ಬೆಂಗಳೂರು: ನೀರಾವರಿ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಸೇರಿದಂತೆ ದೇಶದ ಅಭಿವೃದ್ಧಿಗೆ ಪೂರಕವಾದ ದೂರ-ದೃಷ್ಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ, ಜಾತಿ ರಾಜಕಾರಣಿಯನ್ನಾಗಿ ಪರಿಗಣಿಸುವುದು ಅಕ್ಷಮ್ಯ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಹೇಳಿದರು. ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶನಿವಾರ ನಡೆದ 'ಬೆಂಗಳೂರು ಸಾಹಿತ್ಯೋತ್ಸವ'ದಲ್ಲಿ ಅವರು ಮಾತನಾಡಿದರು. ಸುಗತ ಶ್ರೀನಿವಾಸರಾಜು ಅವರು ಬರೆದಿರುವ ದೇವೇಗೌಡರ ಜೀವನ ಚರಿತ್ರೆ 'ಫ್ಹರೋಸ್ ಇನ್ ಎ ಫೀಲ್ಡ್' ಎಂಬ ಕೃತಿ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕದ ರಾಜಕೀಯವನ್ನು ಜಾತಿ ರಾಜಕಾರಣದಿಂದ ಹೊರಗಿಟ್ಟು ನೋಡಲು ಸಾಧ್ಯವಿಲ್ಲ’ ಎಂದರು. ‘1962 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ದೇವೇಗೌಡರಿಗೆ ಕೇವಲ 29ರ ಹರೆಯ. ಈ ವೇಳೆಗಾಗಲೇ ಅವರು ಕಾವೇರಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಅವರು ನೀರಾವರಿ ಸಚಿವರಾಗಿದ್ದಾಗ ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನಿರ್ಮಾಣಕ್ಕೆ ಒತ್ತು ನೀಡಿದರು. ಅವರು ಪ್ರಧಾನ ಮಂತ್ರಿ ಆಗಿದ್ದಾಗ ಕೃಷ್ಣಾ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು 'ಆಲಮಟ್ಟಿ ಅಣೆಕಟ್ಟೆ' ಎತ್ತರಕ್ಕೆ ಕ್ರಮ ಕೈಗೊಂಡರು. ಇದರಿಂದ ಉತ್ತರ ಕರ್ನಾಟಕದ ಲಕ್ಷಾಂತರ ರೈತರು ಬಾಳು ಹಸನಾಯಿತು. ಈ ನಿಟ್ಟಿನಲ್ಲಿ ದೇವೇಗೌಡ ಎಂದರೆ ನೀರಾವರಿ ಎಂಬ ಮಾತು ರಾಜ್ಯಾದ್ಯಂತ ಜನಜನಿತವಾಗಿದೆ’ ಎಂದು ಹೇಳಿದರು. ‘ದೇವೇಗೌಡರು ತಮ್ಮ 70 ವರ್ಷಗಳ ರಾಜಕೀಯ ಜೀವನದಲ್ಲಿ ಅಧಿಕಾರ ಅನುಭವಿಸಿದ್ದು ಕೇವಲ 7 ವರ್ಷ ಮಾತ್ರ. ಉಳಿದ ಅವಧಿಯನ್ನು ಪ್ರತಿಪಕ್ಷ ನಾಯಕನಾಗಿ ಹೋರಾಟದಲ್ಲೇ ಕಳೆದಿದ್ದಾರೆ. ದೇವೇಗೌಡರಿಗೆ ಪ್ರಧಾನಿ ಪಟ್ಟ ಇಷ್ಟವಿರಲಿಲ್ಲ’ ಎಂದು ಸುಗತ ಶ್ರೀನಿವಾಸರಾಜು ವಿವರಿಸಿದರು. ‘ಅತ್ಯುನ್ನತ ಪ್ರಜಾಪ್ರಭುತ್ವವಾದಿಯಾದ ಎಚ್.ಡಿ. ದೇವೇಗೌಡರು, ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಒತ್ತು ನೀಡಿದ್ದರು’ ಎಂದರು.
from India & World News in Kannada | VK Polls https://ift.tt/3q1XpHW