ಹೊಸದಿಲ್ಲಿ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ (ಜೆಇಎಂ) ಶ್ರೀರಾಮ ಜನ್ಮಸ್ಥಾನವಾದ ನಗರವನ್ನು ಗುರಿಯಾಗಿಸಿ ಭಾರಿ ದಾಳಿಗೆ ಸಂಚು ಹೆಣೆದಿದೆ ಎಂದು ಗುಪ್ತಚರ ಸಂಸ್ಥೆಗಳು ಸರಕಾರವನ್ನು ಎಚ್ಚರಿಸಿವೆ. ಸಾಮಾಜಿಕ ಮಾಧ್ಯಮವೊಂದರಲ್ಲಿ ಜೈಷ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕಳುಹಿಸಿರುವ ದಾಳಿ ಕುರಿತಾದ ನಿರ್ದೇಶನಗಳನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ ಸ್ಥಾನವನ್ನೇ ನಾವು ಗುರಿಯಾಗಿಸಬೇಕು ಎಂದು ಉಗ್ರ ಅಜರ್ ತನ್ನ ಸಹಚರರಿಗೆ ಸೂಚನೆ ನೀಡಿರುವ ಸಂದೇಶವೊಂದು ಟೆಲಿಗ್ರಾಮ್ ಆ್ಯಪ್ ಮೂಲಕ ರವಾನೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗುಪ್ತಚರ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಯೋಧ್ಯೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಹೆಚ್ಚುವರಿ ಸೇನೆ ಹಾಗೂ ಪೊಲೀಸರನ್ನು ಅಯೋಧ್ಯೆಗೆ ರವಾನಿಸಲಾಗಿದೆ. ಪೊಲೀಸರ ಗಸ್ತು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ದೇಶಾದ್ಯಂತ ಜೈಷೆ ಉಗ್ರರ ಚಲನವಲನಗಳು ಪತ್ತೆಯಾಗಿರುವ ಸಂಶಯಾಸ್ಪದ ಪ್ರದೇಶಗಳ ಮೇಲೆಯೂ ಹೆಚ್ಚಿನ ನಿಗಾ ಇರಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. 2019ರ ಮೇ 1ರಂದು ಉಗ್ರ ಮಸೂದ್ ಅಜರ್ನನ್ನು 'ಜಾಗತಿಕ ಉಗ್ರ' ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಿಸಿದೆ. ಲಾಡೆನ್ ನೆರವಿನಿಂದ ಜೈಷ್ ಸ್ಥಾಪನೆ: 1999ರಲ್ಲಿ ಭಾರತೀಯ ವಿಮಾನವೊಂದನ್ನು ಉಗ್ರರು ಹೈಜಾಕ್ ಮಾಡಿ ಅಫಘಾನಿಸ್ತಾನದ ಕಂದಾಹಾರ್ಗೆ ತೆಗೆದುಕೊಂಡು ಹೋಗಿದ್ದರು. 150 ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ ದೇಶದ ಜೈಲಿನಲ್ಲಿದ್ದ ಉಗ್ರ ಮೌಲಾನ ಮಸೂದ್ ಅಜರ್ನನ್ನು ಬಿಡುಗಡೆಗೆ ಮಾಡಿಸಿಕೊಂಡಿದ್ದರು. ಬಳಿಕ ಅಲ್-ಕೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹಾಗೂ ತಾಲಿಬಾನ್ ಉಗ್ರರ ನೆರವಿನಿಂದ ಉಗ್ರ ಅಜರ್ ತನ್ನದೇ ಹೊಸ ಸಂಘಟನೆ 'ಜೈಷ್-ಎ-ಮೊಹಮ್ಮದ್' ಸ್ಥಾಪಿಸಿದ. ಭಾರತದ ಮೇಲೆ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸುವುದೇ ಈ ಸಂಘಟನೆಯ ಪ್ರಮುಖ ಉದ್ದೇಶ. 2001ರಲ್ಲಿ ಜಮ್ಮು-ಕಾಶ್ಮೀರದ ವಿಧಾನಸಭೆ ಹಾಗೂ ದಿಲ್ಲಿಯ ಸಂಸತ್ ಭವನದ ಮೇಲೆ ಜೈಷ್ ಉಗ್ರರು ದಾಳಿ ನಡೆಸಿ 50 ಜನರನ್ನು ಬಲಿ ಪಡೆದಿದ್ದರು. 2016ರಲ್ಲಿ ಉರಿ ಸೇನಾ ನೆಲೆ ಮೇಲೆಯೂ ಜೈಷ್ ಉಗ್ರರು ಭಾರಿ ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದಿದ್ದರು.
from India & World News in Kannada | VK Polls https://ift.tt/39fLdtN