ಹಾಸನದಲ್ಲಿ ಮೇಲ್ಮನೆಗಾಗಿ ಮಾತಿನ ಮಹಾಸಮರ: ಜೆಡಿಎಸ್ ಪಕ್ಷದಿಂದ ಬೆದರಿಕೆ, ಆರೋಪ; ಕಾಂಗ್ರೆಸ್ ನಿಂದ ದೂರು!

ಪ್ರಕಾಶ್‌ ಜಿ. ಹಾಸನ ಹಾಸನ: ವಿಧಾನ ಪರಿಷತ್‌ ಚುನಾವಣೆಗೆ ಕೌಂಟ್‌ಡೌನ್‌ ಪ್ರಾರಂಭವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಕೆಸರೆರಚಾಟ, ಆರೋಪ, ಪ್ರತ್ಯಾರೋಪವಷ್ಟೇ ಅಲ್ಲ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮಟ್ಟಕ್ಕೆ ಮುಂದುವರಿದಿದೆ. ಮತ ನೀಡಿದ ಫೋಟೊ ತರಬೇಕು ಎಂದು ಜನಪ್ರತಿನಿಧಿಗಳಿಗೆ ಜೆಡಿಎಸ್‌ ಬೆದರಿಕೆ ಹಾಕಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಪರಿಷತ್‌ ಚುನಾವಣೆಯು 2023ರ ವಿಧಾನ ಸಭೆ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೇಲ್ನೋಟಕ್ಕೆ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ ಫಲಿತಾಂಶವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದಂತಿದೆ. ಜೆಡಿಎಸ್‌ ಹಿಂದೆ ಮಾಡಿದ ತಪ್ಪಿನಿಂದ ಪರಿಷತ್‌ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಯಿತು ಎಂಬ ಕಹಿ ಅನುಭವದ ಪಾಠದಿಂದ ಈ ಬಾರಿ ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ, ರೇವಣ್ಣ ಅವರ ಪುತ್ರ ಡಾ.ಸೂರಜ್‌ ರೇವಣ್ಣ ಅವರನ್ನೇ ಕಣಕ್ಕಿಳಿಸಲಾಗಿದೆ. ಇದು ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿಯೂ ಇರುವ ಕಾರಣ ಬತ್ತಳಿಕೆಯಿಂದ ಎಲ್ಲ ಬಗೆಯ ಬಾಣವನ್ನು ಪ್ರಯೋಗಿಸುತ್ತಿದೆ. ಶಾಸಕ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್‌ರೇವಣ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸೇರಿದಂತೆ ಜೆಡಿಎಸ್‌ನ ಆರು ಶಾಸಕರು ಟೊಂಕಕಟ್ಟಿ ನಿಂತಿದ್ದಾರೆ. ಜೆಡಿಎಸ್‌ ಮೇಲ್ಮಟ್ಟದಲ್ಲಿ ಬಿಜೆಪಿ ಬಗ್ಗೆ ಸಹಾನುಭೂತಿಯ ಮಾತನ್ನಾಡುತ್ತಿದ್ದರೂ, ಜಿಲ್ಲೆಯಲ್ಲಿ ಕಮಲಪಕ್ಷ ತನ್ನ ಅಭ್ಯರ್ಥಿ ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಅವರನ್ನು ಗೆಲ್ಲಿಸಿಕೊಳ್ಳಲು ರಾಜಕೀಯ ಬುದ್ಧಿಶಕ್ತಿ ಪ್ರದರ್ಶಿಸುತ್ತಿದೆ. ಜೆಡಿಎಸ್‌ನ ಕುಟುಂಬ ರಾಜಕಾರಣ ತಿರಸ್ಕರಿಸಿ ಎಂಬ ಘೋಷಣೆ ಮೊಳಗಿಸುತ್ತಿದೆ. ಜಿಲ್ಲಾಉಸ್ತುವಾರಿ ಸಚಿವ ಗೋಪಾಲಯ್ಯ, ಪಕ್ಷದ ಮುಖಂಡ ರವಿ, ಶಾಸಕ ಪ್ರೀತಂ ಜೆ.