ಮೇಲ್ಮನೆ ಕಣದಲ್ಲಿ ಹಣವೇ ಪ್ರಧಾನ..! ದುಡ್ಡಿನ ಜೊತೆಗೆ ಸೀರೆ, ಶರ್ಟು, ಆಣೆ ಪ್ರಮಾಣದ ಅಬ್ಬರ..!

: ಚಿಂತಕರ ಚಾವಡಿ ಎಂದೇ ಹೆಸರಾಗಿರುವ ವಿಧಾನ ಪರಿಷತ್‌ನ ಪ್ರವೇಶಕ್ಕೆ ಚುನಾವಣೆ ಗೆಲ್ಲಲು ಹಣವೇ ಪ್ರಧಾನ ಅಸ್ತ್ರವಾಗಿ ಬಳಕೆಯಾಗುತ್ತಿರುವ ವರ್ತಮಾನವಿದೆ. 25 ಸ್ಥಾನಗಳಿಗೆ ಡಿಸೆಂಬರ್‌ 10 ರಂದು ಮತದಾನ ನಡೆಯಲಿದ್ದು, ಈ ದಿನ ಹತ್ತಿರ ಬರುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಸದಸ್ಯರ ಮನವೊಲಿಕೆಗೆ ಹಣವನ್ನು ದಾಳವಾಗಿ ಬಳಲಾಗುತ್ತಿದೆ. ಕೆಲವೆಡೆ ಮುಕ್ತವಾಗಿ ಹಂಚಿಕೆ ನಡೆದ ವಿದ್ಯಮಾನಗಳು ನಡೆದರೆ ಕೆಲವು ಕಡೆ ತೆರೆ ಮರೆಯ ಚಟುವಟಿಕೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಹಣ ಹಂಚಿಕೆಯಲ್ಲಿ ಪೈಪೋಟಿ ತೋರಿಸುತ್ತಿದ್ದು, ಒಂದು ವೋಟಿಗೆ 20 ಸಾವಿರದಿಂದ 2 ಲಕ್ಷದವರೆಗೂ ಹಣ ಓಡಾಡುತ್ತಿದೆ. ವಸ್ತುಶಃ ಇದೊಂದು ಖರೀದಿಯ ಆಟದಂತೆ ಕಂಡು ಬರುತ್ತಿದೆ. ಆಣೆ ಪ್ರಮಾಣ: ಈ ನಡುವೆ ಹಣ ಪಡೆದವರು ತಮಗೇ ಮತ ನೀಡುತ್ತಾರೆ ಎಂಬ ಖಾತ್ರಿಯೂ ಅಭ್ಯರ್ಥಿಗಳು ಮತ್ತು ಪಕ್ಷಕ್ಕೆ ಇಲ್ಲದಿರುವುದರಿಂದ ಅವರನ್ನು ಕಟ್ಟಿ ಹಾಕಲು ಆಣೆ ಪ್ರಮಾಣದ ತಂತ್ರಗಳನ್ನು ಬಳಲಾಗುತ್ತಿದೆ. ಇನ್ನು ಕೆಲವು ಕಡೆ ಮತದಾರರ ಖುಷಿಗಾಗಿ ಭೋಜನ ಕೂಟ, ಪಾರ್ಟಿಗಳು ಏರ್ಪಾಟಾಗಿವೆ. ಮಹಿಳಾ ಮತದಾರರ ಓಲೈಕೆಗೆ , ಚಿನ್ನದ ಆಭರಣಗಳ ಉಡುಗೊರೆಯೂ ಜೋರಾಗಿದೆ. ಮತದಾರರೂ ಕಾಯುತ್ತಿದ್ದಾರೆ: ಇದೇ ವೇಳೆ ಮತದಾರರಾಗಿರುವ ಪಂಚಾಯಿತಿ ಸದಸ್ಯರು ಕೂಡಾ ಯಾವುದೇ ಲಜ್ಜೆ ಇಲ್ಲದೆ ಹಣ ಮತ್ತಿತರ ಆಮಿಷಗಳನ್ನು ಎದುರು ನೋಡುತ್ತಿದ್ದಾರೆ. ಎಲ್ಲೆಲ್ಲಿ ಹೇಗಿದೆ? (ಮೂಲಗಳ ಮಾಹಿತಿ) ಕೊಡಗು: ಕಾಂಗ್ರೆಸ್‌ ಈಗಾಗಲೇ 50 ಸಾವಿರ ರೂ., ಬಿಜೆಪಿ 20 ಸಾವಿರ ರೂ. ನೀಡಿದೆ ಎನ್ನಲಾಗುತ್ತಿದೆ. ಎರಡೂ ಪಕ್ಷಗಳು ಇನ್ನೂ ಒಂದು ಸುತ್ತಿನ ಹಣ ಹಂಚುವ ಸಾಧ್ಯತೆ ಇದ್ದು ತಲಾ 1 ಲಕ್ಷ ತಲುಪಬಹುದು ಎನ್ನುವ ಮಾತಿದೆ. ಹಾಸನ: 60 ಸಾವಿರದಿಂದ 1 ಲಕ್ಷ ರೂ. ನೀಡುತ್ತಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಖಚಿತ ಎಂಬ ಮತಕ್ಕೆ ಹೆಚ್ಚು ಹಣ. ಹಂಚಿಕೆಯಲ್ಲಿ ಜೆಡಿಎಸ್‌ ಮುಂದಿದ್ದರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್‌, ಬಿಜೆಪಿಗಳಿವೆ. ಮೈಸೂರು: ಜೆಡಿಎಸ್‌ನಿಂದ 50 ಸಾವಿರ, ಬಿಜೆಪಿಯಿಂದ 40 ಸಾವಿರ, ಕಾಂಗ್ರೆಸ್‌ನಿಂದ 30 ಸಾವಿರ ರೂ. ಹಂಚಿಕೆಯಾಗಿದೆ ಎಂಬ ಸುದ್ದಿ ಇದೆ. ಮತ ನೀಡುವುದರ ಬಗ್ಗೆ ಅನುಮಾನ ಇರುವವರಿಗೆ ನಿಗದಿಗಿಂತ ಹೆಚ್ಚು ಹಣ ನೀಡಲಾಗುತ್ತಿದೆ. ಚಾಮರಾಜನಗರ: ಜಿಲ್ಲೆಯಲ್ಲಿ 25 ರಿಂದ 30 ಸಾವಿರ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಅಲ್ಲದೇ ಅಭ್ಯರ್ಥಿಯೊಬ್ಬರು ಬೆಳ್ಳಿ ನಾಣ್ಯಗಳನ್ನು ಹಂಚುತ್ತಿದ್ದಾರೆ. ಮಂಡ್ಯ: ಜಿಲ್ಲೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಮೊದಲ ಹಂತದಲ್ಲಿ ತಲಾ 5,000 ಹಣ ನೀಡಿದ್ದಾರೆ. ಕಡೆಯ ದಿನದಂದು 40,000 ರೂ.ನಿಂದ 1 ಲಕ್ಷ ರೂ. ವರೆಗೆ ಏರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೋಲಾರ: ಜಿಲ್ಲೆಯಲ್ಲಿ ಒಂದು ಲಕ್ಷದವರೆಗೂ ಹಣ ನೀಡುತ್ತಿರುವ ಸುದ್ದಿ ಇದೆ. ಲಡ್ಡು, ಮಂಜುನಾಥನ ಪ್ರಸಾದ, ರೇಷ್ಮೆ ಸೀರೆ, ಪಂಚೆ, ಶರ್ಟ್‌ ಕೂಡಾ ಚಲಾವಣೆಯಲ್ಲಿದೆ. ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ ಚಲಾವಣೆ ಖಚಿತವಾದರೆ 50,000 ರೂ. ಭರವಸೆ ನೀಡಲಾಗುತ್ತಿದೆ. ಶಿವಮೊಗ್ಗ: ಜಿಲ್ಲೆಯಲ್ಲಿ 25 ಸಾವಿರ ರೂ. ನೀಡುವ ಆಮಿಷ ಒಡ್ಡಲಾಗಿದೆಯಂತೆ. ವಿಜಯ ನಗರ: ಜಿಲ್ಲೆಯಲ್ಲಿ ಕಾಂಗ್ರೆಸ್‌ 25 ಸಾವಿರ, ಬಿಜೆಪಿ 30 ಸಾವಿರ ರೂ.ಗಳ ಆಮಿಷ ಒಡ್ಡಿರುವ ಮಾಹಿತಿ ಇದೆ. ವಿಜಯಪುರ: ಜಿಲ್ಲೆಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿ ಮತ್ತು ಪಕ್ಷೇತರರು 10 ಸಾವಿರ ಕೊಡಬಹುದು ಎಂಬ ಮಾಹಿತಿ ಇದೆ. ಕಲಬುರಗಿ: ಜಿಲ್ಲೆಯಲ್ಲಿ ಕಾಂಗ್ರೆಸ್‌ 15 ಸಾವಿರದಲ್ಲಿದ್ದರೆ, ಬಿಜೆಪಿ 30 ಸಾವಿರಕ್ಕೇರಿದೆ ಎನ್ನಲಾಗಿದೆ. ಬೀದರ್‌: ಇಲ್ಲಿ ಬೆಳ್ಳಿ ನಾಣ್ಯ, ಸೀರೆ, ದೇವರ ಚಿತ್ರವಿರುವ ತಾಮ್ರದ ನಾಣ್ಯವೆಲ್ಲ ಓಡಾಡುತ್ತಿದೆ. ಬೆಂಗಳೂರು ನಗರ: ಜಿಲ್ಲೆಯಲ್ಲಿ 2 ಲಕ್ಷ ರೂ.