ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿರುವ ಪ್ರಧಾನಿ ಮೋದಿ, ಯಾರೂ ಮನೆಯಿಂದ ಹೊರಬರದಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ಮಹಾಮಾರಿಯನ್ನು ದೇಶದಿಂದ ಹೊರಹಾಕಲು ಪಣ ತೊಟ್ಟಿರುವ ಮೋದಿ ಸರ್ಕಾರ, ಅದರಂತೆ ಎಲ್ಲಾ ಅಗತ್ಯ ಕ್ರಮಗಳ ಮೊರೆ ಹೋಗಿದೆ. ಈ ಸಮರದಲ್ಲಿ ಭಾಗಿಯಾಗುವಂತೆ ದೇಶದ ಜನತೆಗೂ ಕರೆ ನೀಡಲಾಗಿದೆ. 21 ದಿನಗಳ ಕಾಲ ಯಾರೂ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿರುವ ಪ್ರಧಾನಿ ಮೋದಿ, ಲಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆಯೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಈ ಮಧ್ಯೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯ ಸಮುದಾಯಕ್ಕೆ ಮತ್ತೊಮ್ಮೆ ಧನ್ಯವಾದ ಅರ್ಪಿಸಿರುವ ಪ್ರಧಾನಿ ಮೋದಿ, ಸರ್ಕಾರದ ಆದೇಶಗಳನ್ನು ಹಾಗೂ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ನಿರಂತರವಾಗಿ ದುಡಿಯುತ್ತಿರುವ ಕ್ಷೇತ್ರವನ್ನೂ ಹೊಗಳಿದ್ದಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯ ಮರೆಯದ ಮಾಧ್ಯಮ ಮಿತ್ರ, ಜನತೆಗೆ ಸುದ್ದಿ ತಲುಪಿಸಲು ನಿರಂತರವಾಗಿ ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೃಶ್ಯ, ಮುದ್ರಣ ಹಾಗೂ ಆನ್ಲೈನ್ ಮಾಧ್ಯಮದವರು ಅಭಿನಂದನಾರ್ಹರು ಎಂದು ಪ್ರಧಾನಿ ನುಡಿದರು. ಅಲ್ಲದೇ ಜನರು ಮನೆಯಿಂದ ಹೊರಬರದಂತೆ ನಿಗಾವಹಿಸಿರುವ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸುತ್ತಿರುವ ಪೊಲೀಸರೂ ಕೂಡ ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
from India & World News in Kannada | VK Polls https://ift.tt/3btqmnj