯ ಉದ್ದೇಶಕ್ಕೆ ಈ ಬಾರಿಯ ಬಜೆಟ್ನಲ್ಲಿ2,945 ಕೋಟಿ ರೂ. ಮೀಸಲಿಡಲಾಗಿದೆ. 2019ರಲ್ಲಿ ರಾಜ್ಯದಲ್ಲಿ 1,025 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಅಬಿವೃದ್ಪಡಿಸುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದೇವೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟು ಮೂರು ವರ್ಷ ಪೋಷಿಸುವ ರೈತರಿಗೆ ಪ್ರತಿ ಸಸಿಗೆ 125 ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆ ಮೂಲಕ ನೀಡಲಾಗುತ್ತಿದೆ'' ಎಂದು ಹೇಳಿದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ ''ಅಭಿವೃದ್ಯ ಹೆಸರಲ್ಲಿ ನಾವು ಕಾಂಕ್ರಿಟ್ ಕಾಡುಗಳನ್ನು ಸೃಷ್ಟಿಸುತ್ತಿದ್ದೇವೆ. ನಾವು ಉಳಿಯಬೇಕೆಂದರೆ ಜಲಮೂಲ, ಪರಿಸರ ಸಂರಕ್ಷಿಸಲೇಬೇಕಾಗಿದೆ,'' ಎಂದರು. ಈಶ ಫೌಂಡೇಷನ್ ಸ್ಥಾಪಕ ಜಗ್ಗಿ ವಾಸುದೇವ್, ''2019ರ ಸೆಪ್ಟೆಂಬರ್ನಲ್ಲಿ ಕಾವೇರಿ ಕೂಗು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅವಯಲ್ಲಿಕಾವೇರಿ ಕೊಳ್ಳದ 189 ತಾಲೂಕುಗಳಲ್ಲಿ1.1 ಕೋಟಿ ಸಸಿಗಳನ್ನು ನೆಡಲಾಗಿದೆ. 33 ಸಾವಿರ ರೈತರು ಅಭಿಯಾನದಲ್ಲಿಪಾಲ್ಗೊಂಡಿದ್ದಾರೆ'' ಎಂದು ಮಾಹಿತಿ ನೀಡಿದರು. ''12 ವರ್ಷಗಳ ಈ ಅಭಿಯಾನದಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅರಣ್ಯಕೃಷಿಯ ಮೂಲಕ ರೈತರ ಆದಾಯವನ್ನು 8 ಪಟ್ಟು ಹೆಚ್ಚಿಸುವ ಉದ್ದೇಶವಿದೆ. 166 ದೇಶಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ, ಸಂಗ್ರಹವಾದ ಒಟ್ಟು ಮೊತ್ತವೆಷ್ಟು ಎಂಬುದರ ಬಗ್ಗೆ ಇನ್ನೂ ಲೆಕ್ಕಪರಿಶೋಧನೆ ನಡೆಯುತ್ತಿದೆ'' ಎಂದು ಹೇಳಿದರು. ''ನದಿ ತಿರುವು ಯೋಜನೆಗಳು ನಿಸರ್ಗಕ್ಕೆ ಮಾರಕ. ಪ್ರಕೃತಿಯ ಅಸಮತೋಲನಕ್ಕೆ ಮೂಲ ಕಾರಣ. ಭಾರತದಂತಹ ರಾಷ್ಟ್ರಗಳಿಗೆ ಈ ಯೋಜನೆಗಳು ಒಗ್ಗುವುದಿಲ್ಲ. ಆದರೂ ಅನಿವಾರ್ಯವಾಗಿದೆ'' ಎಂದರು. ಬೆಂಗಳೂರಿನ ವೃಷಾಭವತಿ ನದಿ ಉಗಮಸ್ಥಾನದ ಬಗ್ಗೆ ಮಾತನಾಡಿದ ಸದ್ಗುರು ''ನದಿಯ ಉಗಮ ಸ್ಥಾನ ಎಲ್ಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೊಂದು ನೋವಿನ ಸಂಗತಿ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ'' ಎಂದು ಒತ್ತಾಯಿಸಿದರು. ಕೃಷಿಯಲ್ಲಿ ಸಾಧನೆ ಮಾಡಿದ ಚಂದ್ರಶೇಖರ್, ಎಂ.ಎಸ್, ಮಂಗಳಾ, ನಾಗರಾಜು, ಕಾಂತರಾಜು ಪಟೇಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
from India & World News in Kannada | VK Polls https://ift.tt/2PgH43u