ವರೆಗೂ ಹಣ ಹಂಚಲಾಗುತ್ತಿದೆ ಎನ್ನಲಾಗಿದೆ. ದಾವಣಗೆರೆ, ಚಿತ್ರದುರ್ಗದಲ್ಲಿ ಸೀರೆ, ಶರ್ಟು..! ಬಿಜೆಪಿಯಿಂದ ಮಹಿಳಾ ಮತದಾರರಿಗೆ ಬಿಜೆಪಿಯಿಂದ ಸೀರೆ ಹಂಚಿಕೆ ಆಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ನವರು 50 ಸಾವಿರ ಕೊಡ್ತಾರೆ ಎಂಬ ಸುದ್ದಿಯಿದೆ, ಬಿಜೆಪಿ ಅದಕ್ಕಿಂತ ಹೆಚ್ಚು ಕೊಡಲಿದೆ ಎನ್ನಲಾಗಿದೆ. ಚಿತ್ರದುರ್ಗದಲ್ಲಿ 50 ಸಾವಿರದಿಂದ ಆರಂಭ. ಯಾವ ಪಕ್ಷದವರು ಮೊದಲು ಹಣ ನೀಡುತ್ತಾರೋ ಅದಕ್ಕಿಂತಲೂ ಐದು, ಹತ್ತು ಸಾವಿರ ಹಣ ಹೆಚ್ಚು ನೀಡಿ ಮತ ಪಡೆಯುವ ತಂತ್ರಗಾರಿಕೆ ನಡೆಯುತ್ತಿದೆ. ಈಗಾಗಲೇ ಎರಡೂ ಪಕ್ಷಗಳು ಕೆಲ ತಾಲೂಕುಗಳಲ್ಲಿ ಸೀರೆ, ಪಂಚೆ, ಶರ್ಟ್‌ ಹಂಚಿವೆ. ದೇವರ ಹೆಸರು ಬಳಕೆಗೂ ಸ್ಪರ್ಧೆ ಉತ್ತರ ಕನ್ನಡದಲ್ಲಿ ಹಣ ಹಂಚಿಕೆ ಜತೆಗೆ ತಮಗೇ ವೋಟು ನೀಡುವಂತೆ ದೇವರ ಮೇಲೆ ಪ್ರಮಾಣ ಮಾಡಿಸಲಾಗುತ್ತಿದೆ. ಸ್ಥಳೀಯ ಗ್ರಾಮ ದೇವರು, ಧರ್ಮಸ್ಥಳ ಮತ್ತು ಇಡಗುಂಜಿ ಗಣಪನ ಹೆಸರಲ್ಲಿ ಹೆಚ್ಚಾಗಿ ಆಣೆ ನಡೆಯುತ್ತಿದೆ. ಅಭ್ಯರ್ಥಿಗಳಿಂದ ಉಡುಗೊರೆ ಪಡೆಯುವ ಮತದಾರ ತೆಂಗಿನಕಾಯಿ ಮುಟ್ಟಿ ಅವರು ಹೇಳುವ ದೇವರ ಹೆಸರಿನಲ್ಲಿ ಆಣೆ ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಭಂಡಾರ ಮತ್ತು ವಿಭೂತಿ ಮೇಲೆ ಆಣೆ ಮಾಡಿಸಲಾಗುತ್ತಿದೆ. 'ನಮ್ಮ ಶಾಸಕರುಗಳೇ ಕೋಟಿಗಟ್ಟಲೆ ಹಣ ಪಡೆದು ರಾಜಕೀಯ ಪಕ್ಷಗಳನ್ನೇ ಬದಲಾಯಿಸುತ್ತಾರೆ. ರಾಜ್ಯಸಭಾ ಚುನಾವಣೆಯಲ್ಲೂ ಇದೇ ರೀತಿ ನಡೆದುಕೊಳ್ಳುತ್ತಾರೆ. ಹೀಗಿರುವಾಗ, ರಾಜಕೀಯ ಚಿಹ್ನೆಯ ಹಂಗಿಲ್ಲದೇ ಗೆಲ್ಲುವ ನಮ್ಮ ಮೇಲೆ ಸಿಟ್ಟೇಕೆ?' ಅನ್ನೋದು ಹುಣಸೂರಿನ ಪಂಚಾಯಿತಿ ಸದಸ್ಯರೊಬ್ಬರ ಪ್ರಶ್ನೆ.


from India & World News in Kannada | VK Polls https://ift.tt/3y8RFjh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...