‘ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳೋಕಾಗದಿದ್ರೆ ರೇಸ್‌ ಚಟುವಟಿಕೆ ನಿಲ್ಲಿಸಿ’; ಟರ್ಫ್‌ ಕ್ಲಬ್‌ಗೆ ಹೈಕೋರ್ಟ್‌ ಚಾಟಿ

ಬೆಂಗಳೂರು: ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳಲಿಕ್ಕಾಗದಿದ್ದರೆ ರೇಸ್‌ ಚಟುವಟಿಕೆಗಳನ್ನು ನಿಲ್ಲಿಸಿ ಅವುಗಳನ್ನು ಸೂಕ್ತ ವ್ಯವಸ್ಥೆ ಇರುವ ಕಡೆಗೆ ಸ್ಥಳಾಂತರಿಸಿ ಎಂದು ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ)ಗೆ ಚಾಟಿ ಬೀಸಿದೆ. ಕಂಪ್ಯಾಷನ್‌ ಅನ್‌ಲಿಮಿಟೆಡ್‌ ಪ್ಲಸ್‌ ಆ್ಯಕ್ಷನ್‌ (ಕ್ಯೂಪಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ ಕುದುರೆಗಳ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಡಾ. ಕ್ಯಾಪ್ಟನ್‌ ರವಿ ರಾಯದುರ್ಗ ಅವರ ಶಿಫಾರಸುಗಳನ್ನು ಪಾಲಿಸಲು ಕಷ್ಟಸಾಧ್ಯ ಎಂಬರ್ಥದಲ್ಲಿ ಬಿಟಿಎಫ್‌ ಜಂಟಿ ಕಾರ್ಯದರ್ಶಿ ನಾಗೇಶ್‌ಬಾಬು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಗಮನಿಸಿದ ಪೀಠ, ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಬಿಟಿಸಿ ತನ್ನ ಅಫಿಡವಿಟ್‌ನಲ್ಲಿ ಕುದುರೆಗಳ ಲಾಯ ನವೀಕರಿಸಲು ಅಥವಾ ಹೊಸದಾಗಿ ನಿರ್ಮಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಅದಕ್ಕೆ ಸರಕಾರದಿಂದ ಅನುಮತಿ ಪಡೆಯಬೇಕಿದೆ. ಹೊಸ ಲಾಯ ನಿರ್ಮಿಸಬೇಕಿದ್ದರೆ ವರ್ಷ ಬೇಕಾಗುತ್ತದೆ, ಹಣಕಾಸಿನ ಕೊರತೆಯೂ ಇದೆ ಎಂದು ಬರೀ ನೆಪಗಳನ್ನೇ ಹೇಳಿದೆ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಪರೋಕ್ಷವಾಗಿ ವೈದ್ಯಾಧಿಕಾರಿ ಶಿಫಾರಸುಗಳನ್ನು ಪಾಲಿಸಲು ಅಸಾಧ್ಯ ಎಂದು ಬಿಟಿಸಿ ತಿಳಿಸಿದೆ. ಬಿಟಿಸಿ ಕುದುರೆಗಳಿಂದಲೇ ಹಣ ಸಂಪಾದಿಸುತ್ತಿದ್ದರೂ ಅವುಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಶಿಫಾರಸಿನಲ್ಲಿ ಶೇ.80 ರಷ್ಟು ಕುದುರೆಗಳ ಲಾಯ ಸುರಕ್ಷಿತವಲ್ಲ ಎಂದು ಹೇಳಲಾಗಿದೆ. ನಿಮಗೆ ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ರೇಸ್‌ ಚಟುವಟಿಕೆಗಳನ್ನು ನಿಲ್ಲಿಸಿ, ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ. ಇಲ್ಲದಿದ್ದರೆ ಬಿಟಿಎಫ್‌ ಪದಾಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು. ಪ್ರಾಣಿಗಳ ಕ್ಷೇಮವಷ್ಟೇ ನಮ್ಮ ಉದ್ದೇಶ. ಹಾಗಾಗಿ ಸೂಕ್ತ ಸೌಲಭ್ಯಗಳಿರುವ ಜಾಗಕ್ಕೆ ಕುದುರೆಗಳನ್ನು ಸ್ಥಳಾಂತರಿಸುವ ಕುರಿತು ಬಿಟಿಸಿ ತನ್ನ ನಿಲುವು ತಿಳಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಏ.1ಕ್ಕೆ ಮುಂದೂಡಿತು.


from India & World News in Kannada | VK Polls https://ift.tt/3d59eqn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...