ಗೌಡ ಸೇರಿದಂತೆ ಹಲವು ಮುಖಂಡರು ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ ತೆಕ್ಕೆಯಲ್ಲಿದ್ದ ಹಾಸನ ವಿಧಾನಸಭೆ ಕ್ಷೇತ್ರವನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ ಅದೇ ರೀತಿ ವಿಧಾನ ಪರಿಷತ್‌ ಚುನಾವಣೆಯಲ್ಲೂ ಜಾದೂ ಮಾಡುವ ಉತ್ಸಾಹದಲ್ಲಿದೆ. ಆದರೆ ಪಕ್ಷದ ಹೈಕಮಾಂಡ್‌ ಜೆಡಿಎಸ್‌ನೊಂದಿಗಿನ ಹೊಂದಾಣಿಕೆ ಕುರಿತು ನೀಡುತ್ತಿರುವ ಹೇಳಿಕೆಯೇ ಅಭ್ಯರ್ಥಿ ಗೆಲುವಿಗೆ ಮುಳ್ಳಾದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಅಸಮಾಧಾನದ ಮಾತುಗಳು ಪಕ್ಷದ ಸಭೆಯಲ್ಲಿ ವ್ಯಕ್ತವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಭವಿಷ್ಯದ ನಿರೀಕ್ಷೆಯನ್ನು ಹೊತ್ತಿರುವ ಕಾಂಗ್ರೆಸ್‌, ಪರಿಷತ್‌ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜೆಡಿಎಸ್‌ ಕುಟುಂಬ ರಾಜಕಾರಣಕ್ಕೆ ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಮತದಾರರು ಇತಿಶ್ರೀ ಹಾಡಲಿದ್ದಾರೆ ಎಂಬ ವಿಶ್ವಾಸದ ಜತೆಗೆ ಈ ಚುನಾವಣೆ ರಾಜಕೀಯ ಹಬ್ಬ, ದುರಹಂಕಾರಕ್ಕೆ ಮದ್ದು ನೀಡುವ ಕಾಲ ಸನ್ನಿತವಾಗಿದೆ ಎನ್ನುತ್ತಾರೆ ಕೈಪಕ್ಷದ ಜಿಲ್ಲಾಧ್ಯಕ್ಷ ಜಾವ್‌ಗಲ್‌ ಮಂಜುನಾಥ್‌. ಕಾಂಗ್ರೆಸ್‌ ಅಭ್ಯರ್ಥಿ ಶಂಕರ್‌ಗೆ ರಾಜಕೀಯ ಹೊಸತಲ್ಲದಿದ್ದರೂ, ಚನ್ನರಾಯಪಟ್ಟಣ ತಾಲೂಕಿಗೆ ಸೀಮಿತವಾಗಿ ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದವರು. ಇದೀಗ ಜಿಲ್ಲೆಗೆ ಅದು ವಿಸ್ತರಿಸಬೇಕಿದೆ. ಇದಕ್ಕಾಗಿ ಯಾವತಂತ್ರ ಪ್ರಯೋಗಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಮುಖಂಡರು ಮಾತ್ರ ಜೆಡಿಎಸ್‌ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಜೆಡಿಎಸ್‌ ಬಿಜೆಪಿಯ ಬಿಟೀಂ ಎಂಬ ಆರೋಪ ಸತ್ಯವೇ ಆಗಿದೆ. ಮೇಲ್ನೋಟಕ್ಕೆ ಬಿಜೆಪಿ ತನ್ನ ಅಭ್ಯರ್ಥಿ ವಿಶ್ವನಾಥ್‌ ಅವರನ್ನು ಕಣಕ್ಕಿಳಿಸಿದೆ ಎಂದು ಆರೋಪಿಸಿದೆ.


from India & World News in Kannada | VK Polls https://ift.tt/3xRFTcT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...