ಬೈರತಿ ಬಸವರಾಜ್‌ ವಿರುದ್ಧ ಭೂಕಬಳಿಕೆ ಆರೋಪ; ವಲಸಿಗರನ್ನು ಟಾರ್ಗೆಟ್‌ ಮಾಡಲು ಕಾಂಗ್ರೆಸ್‌ಗೆ ಸಿಕ್ತು ಅಸ್ತ್ರ

ಎಂ. ಕೀರ್ತಿ ಪ್ರಸಾದ್‌ ಬೆಂಗಳೂರು: ಸಚಿವ ಬೈರತಿ ಬಸವರಾಜ್‌ ವಿರುದ್ಧದ ಭೂಹಗರಣದಲ್ಲಿ ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ನೀಡಿದ ಸೂಚನೆಯು ಕಾಂಗ್ರೆಸ್‌ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅಧಿವೇಶನದ ಎರಡನೇ ವಾರದಲ್ಲಿ ಪ್ರಸ್ತಾಪವಾಗಬೇಕಾದ ವಿಚಾರ ಏಕಾಏಕಿ ಮುನ್ನಲೆಗೆ ಬಂದು ಉಭಯ ಸದನಗಳಲ್ಲಿ ಕಾವೇರಿಸಿರುವುದರ ಹಿಂದೆ ಕೈ ಪಕ್ಷದ ರಹಸ್ಯ ಕಾರ್ಯತಂತ್ರವಿದೆ. ಪಕ್ಷ ಬಿಟ್ಟು ಹೋಗಿ ಬಿಜೆಪಿಗೆ ಬಲ ತುಂಬಿದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸರಕಾರ ಹಾಗೂ ಬಿಜೆಪಿಗೂ ಮುಜುಗರ ತಂದಿಡುವುದು ಕಾಂಗ್ರೆಸ್‌ ಕಾರ್ಯಸೂಚಿಯಿದ್ದಂತಿದೆ. ಅಧಿವೇಶನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಬೇಕಾದ ವಿಷಯಗಳ ಪಟ್ಟಿಯಲ್ಲಿ ಬೈರತಿ ವಿಚಾರವೂ ಇತ್ತು. ಆದರೆ ಈ ವಿಷಯದ ಬಗ್ಗೆ ಸಾಧ್ಯವಾದಷ್ಟು ಗೌಪ್ಯತೆಯನ್ನು ಕಾಂಗ್ರೆಸ್‌ ಕಾಯ್ದುಕೊಂಡಿತ್ತು. ಕಾಂಗ್ರೆಸ್‌ ಕಾರ್ಯತಂತ್ರದ ಪ್ರಕಾರ ಅಧಿವೇಶನ ನಡೆಯುವ ಎರಡನೇ ವಾರದಲ್ಲಿ ಪ್ರಸ್ತಾಪವಾಗಬೇಕಿತ್ತು. ಹಾಗಿದ್ದರೂ ಮೊದಲ ವಾರವೇ ಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಆ ಸಂದರ್ಭದಲ್ಲಿ ಪಕ್ಷದ 14 ಸದಸ್ಯರನ್ನು ಅಮಾನತುಪಡಿಸಿರುವುದು ಕಾಂಗ್ರೆಸ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಈ ವಿಚಾರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಇದೇ ಕಾರಣಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಗುಡುಗಿದ್ದಾರೆ. ಒಂದೇ ಕಲ್ಲಲ್ಲಿ ಹಲವು ಹಕ್ಕಿ! ಕಾಂಗ್ರೆಸ್‌ನ ಕಾರ್ಯತಂತ್ರದ ಹಿಂದೆ ಸಾಕಷ್ಟು ಲೆಕ್ಕಾಚಾರ ಅಡಗಿದಂತಿದೆ. ಪರಿಷತ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು ಪ್ರತಿಪಕ್ಷ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ. ಕೆ.ಆರ್‌. ಪುರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದವರು. ಅಲ್ಲದೆ ಇತ್ತೀಚೆಗೆ ನಡೆದ ಪರಿಷತ್‌ ಚುನಾವಣೆಗೂ ಸ್ಪರ್ಧಿಸದ ಅವರು ಮುಂದೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹೀಗಾಗಿ ಭೂಕಬಳಿಕೆ ಅಸ್ತ್ರವಾಗಿಟ್ಟುಕೊಂಡು ಹೋರಾಟ ನಡೆಸಲು ಕೈ ಅಣಿಯಾಗಿದೆ ಎಂಬ ಮಾತಿದೆ. ಬಿಎಸ್‌ವೈ ಮೊರೆ ಕಾಂಗ್ರೆಸ್‌ ಈ ವಿಚಾರವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ವಲಸಿಗ ಸಚಿವರು ಎಚ್ಚೆತ್ತುಕೊಂಡಂತಿದೆ. ಶುಕ್ರವಾರ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗುವ ಸುಳಿವು ಬಿಜೆಪಿ ನಾಯಕರಿಗೆ ಸಿಕ್ಕಿತ್ತು. ಹಾಗಾಗಿ ಶುಕ್ರವಾರ ಬೆಳಗ್ಗೆ ಸಚಿವರಾದ ಬೈರತಿ ಬಸವರಾಜು, ಮುನಿರತ್ನ ಅವರು ಯಡಿಯೂರಪ್ಪ ಅವರನ್ನು ಸುವರ್ಣ ಸೌಧದಲ್ಲಿನ ಸಿಎಂ ಕಚೇರಿಗೆ ಕರೆದೊಯ್ದು ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚಿಸಿದ್ದರು. ಸದನದಲ್ಲಿ ಸಚಿವರ ಪರ ನಿಲ್ಲುವ ಬಗ್ಗೆಯೂ ಮಾತುಕತೆ ನಡೆಯಿತು ಎನ್ನಲಾಗಿದೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಸಚಿವರು, ಶಾಸಕರಾಗಿರುವವರ ಮೇಲೆ ಕಾಂಗ್ರೆಸ್‌ ಗುರಿ ಇಟ್ಟಿದೆ. ಅವರ ಗುರಿಗೆ ಫಲ ಸಿಗದು. ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಬಿಜೆಪಿ ಸೇರಿದ ಸಚಿವರಾದವರೊಬ್ಬರು ತಿಳಿಸಿದರು. ವಲಸಿಗರೇ ಟಾರ್ಗೆಟ್‌ ಕಾಂಗ್ರೆಸ್‌ ಶಾಸಕರನ್ನು ಪಕ್ಷ ತೊರೆಯುವಂತೆ ಮಾಡಿ ಬಳಿಕ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಸರಕಾರ ರಚಿಸಿದ ಬಿ.ಎಸ್‌. ಯಡಿಯೂರಪ್ಪ ಅವರು ಈಗ ಮಾಜಿ ಸಿಎಂ. ಸದ್ಯ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಮುಂದಿನ ಚುನಾವಣೆಗೆ ಬಿಜೆಪಿ ಸಂಘಟನೆ ಬಲಪಡಿಸಬೇಕಿದೆ. ಅದಕ್ಕೆ ಪೂರಕವಾಗಿ ಸಂಘ, ಪಕ್ಷ ನಿಷ್ಠರಿಗೆ ಒತ್ತು ನೀಡುವ ಕಾರ್ಯ ನಡೆಯುತ್ತಿದ್ದು, ಆರೋಪಗಳು ಹೆಚ್ಚಾದಷ್ಟು ವಲಸಿಗರಿಗೆ ಅದು ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3pbkdpz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...