ಹೊಸದಿಲ್ಲಿ: ಕೋವಿಡ್ ವೈರಾಣುವಿನ ಹೊಸ ರೂಪಾಂತರಿ 'ಓಮಿಕ್ರಾನ್' ಭಾರತ ಸೇರಿದಂತೆ ಯಾವುದೇ ದೇಶದಲ್ಲಿರುವ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವೈರಾಣು ತಜ್ಞರು ಹೇಳಿದ್ದಾರೆ. ಹೊಸ ರೂಪಾಂತರಿಯು ಎಲ್ಲ ವಯೋಮಾನದವರಿಗೆ, ಅದರಲ್ಲೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹರಡುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾ ತಜ್ಞರು ಎಚ್ಚರಿಸಿದ ಬೆನ್ನಲ್ಲೇ ವೈರಾಣು ತಜ್ಞರು ಈ ಸಾಧ್ಯತೆಯನ್ನು ನಿರಾಕರಿಸಿರುವುದರಿಂದ ಪಾಲಕರ ಆತಂಕ ದೂರವಾಗಿದೆ. ''ಭಾರತ ಮಾತ್ರವಲ್ಲ, ಜಗತ್ತಿನ ಯಾವ ದೇಶದ ಮಕ್ಕಳಿಗೂ ಓಮಿಕ್ರಾನ್ ಬಾಧಿಸುವ ಸಾಧ್ಯತೆ ಇಲ್ಲ. ಅಷ್ಟಕ್ಕೂ, ಮಕ್ಕಳ ಮೇಲೆ ಹೊಸ ರೂಪಾಂತರಿ ಪರಿಣಾಮ ಬೀರುತ್ತದೆ ಎಂದು ಇಷ್ಟು ಬೇಗ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವೂ ಅಲ್ಲ,'' ಎಂದು ರಾಷ್ಟ್ರೀಯ ಜೈವಿಕ ವೈದ್ಯಕೀಯ ಜಿನೋಮಿಕ್ಸ್ ಸಂಸ್ಥೆ (ಎನ್ಐಬಿಎಂಜಿ) ನಿರ್ದೇಶಕ ಡಾ. ಸೌಮಿತ್ರ ದಾಸ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ 'ಎನ್ಐಬಿಎಂಜಿ' ಸಂಸ್ಥೆಯು ದೇಶದಲ್ಲಿರುವ 28 ಜಿನೋಮ್ ಸೀಕ್ವೆನ್ಸಿಂಗ್ (ಐಎನ್ಎಸ್ಎಸಿಒಜಿ) ಲ್ಯಾಬ್ಗಳಲ್ಲಿ ಒಂದಾಗಿದೆ. "ಕೊರೊನಾದ ವೈರಾಣುವು, ಒಬ್ಬ ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ, ಅವರ ಆಹಾರ ಪದ್ಧತಿ, ಇದಕ್ಕೂ ಮೊದಲು ಅವರ ದೇಹದ ಮೇಲೆ ಕೊರೊನಾ ಪರಿಣಾಮ ಬೀರಿತ್ತೇ ಎನ್ನುವುದರ ಮೇಲೆ ಪರಿಣಾಮ ನಿರ್ಧಾರವಾಗುತ್ತದೆ. ಅದರಲ್ಲೂ, ಓಮಿಕ್ರಾನ್ ಬೇರೆ ದೇಶದ ಜನರಿಗೆ ಬೀರಿದ ಪರಿಣಾಮವೇ ಭಾರತೀಯರ ಮೇಲೂ ಬೀರುತ್ತದೆ ಎಂಬುದು ಕೇವಲ ವದಂತಿ,'' ಎಂದು ಸ್ಪಷ್ಟಪಡಿಸಿದರು. "ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ರೂಪಾಂತರಿಯ ಪರಿಣಾಮದ ಬಗ್ಗೆ ಈಗಲೇ ನಿರ್ಧರಿಸುವುದು ಕಷ್ಟ. ಇದರ ಪರಿಣಾಮ, ಲಸಿಕೆಗಳ ದಕ್ಷತೆ ಸೇರಿ ಎಲ್ಲ ವಿಷಯಗಳ ಬಗ್ಗೆ ಸ್ಪಷ್ಟವಾಗಲು ಕೆಲವು ವಾರಗಳು ಬೇಕು. ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್ ಪಡೆಯುವುದು, ಸಾಮಾಜಿಕ ಅಂತರ ಸೇರಿ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸಾಕು. ಅನವಶ್ಯಕವಾಗಿ ಭೀತಿಗೆ ಒಳಗಾಗುವುದು ಬೇಡ,'' ಎಂದು ಹೇಳಿದರು. ತಜ್ಞರ ಸಲಹೆ ಮೇರೆ ಮಾರ್ಗಸೂಚಿಯಲ್ಲಿ ಬದಲಾವಣೆ ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳ ಹಾಗೂ ಓಮಿಕ್ರಾನ್ ರೂಪಾಂತರ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಪಡೆದು ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಎರಡು ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಓಮಿಕ್ರಾನ್ ಸೋಂಕು ತೀವ್ರತೆ ಇರುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿವರಿಸಿದ್ದಾರೆ. ಅಧಿಕಾರಿಗಳ ತಂಡ ಸಜ್ಜು ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮಹತ್ವದ ಹೊಣೆ ವಹಿಸಲಾಗಿದೆ. * ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್: ಕೋವಿಡ್ ವಾರ್ ರೂಮ್, ಲಿಕ್ವಿಡ್ ಆಕ್ಸಿಜನ್ ಪೂರೈಕೆ ಕೇಂದ್ರ ಹಾಗೂ ಆರೋಗ್ಯ ಸೌಲಭ್ಯಗಳ ಮೇಲುಸ್ತುವಾರಿ * ಪಂಕಜ್ ಕುಮಾರ್ ಪಾಂಡೆ: ಹೋಮ್ ಐಸೋಲೇಷನ್ * ಸಿ. ಶಿಖಾ: ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ * ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಐಎಎಸ್ ಅಧಿಕಾರಿ ಗುಂಜನ್ಕೃಷ್ಣ: ಆಕ್ಸಿಜನ್ ಪೂರೈಕೆ. * ಶಿಲ್ಪಾ ನಾಗ್: ರಾಜ್ಯ ಕಣ್ಗಾವಲು ಘಟಕದ ನೋಡಲ್ ಅಧಿಕಾರಿ. * ಕುಮಾರ್ ಪುಷ್ಕರ್: ಆಸ್ಪತ್ರೆಗಳ ಬೆಡ್ ನಿರ್ವಹಣೆ ಕೇಂದ್ರೀಕೃತ ವ್ಯವಸ್ಥೆ. * ಡಾ. ಎಂ.ಟಿ.ರೇಜು: ಔಷಧ ನಿರ್ವಹಣಾ ವ್ಯವಸ್ಥೆ ಶಾಲೆಗಳ ಮೇಲೆ ನಿಗಾ ಸರಕಾರ ಪ್ರತಿ ಗಂಟೆ ಕೋವಿಡ್ ಸ್ಥಿತಿಗತಿ ಪರಿಶೀಲಿಸುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಕಠಿಣ ಕ್ರಮ ಕೈಗೊಳ್ಳಲಿದೆ. ಪರೀಕ್ಷೆ, ಶಾಲೆಯನ್ನು ನಿಲ್ಲಿಸಲು ಹಿಂದೇಟು ಹಾಕುವುದಿಲ್ಲ. ಹಾಗಾಗಿ ಪೋಷಕರಿಗೆ ಆತಂಕ ಬೇಡ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. "ಈವರೆಗೆ ವಸತಿ ಶಾಲೆಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. 1 ರಿಂದ 10ನೇ ತರಗತಿಯ ಶಾಲೆಗಳಲ್ಲಿ ಈವರೆಗೆ ಒಂದೂ ಸೋಂಕಿನ ಪ್ರಕರಣ ದಾಖಲಾಗಿಲ್ಲ," ಎಂದಿದ್ದಾರೆ. ಸೋಮವಾರ ಪ್ರಮುಖ ಬೆಳವಣಿಗೆಗಳು ಹೀಗಿವೆ, * ಮಹಾರಾಷ್ಟ್ರದಲ್ಲಿ ಮತ್ತೆರಡು ಓಮಿಕ್ರಾನ್ ಕೇಸ್, ದೇಶದಲ್ಲಿ ಒಟ್ಟು ಸಂಖ್ಯೆ 23ಕ್ಕೆ ಏರಿಕೆ * 72 ಗಂಟೆಯಲ್ಲೇ ಜಿನೋಮ್ ಸೀಕ್ವೆನ್ಸಿಂಗ್ ವರದಿಗೆ ಸರಕಾರದಿಂದ ಕ್ರಮ * ಕರ್ನಾಟಕದಲ್ಲಿ 24 ಗಂಟೆಯಲ್ಲಿ 301 ಮಂದಿಗೆ ಸೋಂಕು, 7 ಜನರ ಸಾವು * ದೇಶಾದ್ಯಂತ 8,306 ಹೊಸ ಪ್ರಕರಣ, 211 ಮಂದಿ ಸೋಂಕಿಗೆ ಬಲಿ * ದೇಶಾದ್ಯಂತ 85% ಅರ್ಹ ಜನರಿಗೆ ಮೊದಲ ಡೋಸ್ ಲಸಿಕೆ * ದೇಶದ 93% ಭೋದಕ ಸಿಬ್ಬಂದಿ, 85% ಬೋಧಕೇತರ ಸಿಬ್ಬಂದಿಗೆ ಲಸಿಕೆ
from India & World News in Kannada | VK Polls https://ift.tt/32SPOn1