ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರದಿಂದ ಜಾರಿ ಬೀಳಲು ಮೈತ್ರಿ ಮುರಿದುಕೊಂಡಿದ್ದೇ ಕಾರಣ!

ರಾಂಚಿ: ವಿಧಾನಸಭೆ ಚುನಾವಣೆಯಲ್ಲಿ ಮತ್ತು ಎಜೆಎಸ್‌ಯು ಮೈತ್ರಿ ಮುಂದುವರಿದಿ­ದ್ದರೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ­ಪಟ್ಟಿದ್ದಾರೆ. ದೀರ್ಘಕಾಲದ ಮೈತ್ರಿ ಹೊಂದಿದ್ದ ಈ ಪಕ್ಷಗಳು ಜತೆಯಾಗಿ ಸ್ಪರ್ಧಿಸಿದ್ದರೆ ಜೆಎಂಎಂ-ಕಾಂಗ್ರೆಸ್‌-ಆರ್‌ಜೆಡಿ ಬಲವನ್ನು 47ರ ಬದಲಾಗಿ 34ಕ್ಕೆ ನಿಯಂತ್ರಿ­ಸಲು ಸಾಧ್ಯವಿತ್ತು. ಬಿಜೆಪಿ-­ಎಜೆಎಸ್‌ಯು 40 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇತ್ತು. ಜೆಎಂಎಂನ 9 ಮತ್ತು ಕಾಂಗ್ರೆಸ್‌ನ 4 ಸ್ಥಾನಗಳನ್ನು ಬಿಜೆಪಿ-ಎಜೆಎಸ್‌ಯು ಕಸಿ­ಯುವ ಸಂಭವವಿತ್ತು ಎಂದು ಚುನಾವಣಾ ಅಂಕಿ-ಅಂಶಗಳನ್ನು ಆಧರಿಸಿ ವಿಶ್ಲೇಷಣೆ ನಡೆಸಲಾಗಿದೆ. ಬಿಜೆಪಿ-ಎಜೆಎಸ್‌ಯು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಅವುಗಳ ಒಟ್ಟಾರೆ ಮತ ಗಳಿಕೆ ಪ್ರಮಾಣ ಶೇ.41.5ರಷ್ಟಿದೆ. ಜೆಎಂಎಂ, ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿ­ಕೂಟದ ಮತ ಗಳಿಕೆ ಪ್ರಮಾಣ ಶೇ.35.4­ರಷ್ಟಿದೆ. ಇದನ್ನು ಗಣನೆಗೆ ತೆಗೆದು­ಕೊಂಡರೂ ಬಿಜೆಪಿ-ಎಜೆಎಸ್‌ಯು ಮುನ್ನಡೆ ಗಳಿಸುವ ಸಾಧ್ಯತೆ ಇತ್ತು. ಬಿಜೆಪಿ-ಎಜೆಎಸ್‌ಯು ಜತೆಯಾಗಿ ಸ್ಪರ್ಧೆ ಮಾಡಿದ್ದರೆ ಅದರ ಪರಿಣಾಮ ಜೆಎಂಎಂ, ಕಾಂಗ್ರೆಸ್‌ ಮೇಲೆ ಆಗುತ್ತಿತ್ತೇ ಹೊರತು ಬಾಬುಲಾಲ್‌ ಮರಾಂಡಿ ಅವರ ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಪ್ರಜಾತಾಂತ್ರಿಕ) ಸೇರಿ ಇತರ ಯಾವುದೇ ಪಕ್ಷಗಳ ಮೇಲೆ ಆಗುತ್ತಿರ­ಲಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ­ಪಟ್ಟಿದ್ದಾರೆ. ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ 25 (2014ರಲ್ಲಿ37) ಹಾಗೂ ಎಜೆಎಸ್‌ಯು 2 (2014ರಲ್ಲಿ5) ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಎರಡನೇ ವ್ಯಕ್ತಿ ರಾಯ್‌: ಜೆಮ್‌ಷೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಘುಬರ ದಾಸ್‌ ಅವರನ್ನು ಸೋಲಿಸಿದ ಸರಯೂ ರಾಯ್‌ ಅವರು ಹಾಲಿ ಮುಖ್ಯಮಂತ್ರಿ­ಯನ್ನು ಪರಾಭವಗೊಳಿಸಿದ ಜಾರ್ಖಂಡ್‌ನ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2009ರಲ್ಲಿ ನಡೆದ ಉಪ ಚುನಾವಣೆ­ಯಲ್ಲಿ ಅಂದಿನ ಮುಖ್ಯಮಂತ್ರಿ­ಯಾಗಿದ್ದ ಶಿಬು ಸೊರೇನ್‌ ಅವರನ್ನು ತಾಮರ್‌ ಕ್ಷೇತ್ರದಲ್ಲಿ ಜಾರ್ಖಂಡ್‌ ಪಾರ್ಟಿಯ ಗೋಪಾಲಕೃಷ್ಣ ಪಾತಾರ್‌ ಅವರು 9,000 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ ರಾಯ್‌ ವಿಶೇಷ ಎಂದರೆ ಅವರು ರಘುಬರ ದಾಸ್‌ ಸಂಪುಟದಲ್ಲಿಯೇ ಸಚಿವರಾಗಿದ್ದರು. ತಾವು ಎರಡು ಅವಧಿಗೆ ಪ್ರತಿನಿಧಿಸಿದ್ದ ಜೆಮ್‌ಷೆಡ್‌ಪುರ ಪಶ್ಚಿಮ ಕ್ಷೇತ್ರದ ಟಿಕೆಟ್‌ ನಿರಾಕರಿಸಿದ್ದರಿಂದ ಮುಖ್ಯಮಂತ್ರಿ ವಿರುದ್ಧವೇ ಸ್ಪರ್ಧಿಸಿ 12,000 ಮತಗಳ ಅಂತರದಿಂದ ಗೆದ್ದರು. ಹೇಮಂತ್‌ಗೆ ಆಹ್ವಾನ: ರಾಜ್ಯಪಾಲ­ರಾದ ದ್ರೌಪದಿ ಮುರ್ಮು ಅವರು ಜಾರ್ಖಂಡ್‌ ಮುಕ್ತಿ ಮೋರ್ಚಾ ಶಾಸ­ಕಾಂಗ ಪಕ್ಷದ ನಾಯಕ ಹೇಮಂತ್‌ ಸೊರೇನ್‌ ಅವರಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಹೇಮಂತ್‌ ಅವರು ಮಂಗಳವಾರ ರಾತ್ರಿ ರಾಜ್ಯಪಾಲ­ರನ್ನು ಭೇಟಿ ಮಾಡಿ 50 ಶಾಸಕರ ಬೆಂಬಲ ಪತ್ರ ನೀಡಿ ಸರಕಾರ ರಚನೆ ಹಕ್ಕು ಮಂಡಿಸಿದ್ದರು. 81 ಸದಸ್ಯ ಬಲದ ವಿಧಾನಸಭೆ­ಯಲ್ಲಿ ಜೆಎಂಎಂನ 30, ಕಾಂಗ್ರೆಸ್‌ನ 16, ಆರ್‌ಜೆಡಿಯ 1 ಹಾಗೂ ಜೆವಿಎಂ (ಪಿ)ಯ ಮೂವರು ಶಾಸಕರ ಬೆಂಬಲ ಸೊರೇನ್‌ ಅವರಿಗಿದೆ. ಹೇಮಂತ್‌ ಡಿ.29 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೇಮಂತ್‌ ಬುಧವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಸರಕಾರ ರಚನೆ ಸಂಬಂಧ ಮಾತುಕತೆ ನಡೆಸಿದರು.


from India & World News in Kannada | VK Polls https://ift.tt/39fLddh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...