
ಪ್ರಮೋದ ಹರಿಕಾಂತ ಕಾರವಾರ ಕಾರವಾರ: ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಅಯೋಧ್ಯೆ, ಕಾಶಿ, ಕೇದಾರ, ಗುಜರಾತ್ನ ಸೋಮನಾಥ - ಉತ್ತರ ಭಾರತದ ಈ ಕ್ಷೇತ್ರಗಳ ಅಭಿವೃದ್ಧಿಗೆ ಸಿಕ್ಕಿದ ಪ್ರಾಧಾನ್ಯತೆ ದಕ್ಷಿಣ ಭಾರತದ ಶ್ರೀಕ್ಷೇತ್ರ ಗೋಕರ್ಣಕ್ಕೆ ಏಕೆ ಸಿಗುತ್ತಿಲ್ಲ? ಮಾದರಿಯಲ್ಲಿಯೇ ಗೋಕರ್ಣವನ್ನೂ ಅಭಿವೃದ್ಧಿ ಮಾಡಬೇಕು. ಶಿವನ ಆತ್ಮಲಿಂಗವನ್ನು ಹೊಂದಿರುವ ಗೋಕರ್ಣದ ಸಮಗ್ರ ಅಭಿವೃದ್ಧಿಗೆ ಸರಕಾರ ಮತ್ತು ರಾಜಕೀಯ ಪಕ್ಷಗಳು ಮುಂದಾಗಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಏಳೂವರೆ ವರ್ಷಗಳಲ್ಲಿ ಹಿಂದೂ ಧಾರ್ಮಿಕ ಕುರುಹುಗಳುಳ್ಳ ಅನೇಕ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿ ಮಾಡಿದೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈಶ್ವರನ ಆತ್ಮಲಿಂಗವೇ ಇದೆ. ದಕ್ಷಿಣ ಕಾಶಿ ಎಂದೇ ಹೆಸರಾದ ಗೋಕರ್ಣದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿಲ್ಲ. ರಾಜ್ಯ ಬಿಜೆಪಿ ಕೂಡ ಅಭಿವೃದ್ಧಿಗೆ ಸೂಕ್ತ ಸಾಕ್ಷಿಗಳನ್ನು ರಾಷ್ಟ್ರ ನಾಯಕರ ಮುಂದಿಟ್ಟಿಲ್ಲ ಎಂಬ ಬೇಸರ ಆಸ್ತಿಕ ಸಮುದಾಯದಲ್ಲಿದೆ. ಉತ್ತರಕ್ಕೇ ಆದ್ಯತೆ ಹಿಂದೂ ಧಾರ್ಮಿಕ ಮಂದಿರಗಳ ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಅಯೋಧ್ಯೆ ರಾಮನ ಜನ್ಮಸ್ಥಳ ಎನ್ನುವ ಕಾರಣಕ್ಕೆ ಅಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮಥುರಾ ಅನ್ನುವುದು ಶ್ರೀಕೃಷ್ಣನ ಜನ್ಮಸ್ಥಳ ಎಂದು ಅಲ್ಲಿಯೂ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇದಾರನಾಥ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗಿದೆ. ಗುಜರಾತ್ ನ ಸೋಮನಾಥ ದೇವಾಲಯದ ಅಭಿವೃದ್ಧಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಟ್ರಸ್ಟಿಯೂ ಆಗಿದ್ದಾರೆ. ಈಗ ಉತ್ತರ ಪ್ರದೇಶದ ವಾರಾಣಸಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯು ಜಾಗತಿಕವಾಗಿ ಗಮನಸೆಳೆದಿದೆ. ಇವೆಲ್ಲವೂ ಉತ್ತರ ಭಾರತದ ಕ್ಷೇತ್ರಗಳಾಗಿದ್ದು, ದಕ್ಷಿಣದತ್ತ ನಿರ್ಲಕ್ಷ್ಯ ಮುಂದುವರಿದಿದೆ. ಹೇಗಿದೆ ಗೋಕರ್ಣ ಸ್ಥಿತಿ?ಗೋಕರ್ಣದ ಕೋಟಿ ತೀರ್ಥವು ಗಂಗೆಯಷ್ಟೇ ಪವಿತ್ರ ಎನ್ನುವ ನಂಬಿಕೆ ಇದೆ. ಸತ್ತವರಿಗೆ ಮುಕ್ತಿ ನೀಡುವುದಕ್ಕೂ ಇಲ್ಲಿ ಪೂಜೆ ಮಾಡುತ್ತಾರೆ. ಹತ್ತಾರು ದೇಶಗಳ ಜನರು ಈ ಕ್ಷೇತ್ರಕ್ಕೆ ಬಂದು ಹೋಗುತ್ತಾರೆ. ಶಿವರಾತ್ರಿಯ ಮೂರೂ ದಿನ ಗೋಕರ್ಣಕ್ಕೆ 50 ಸಾವಿರಕ್ಕೂ ಅಧಿಕ ಬಂದು ಹೋಗುತ್ತಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಇದೇ ಕ್ಷೇತ್ರದ ಜನರೂ ಕಾಣಿಕೆ ಕೊಟ್ಟಿದ್ದಾರೆ. ಆದರೆ, ಗೋಕರ್ಣ ಅನೇಕ ದಶಕಗಳಿಂದ ಇದ್ದ ಹಾಗೆಯೇ ಇದೆ. ಕಿರಿದಾದ ರಸ್ತೆಗಳು, ಯಾತ್ರಿ ನಿವಾಸದ ಕೊರತೆ ಇಲ್ಲಿದೆ. ರಾವಣನು ಸಂಧ್ಯಾವಂದನೆಗೆ ನಿಂತ ಕಡಲ ತೀರದಲ್ಲಿ ಸ್ವಚ್ಛತೆ ಇಲ್ಲ. ದೇವಸ್ಥಾನಕ್ಕೆ ಬರಲು ಸರಿಯಾದ ರಸ್ತೆ ಇಲ್ಲ. ಕೋಟಿ ತೀರ್ಥದಲ್ಲಿ ಸ್ಪಚ್ಛತೆ ಅಷ್ಟಕ್ಕಷ್ಟೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡಿದರೆ ಪ್ರವಾಸೋದ್ಯಮ ವೃದ್ಧಿಯಾಗಿ ಸಾವಿರಾರು ಕೋಟಿ ರೂ. ಆದಾಯ ಸೃಷ್ಟಿಯಾಗುವ ಅವಕಾಶಗಳಿವೆ. ಕಾಶಿಯಲ್ಲಿ ಶಿವ ನೆಲೆಸಿರಬಹುದು. ಆದರೆ, ಶಿವನ ಆತ್ಮಲಿಂಗ ಗೋಕರ್ಣದಲ್ಲಿದೆ. ಗೋಕರ್ಣಕ್ಕೆ ಬಂದರೆ ಕಾಶಿಗಿಂತ ಹೆಚ್ಚು ಪುಣ್ಯ ಸಿಗುತ್ತದೆ ಎಂದು ಹಿಂದೂ ಪುರಾಣದಲ್ಲಿದೆ. ಹಾಗಾಗಿ ಗೋಕರ್ಣವನ್ನೂ ಯಾತ್ರಿಗಳಿಗೆ ಅನುಕೂಲ ಆಗುವ ರೀತಿಯಲ್ಲಿಅಭಿವೃದ್ಧಿ ಮಾಡಬೇಕು. ಬಿ.ಎಸ್.ಪೈ, ಹಿಂದೂ ಜಾಗರಣ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ
from India & World News in Kannada | VK Polls https://ift.tt/3q9MpIC