ಬೆಂಗಳೂರು: ಕೋವಿಡ್ - 19 ಸೋಂಕು ನಿಗ್ರಹ ಮಾಡುವ ನಿಟ್ಟಿನಲ್ಲಿ 1,700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ ಆಸ್ಪತ್ರೆಯನ್ನು ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಡಿಸಿಎಂ ಡಾ. ಅಶ್ವಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ ಜೊತೆಗೆ ನಡೆಸಿದ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ಗಡಿಗಳು ಇನ್ಮುಂದೆ ಬಂದ್ ಕೊರೊನಾ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದ ಗಡಿ ಪ್ರದೇಶಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಅಲ್ಲದೆ ಕೋವಿಡ್ ವೈರಾಣು ಪತ್ತೆ ಹಚ್ಚುವ ನಿಟ್ಟಿನಲ್ಲಿ ಲ್ಯಾಬ್ ಟೆಸ್ಟ್ಗಳ ಪ್ರಮಾಣವನ್ನು ಕೂಡಲೇ ಹೆಚ್ಚಿಸುವುದು ಹಾಗೂ ವೈರಾಣು ದೃಢಪಟ್ಟಿರುವ ರೋಗಿಗಳ ಸಂಪರ್ಕಕ್ಕೆ ಬಂದಿರುವ ಎಲ್ಲಾ ರೋಗಲಕ್ಷಣಗಳನ್ನು ತೋರುವ ಅಥವಾ ತೋರದಿರುವ ಎಲ್ಲರನ್ನು ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ 200 ಜನರನ್ನು ಪರೀಕ್ಷೆ ಮಾಡುವಂತಹ ಸೌಕರ್ಯಗಳನ್ನು ಸಜ್ಜುಗೊಳಿಸುವುದು, ಐಸಿಎಂಆರ್ ಹಾಗೂ ಎನ್ಐವಿ ಸಹಕಾರದೊಂದಿಗೆ ಆದಷ್ಟು ಸರ್ಕಾರ ಹಾಗೂ ಸರ್ಕಾರೇತರ ಲ್ಯಾಬ್ಗಳಿಗೆ ಕೋವಿಡ್ ತಪಾಸಣೆ ಮಾಡುವ ಪರವಾನಿಗಿ ಕೊಡಿಸಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಅಂತರಾಷ್ಟ್ರೀಯ ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವುದರ ಜೊತೆಗೆ ಇನ್ನು ಮುಂದೆ ಸ್ಥಳೀಯ ವಿಮಾನದ ಪ್ರಯಾಣಿಕರನ್ನು ಸಹ ತಪಾಸಣೆಗೆ ಒಳಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಬೆಂಗಳೂರಿನ ಬಾಲಬೃಹಿ ಅತಿಥಿ ಗೃಹವನ್ನು ಕೊರೊನಾ ವಾರ್ ರೂಂ ಆಗಿ ಪರಿವರ್ತನೆ ಮಾಡಲಿ ನಿರ್ಧರಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಕೊರೊನಾ ಕುರಿತ ಸಂಪೂರ್ಣ ಕ್ರಮಗಳ ಉಸ್ತುವಾರಿಯನ್ನು ಈ ಕೇಂದ್ರದಿಂದ ಇನ್ಮುಂದೆ ನಿರ್ವಹಣೆ ಮಾಡಲಾಗುತ್ತದೆ.
from India & World News in Kannada | VK Polls https://ift.tt/3dq5WNV