ಪ್ರಮೋದ ಹರಿಕಾಂತ ಬೆಳಗಾವಿ ಬೆಳಗಾವಿ: ಕೊನೆ ಗಳಿಗೆಯಲ್ಲಿ ದಿ. ಸುರೇಶ್ ಅಂಗಡಿ ಅವರ ಪತ್ನಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ಹೈ ಕಮಾಂಡ್ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದೆ. ಅದರ ಜತೆಯಲ್ಲಿಯೇ ಅಂಗಡಿ ಕುಟುಂಬಕ್ಕೆ ಮತ್ತೊಮ್ಮೆ ಅದೃಷ್ಟ ಒಲಿದಿದೆ. ಸುರೇಶ್ ಅಂಗಡಿ ಅವರ ನಿಧನದ ಬಳಿಕ ಬೆಳ ಗಾವಿ ಲೋಕಸಭಾ ಕ್ಷೇತ್ರದ ಒಂದೊಂದು ತಾಲೂಕಿನಲ್ಲಿಯೂ ಹತ್ತಾರು ಆಕಾಂಕ್ಷಿಗಳು ಟಿಕೆಟ್ಗಾಗಿ ಲಾಬಿ ಶುರು ಮಾಡಿದ್ದರು. ಆಕಾಂಕ್ಷಿಗಳ ದಂಡು ಕಂಡು ಮುಖಂಡರೇ ದಂಗಾಗಿ ಹೋಗಿದ್ದರು. ಬದಲಾದ ರಾಜಕೀಯದಲ್ಲಿಆಕಾಂಕ್ಷಿಗಳ ಹೆಸರು ಅಳೆದು ತೂಗಿ ಕೊನೆಗೆ ಐದಕ್ಕೆ ಬಂದು ನಿಂತಿತ್ತು. ಅವರಲ್ಲಿ ನಾಲ್ಕು ಅಭ್ಯರ್ಥಿಗಳು ಬೆಳಗಾವಿಯ ಪ್ರಬಲ ರಾಜಕಾರಣಿಗಳ ಬೆಂಬಲಿಗರಾಗಿದ್ದರು. ಹಾಗಾಗಿ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಮೇಲ್ನೋಟಕ್ಕೆ ಕೇಳಿಬಂದರೂ ಒಳಗೊಳಗೆ ಲೆಕ್ಕಾಚಾರಗಳೇ ಬೇರೆಯಾಗಿ ನಡೆಯುತ್ತಿದ್ದವು. ಕುಟುಂಬ ರಾಜಕಾರಣಕ್ಕೆ ಮಾನ್ಯತೆ ಕೊಡಬಾರದು ಎನ್ನುವ ವಿಚಾರದೊಂದಿಗೆ ಹೊಸ ಪ್ರಯೋಗದ ಹಾದಿಯಲ್ಲಿಯೇ ಅಭ್ಯರ್ಥಿ ಆಯ್ಕೆಯ ಚಟುವಟಿಕೆಗಳು ಸಾಗಿದ್ದವು. ಆದರೆ, ಕೊನೆಯ ಹಂತಕ್ಕೆ ಬಂದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಆದಿಯಾಗಿ ಉಪಮುಖ್ಯಮಂತ್ರಿ ಲಕ್ಷತ್ರ್ಮಣ ಸವದಿ ಸೇರಿ ಹಲವು ಬಲಾಢ್ಯರ ಬೆಂಬಲಿಗರ ಹೆಸರು ಸೇರಿದ್ದವು. ಇದೇ ವೇಳೆ ಸಿಡಿ ಪ್ರಕರಣ ಕೂಡ ಬಿಜೆಪಿಯಲ್ಲಿ ಗೊಂದಲ ಉಂಟು ಮಾಡಿತ್ತು. ಅದರ ಜತೆಗೆ ಕೊನೆಯಲ್ಲಿ ಮುಖಂಡರ ಲಾಬಿಯ ಬೆಂಕಿ ಆರಿಸುವ ಅನಿವಾರ್ಯತೆ ಅರಿತ ಹೈಕಮಾಂಡ್ ಎಲ್ಲರ ಬಾಯಿ ಮುಚ್ಚಿಸುವ ಜತೆಗೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸಾಧನೆ, ವೇದನೆಗಿಂತ ದಿ. ಸುರೇಶ್ ಅಂಗಡಿ ಅವರ ನಿಧನದ ಅನುಕಂಪವನ್ನೇ ಚುನಾವಣಾ ಅಜೆಂಡಾ ಮಾಡುವ ನಿರ್ಧಾರಕ್ಕೆ ಬಂದು ಅಂಗಡಿ ಕುಟುಂಬಕ್ಕೆ ಟಿಕೆಟ್ ಕರುಣಿಸಿದೆ. ಮುಖಂಡರ ಲಾಬಿಯ ಕಿಡಿ ಅಂಗಡಿ ಕುಟುಂಬಕ್ಕೆ ವರವಾಯಿತು ಎನ್ನಲಾಗುತ್ತಿದೆ. ಈ ನಿರ್ಧಾರದಿಂದ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಹವಣಿಸುತ್ತಿದ್ದ ಪ್ರಭಾವಿಗಳೆಲ್ಲಬಾಯಿ ಬಿಡದಂತಾಗಿದೆ. ಅಂಗಡಿ ಕುಟುಂಬದ ಬೆಂಬಲಕ್ಕೆ ನಿಲ್ಲುವುದು ಎಲ್ಲರಿಗೂ ಅನಿವಾರ್ಯವಾಗುತ್ತದೆ ಎನ್ನುವ ವಿಶ್ವಾಸದೊಂದಿಗೆ ಬುಧವಾರ ಸಂಜೆ ನಡೆದ ಅರ್ಧ ಗಂಟೆಯ ಒಂದು ಸಣ್ಣ ಸಭೆ ಮಂಗಳಾ ಅಂಗಡಿ ಅವರ ಹೆಸರನ್ನು ಅಚಾನಕ್ ಆಗಿ ಮುನ್ನೆಲೆಗೆ ತಂದು ಬಿಜೆಪಿ ಅಭ್ಯರ್ಥಿಯಾಗಿಸಿದೆ.
from India & World News in Kannada | VK Polls https://ift.tt/2Py9pCc