ಬೆಂಗಳೂರು: ಸಚಿವ ಡಾ.ಸುಧಾಕರ್ ನೀಡಿರುವ ಉದ್ದಟತನದ ಹೇಳಿಕೆಯಿಂದ ವಿಧಾನಸಭಾ ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಸೇರಿದಂತೆ ರಾಜ್ಯದ 225 ಶಾಸಕರ ಮಾನಹಾನಿಯಾಗಿದೆ ಎಂದು ವಿಪಕ್ಷ ನಾಯಕ ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿಯವರಿಗೆ ಸಂಬಂಧಿಸಿದ ಸಿಡಿ ಹಗರಣದ ಜೊತೆ ಈ ಆರೋಪದ ಬಗ್ಗೆಯೂ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಕಾನೂನಿನ ಹೋರಾಟದ ಮೂಲಕ ಈ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ. ಇಂತಹ ನಿಂದನಾತ್ಮಕ ಹೇಳಿಕೆ ನೀಡಿರುವ ಸಚಿವ ಡಾ.ಸುಧಾಕರ್ ವಿರುದ್ದ ಪ್ರತ್ಯೇಕವಾಗಿ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಸುಧಾಕರ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ಅವರೊಬ್ಬ ಜನಪ್ರತಿನಿಧಿ ಮತ್ತು ಸಚಿವ ಎಂದಿರುವ ಸಿದ್ದರಾಮಯ್ಯ, ಇಂತಹವರು ನಾಲಿಗೆ ಸಡಿಲ ಬಿಟ್ಟು ಬೇರೆ ಜನಪ್ರತಿನಿಧಿಗಳನ್ನು ನಿಂದಿಸಿರುವುದು ಸ್ಪಷ್ಟವಾಗಿ ಸದಸ್ಯರ ವಿಶೇಷ ರಕ್ಷಣೆಯ (Privilage) ಉಲ್ಲಂಘಣೆಯಾಗಿದೆ. ಸುಧಾಕರ್ ಸ್ಥಿತಿ ತಾ ಕಳ್ಳ ಇತರರನ್ನು ನಂಬ ಎಂಬಂತಾಗಿದೆ ಎಂದಿದ್ದಾರೆ. ಅಲ್ಲದೇ ಪುರುಷಪ್ರಧಾನ ಸಮಾಜದಲ್ಲಿ ಪುರುಷ ಶಾಸಕರು ಇಂತಹ ಆರೋಪಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲರು. ಆದರೆ ಮಹಿಳಾ ಶಾಸಕರಿಗೆ ಇಂತಹ ಸುಳ್ಳು ಆರೋಪಗಳು ಬಹಳ ಹಾನಿ ಉಂಟುಮಾಡುತ್ತದೆ. ಅವರು ಮನೆಯಲ್ಲಿ ಕುಟುಂಬದವರನ್ನು ಹೇಗೆ ಎದುರಿಸಬೇಕು? ಇಂತಹ ಕೀಳು ಮನಸ್ಸಿನ ಪುರುಷ ರಾಜಕಾರಣಿಗಳ ಕಾರಣದಿಂದಾಗಿಯೇ ರಾಜಕೀಯ ಪ್ರವೇಶಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/39cyA4C