
ಅರವಿಂದ ಹೆಬ್ಬಾರ್ ಮುಂಡಾಜೆ ಮುಂಡಾಜೆ: ಈ ಬಾರಿಯ ಅಕಾಲಿಕ ಮುಂದುವರಿದಿರುವುದರಿಂದ ಅಡಕೆಯ ಹಿಂಗಾರ ಕೊಳೆಯುವುದರೊಂದಿಗೆ, ನಳ್ಳಿಗಳು ಉದುರುತ್ತಿರುವುದು ಮುಂದಿನ ವರ್ಷದ ಫಸಲಿನ ಮೇಲೆ ಹೊಡೆತ ನೀಡಲಿದೆ. ಮಳೆ ಮುಂದುವರಿದಿರುವುದರಿಂದ ಈ ವರ್ಷದ ಫಸಲನ್ನು ರಕ್ಷಿಸಲು ಹೆಣಗಾಡುತ್ತಿರುವ ಕೃಷಿಕರಿಗೆ ಮುಂದಿನ ವರ್ಷದ ಫಸಲಿನ ಚಿಂತೆಯೂ ಕಾಡತೊಡಗಿದೆ. ಸಾಮಾನ್ಯವಾಗಿ ನವೆಂಬರ್ನಿಂದ ಫೆಬ್ರವರಿ ತನಕ ಚಳಿಗಾಲ ಇರುತ್ತದೆ. ಇದು ಅಡಕೆ ಕೃಷಿಗೆ ಪೂರಕ. ಆದರೆ ಈ ಬಾರಿ ಚಳಿಗಾಲದ ಯಾವುದೇ ಲಕ್ಷಣ ಇದುವರೆಗೆ ಗೋಚರಿಸಿಲ್ಲ. ಬದಲಿಗೆ ಮಳೆ ಮುಂದುವರಿದಿದೆ. ಕಳೆದ ಬೇಸಿಗೆಯಲ್ಲಿ ಬೇಗನೆ ಮಳೆ ಆರಂಭವಾಗಿದ್ದರಿಂದ ಈ ಬಾರಿ ಅಡಕೆ ಬೇಗನೆ ಹಣ್ಣಾಗಿದೆ. ಇದರಿಂದ ಮುಂದಿನ ಫಸಲಿನ ಅಡಕೆ ಹಿಂಗಾರ ಈಗಲೇ ಬಿಟ್ಟಿದೆ. ಅಡಕೆಯ ಹಿಂಗಾರ ಹಾಳೆಯಿಂದ ಒಡೆಯಲಾರಂಭಿಸಿವೆ. ಹೀಗೆ ಒಡೆಯುವ ಹಿಂಗಾರದಲ್ಲಿ ಮಳೆ ನೀರು ಸೇರಿದರೆ ಹಿಂಗಾರ ಕೊಳೆಯುತ್ತದೆ. ಹಿಂಗಾರ ಕೊಳೆತರೆ ನಳ್ಳಿ ಉತ್ಪತ್ತಿಯಾಗುವುದಿಲ್ಲ, ಇದು ಫಸಲಿನ ಮೇಲೆ ಹೊಡೆತ ನೀಡುತ್ತದೆ. ಕೆಲವು ತೋಟಗಳಲ್ಲಿ ಹಿಂಗಾರ ಒಡೆದು ನಳ್ಳಿಗಳು ಬಿಟ್ಟಿವೆ. ಆದರೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ನಳ್ಳಿ ಉದುರುವಿಕೆಗೆ ಕಾರಣವಾಗಿದೆ. ಹಿಂಗಾರ ಹಾಳೆಯಿಂದ ಒಡೆಯುವ ವೇಳೆ ಹಾಗೂ ನಳ್ಳಿಗಳ ಬೆಳವಣಿಗೆಗೆ ಬಿಸಿಲು, ಚಳಿ, ಮಂಜಿನ ವಾತಾವರಣ ಉತ್ತಮ. ಈ ಸಮಯ ಅಡಕೆ ಮರದ ಬುಡಗಳಿಗೆ ನೀರು ಒದಗಿಸುವುದು ಅವಶ್ಯಕ. ಆದರೆ ಈ ಬಾರಿಯ ನಿರಂತರ ಮಳೆ ಅಡಕೆಯ ಬೆಳವಣಿಗೆಗೆ ಮಾರಕವಾಗಿದೆ. ಕೆಲವು ಕಡೆ ಹಿಂಗಾರ ಬಿಟ್ಟಿದ್ದರೂ ಅವುಗಳಲ್ಲಿ ನಳ್ಳಿಗಳು ಕಂಡುಬರುತ್ತಿಲ್ಲ. ಹೆಚ್ಚಿನ ತೋಟಗಳಲ್ಲಿ ಫಲ ಇಲ್ಲದ ಹಿಂಗಾರಗಳು ಕಾಣುತ್ತಿವೆ. ಈ ಬಾರಿ ಅಡಕೆಗೆ ಉತ್ತಮ ದರವಿದೆ. ಆದರೆ ಹಣ್ಣಡಕೆ ಒಣಗಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಮಾರುಕಟ್ಟೆಗೆ ಹೊಸ ಅಡಕೆ ಬರಲಾರಂಭವಾಗಿದೆ. ಆದರೆ ಹೆಚ್ಚಿನ ಕಡೆ ಹಸಿ ಅಡಕೆ ಬೀಳುತ್ತಿದೆ. ಈ ಬಾರಿ ಹಣ್ಣಡಕೆ ಬೇಗ ಉದುರಲು ಆರಂಭವಾಗಿದ್ದರೂ ನಿರಂತರ ಮಳೆಯಿಂದ ಅಡಕೆ ಒಣಗಿಸಲು ಸಾಧ್ಯವಾಗಿಲ್ಲ. ಉತ್ತಮ ಕಟ್ಟಿಂಗ್ ಇರುವ ಹೊಸ ಅಡಕೆಗೆ 435 ರೂ.ಗೂ ಅಧಿಕ ದರವಿದ್ದರೂ, ಗುಣಮಟ್ಟದ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಕೃಷಿಕರಿಗೆ 400 ರೂ. ಆಸುಪಾಸಿನ ದರ ಮಾತ್ರ ಸಿಗುತ್ತಿದೆ. 200 ಲೀ. ನೀರಿನಲ್ಲಿ ಒಂದು ಕೆಜಿ ಮೈಲುತುತ್ತು ಹಾಗೂ 1 ಕೆಜಿ ಸುಣ್ಣದ ಬೋರ್ಡೋ ಮಿಶ್ರಣ ತಯಾರಿಸಿ ಅಡಕೆ ನಳ್ಳಿಗಳಿಗೆ ನಿಗದಿತ ಪ್ರಮಾಣದಲ್ಲಿ ಸಿಂಪಡಿಸಿದರೆ ನಳ್ಳಿ ಉದುರುವಿಕೆ ತಡೆಗಟ್ಟಬಹುದು. ಕೆ.ಎಸ್. ಚಂದ್ರಶೇಖರ, ಹಿರಿಯ ನಿರ್ದೇಶಕರು, ತೋಟಗಾರಿಕಾ ಇಲಾಖೆ
from India & World News in Kannada | VK Polls https://ift.tt/3plveTW