ನವದೆಹಲಿ: ಕೊರೊನಾ ವೈರಾಣು ಇಲಾಖೆಯನ್ನು ಇನ್ನಿಲ್ಲದಂತೆ ಕಾಡತೊಡಗಿದ್ದು, ವೈರಸ್ಗೆ ಹೆದರಿ ಒಂದೊಂದೇ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ದೇಶಾದ್ಯಂತ ಬರೋಬ್ಬರಿ 168 ರೈಲುಗಳ ಓಡಾಟವನ್ನು ನಿಲ್ಲಿಸಲಾಗಿದ್ದು, ಈ ರೈಲುಗಳಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಶೇ. 100ರಷ್ಟು ಹಣ ವಾಪಸ್ ಕೊಡುವುದಾಗಿ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ. ಮಾ.20ರಿಂದ ಮಾ.31ರವರೆಗೆ 168 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದ್ದು, ಈ ರೈಲುಗಳಿಗೆ ಟಿಕೆಟ್ ಬುಕ್ ಮಾಡಿದವರಿಗೆ ಸಂಪೂರ್ಣ ಹಣ ಮರಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಟಿಕೆಟ್ ರದ್ದತಿ ಮೇಲೆ ದಂಡವನ್ನು ವಿಧಿಸದಿರುವ ನಿರ್ಣಯ ಕೈಗೊಂಡಿರುವ ರೈಲ್ವೇ ಇಲಾಖೆ, ಶೇ. 100 ರಷ್ಟು ಹಣ ಮರಳಿಸುವುದಾಗಿ ಭರವಸೆ ನೀಡಿದೆ. ಅಲ್ಲದೇ ಹೊಸ ಟಿಕೆಟ್ ಬುಕ್ಕಿಂಗ್ ಮಾಡುವರಿಗೆ ಆದ್ಯತಾನುಸಾರ ಕಾಯ್ದಿರಿಸುವಂತೆ ಸಲಹೆ ನೀಡಿದೆ. ಈಗಾಗಲೇ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಶೇ. 60 ರಷ್ಟು ಮುಂಗಡ ಟಿಕೆಟ್ಗಳನ್ನು ಪ್ರಯಣಿಕರು ರದ್ದು ಮಾಡಿದ್ದು, ಇದೀಗ ಸ್ವತಃ ರೈಲ್ವೇ ಇಲಾಖೆ ರೈಲುಗಳ ಓಡಾಟದ ಮೇಲೆ ನಿರ್ಬಂಧ ಹೇರಿದೆ. ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಸಾರಿಗೆ ಮತ್ತು ಪ್ರವಾಸೋದ್ಯಮದ ಮೇಲೆ ಭಾರೀ ವ್ಯತಿರಿಕ್ತ ಪಡಿಣಾಮ ಬೀರಿರುವುದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/2J0zgMR