ಹೈದರಾಬಾದ್: ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಇದೀಗ ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಮಧ್ಯೆ ವೆಸ್ಟ್ಇಂಡೀಸ್ ನಾಯಕ ಬಲಾಢ್ಯ ಭಾರತಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಕಠಿಣ ತಂಡದ ವಿರುದ್ಧ ಸ್ಪರ್ಧಿಸಲು ನಾವು ಆಗಮಿಸಿದ್ದೇವೆ. ನಾವು ಅಂಡರ್ಡಾಗ್ಗಳಾಗಿದ್ದು, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸಿದ್ದೇವೆ. ನಮ್ಮ ಯೋಜನೆಯನ್ನು ಕಾರ್ತಗತಗೊಳಿಸಲು ಸಫಲವಾದರೆ ಏನೂ ಬೇಕಾದರೂ ಸಾಧ್ಯ ಎಂದು ಎಚ್ಚರಿಕೆಯ ಸಂದೇಶ ನೀಡಿದರು. ಕೆಲವೊಂದು ಅಂಶಗಳನ್ನು ಸರಿಯಾಗಿ ಮಾಡಬೇಕಿದೆ. ಅದು ಸಾಧ್ಯವಾದರೆ ಫಲಿತಾಂಶ ನಿಮ್ಮ ಪರವಾಗಿರುತ್ತದೆ ಎಂದು ಪೊಲಾರ್ಡ್ ಸೇರಿಸಿದರು. ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ತಂಡವಾಗಿರುವ ವಿಂಡೀಸ್, ಭಾರತಕ್ಕೆ ಸಡ್ಡು ಹೊಡೆಯುವ ಇರಾಯದಲ್ಲಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 6ರಂದು ಹೈದರಾಬಾದ್ನಲ್ಲಿ ನಡೆಯಲಿದೆ. ಅಫಘಾನಿಸ್ತಾನ ವಿರುದ್ಧದ ಸರಣಿಯ ಕಿರು ಅವಧಿಯಲ್ಲಿ ಆಟಗಾರರು ಸಜ್ಜಾಗಿದ್ದಾರೆ. ಯಶಸ್ಸು ನಿರಾಸೆ ತರುತ್ತದೆ. ಏಕೆಂದರೆ ಸ್ಥಿರತೆಗಾಗಿ ಮಾಡಿದ ಕೆಲಸವನ್ನು ಪದೇ ಪದೇ ಮಾಡಬೇಕು. ಈ ನಿಟ್ಟಿನಲ್ಲಿ ಹುಡುಗರು ಸಜ್ಜಾಗಿದ್ದಾರೆ ಎಂದು ಪೊಲಾರ್ಡ್ ಹೇಳಿದರು. ನಾನು ಸುದೀರ್ಘ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ ಮಧ್ಯೆ ಮೂರು-ನಾಲ್ಕು ವರ್ಷಗಳು ದೂರವುಳಿಯಬೇಕಾಯಿತು. ನನ್ನ ಹಾಗೂ ವಿಂಡೀಸ್ ಮಂಡಳಿಯ ಸಂಬಂಧ ಹದೆಗೆಟ್ಟಿರುವುದು ಹೊಸ ವಿಚಾರವೇನಲ್ಲ ಎಂದರು. ವೆಸ್ಟ್ಇಂಡೀಸ್ಗಾಗಿ ಆಡಲು ಕನಸು ಹೊತ್ತುಕೊಂಡಾಗ ನಾಯಕನಾಗುವ ಕನಸು ಹೊಂದಿರುವುದಿಲ್ಲ. ಆದರೆ ಈ ಅವಕಾಶ ಲಭಿಸಿದಾಗ ಅದೊಂದು ಸವಾಲಿನಿಂದ ಕೂಡಿರುತ್ತದೆ. ನಾನು ಸವಾಲುಗಳಿಂದ ದೂರವುಳಿಯಲು ಬಯಸುತ್ತಿಲ್ಲ ಎಂದರು. ಅದೇ ಹೊತ್ತಿಗೆ ತಮ್ಮ ಅನುಭವ ಸಂಪತ್ತನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳುವುದಾಗಿ ಪೊಲಾರ್ಡ್ ತಿಳಿಸಿದರು. ಅನುಭವಿ ಆಟಗಾರರು ಯುವ ಆಟಗಾರರಿಗೆ ಅನುಭವ ಹಂಚಿಕೊಳ್ಳಬೇಕು. ಅದು ನನ್ನ ಕರ್ತವ್ಯ. ಈ ಮೂಲಕ ಸರಿಯಾದ ದಿಶೆಯತ್ತ ಸಾಗಿಸಬೇಕು ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Lkif1E