
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹರ್ಷಚಿತ್ತರಾಗಿ ಕಾಣಿಸಿಕೊಳ್ಳುವುದರೊಂದಿಗೆ ಬಿಜೆಪಿ-ಜೆಡಿಎಸ್ ನಡುವೆ ಮರು ಮೈತ್ರಿಗೆ ತಾಲೀಮು ಆರಂಭವಾದಂತಾಗಿದೆ. ಇದರ ಭಾಗವಾಗಿ ಎಂಎಲ್ಸಿ ಚುನಾವಣೆಯಲ್ಲೆ ಹಳೆ ದೋಸ್ತಿಗಳ ಮಧ್ಯೆ ಹೊಂದಾಣಿಕೆಯ ಸಾಧ್ಯತೆ ನಿಚ್ಚಳವಾಗಿದೆ. ಪ್ರಧಾನಿ - ಮಾಜಿ ಪ್ರಧಾನಿ ಭೇಟಿಗೆ ಮಹತ್ವ ಬಂದಿದೆ. ಹಾಗೆಯೇ ಬಿಜೆಪಿ-ಜೆಡಿಎಸ್ ಹೊಂದಾಣಿಕೆಗೆ ಪೂರಕವಾದ ಬೆಳವಣಿಗೆಗಳೂ ರಾಜ್ಯದಲ್ಲಿ ನಡೆಯುತ್ತಿವೆ. ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದರು. ಪ್ರಾರಂಭದಲ್ಲಿ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅಂತರ ಕಾಯ್ದುಕೊಂಡಿದ್ದರು. ಈಗ ಅವರೂ ಮೈತ್ರಿ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ನಿರ್ಣಯ ಮಾಡುತ್ತಾರೆ ಎಂದಿದ್ದಾರೆ. ದೇವೇಗೌಡರು ದಿಲ್ಲಿಯಿಂದ ಬಂದ ಬಳಿಕ ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಚ್ಡಿಕೆ ತೀರ್ಮಾನವೇ ಅಂತಿಮ ಕಾಂಗ್ರೆಸ್, ಬಿಜೆಪಿಯೊಂದಿಗೆ ಬೇರೆ ಬೇರೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಕುಮಾರಸ್ವಾಮಿ ಅವರಿಗಿದೆ. ಈ ಪೈಕಿ ಬಿಜೆಪಿ ಜತೆಗೆ ಹೊಂದಿಕೊಳ್ಳುವುದು ಸುಲಭ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ. ದೇವೇಗೌಡರು ಜಾತ್ಯತೀತ ನೆಲೆಯಲ್ಲಿ ಕಾಂಗ್ರೆಸ್ನೊಂದಿಗೆ ಹೋಗಬೇಕು ಎಂಬ ನಿಲುವು ತಳೆಯುತ್ತಿದ್ದರು. ಆದರೆ, ಮೈತ್ರಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಕುಮಾರಸ್ವಾಮಿ ಅವರಿಗೆ ಗೌಡರು ಅಭಯ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಾಗಿ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಕುಮಾರಸ್ವಾಮಿ ನಿರ್ಧರಿಸುತ್ತಾರೆ. ಬಿಜೆಪಿಯೊಂದಿಗೆ ಹೆಜ್ಜೆ ಹಾಕುವುದು ಎಚ್ಡಿಕೆ ಅವರ ಸಹಜ ಆಯ್ಕೆಯಾಗಿರಲಿದೆ. ಮೇಲ್ಮನೆ ಚುನಾವಣೆ ಹೊಂದಾಣಿಕೆ ಮೂಲಕವೇ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಸಕ್ತಿಯಿದ್ದರೂ ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಕಡ್ಡಿ ತುಂಡು ಮಾಡಿದಂತೆ ಮುರಿದುಕೊಳ್ಳಲು ದೇವೇಗೌಡರಿಗೆ ಇಷ್ಟವಿಲ್ಲ. ಈ ಬಾರಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗುವಾಗ ಕಾಂಗ್ರೆಸ್ನ ಸಹಕಾರವೂ ಇತ್ತು. ಈ ಸಂಬಂಧ ಸೋನಿಯಾ ಗಾಂಧಿ ಅವರೇ ಕೆಪಿಸಿಸಿಗೆ ಸೂಚನೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ, ಸ್ಥಳೀಯ ಕಾಂಗ್ರೆಸ್ ನಾಯಕರ ಬಗ್ಗೆ ಜೆಡಿಎಸ್ಗೆ ಅಸಮಾಧಾನವಿದೆ. ಅದರಲ್ಲೂ ಸಿದ್ದರಾಮಯ್ಯ ಅವರು ಅವಕಾಶ ಸಿಕ್ಕಾಗೆಲ್ಲ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕಾರಣದಿಂದಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೆಡಿಎಸ್ ಮೈತ್ರಿ ಇಷ್ಟವಿದ್ದರೂ ಸ್ಥಳೀಯ ಕಾಂಗ್ರೆಸಿಗರ ಮನಸ್ಸಿನಲ್ಲಿ ಈ ಭಾವನೆ ಇಲ್ಲವೆಂದು ದೇವೇಗೌಡರು ಹೇಳಿದ್ದಾರೆ. ಬಿಎಸ್ವೈ, ವಿಜಯೇಂದ್ರ ಸಕ್ರಿಯ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಸಕ್ರಿಯರಾಗಿದ್ದಾರೆ. ಇತ್ತೀಚಿನ ಉಪ ಚುನಾವಣೆಯಲ್ಲೂ ಬಿಎಸ್ವೈ ಆಸಕ್ತಿಯಿಂದಲೇ ಪ್ರಚಾರ ಮಾಡಿದ್ದರು. ಆದರೆ, ಪಕ್ಷವೇ ಅವರನ್ನು ದೂರವಿಡುವ ಪ್ರಯತ್ನ ಮಾಡಿತ್ತು ಎಂಬ ಟೀಕೆ ಕೇಳಿ ಬಂದಿತ್ತು. ಇದರ ನಡುವೆ ಹಾನಗಲ್ನಲ್ಲಿ ಪಕ್ಷಕ್ಕೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಎಸ್ವೈ ಅವರನ್ನು ಪಕ್ಷವೇ ಮುಂಚೂಣಿಗೆ ಬಿಟ್ಟಿದೆ. ವರಿಷ್ಠರಿಂದಲೂ ಇಂಥದೊಂದು ಸಂದೇಶ ಬಂದಿದೆ. ಹಾಗಾಗಿ ಮೈತ್ರಿ ವಿಚಾರದಲ್ಲೂ ಮಾತುಕತೆ ನಡೆಸಲು ಬಿಎಸ್ವೈ ಅವರನ್ನು ಮುಂದೆ ಬಿಡಲಾಗಿದೆ ಎನ್ನಲಾಗಿದೆ. ಆರ್ಎಸ್ಎಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ಎಚ್ಡಿಕೆ ಸಿಂದಗಿ, ಹಾನಗಲ್ ಉಪ ಚುನಾವಣೆ ಸಂದರ್ಭದಲ್ಲಿ ಆರ್.ಎಸ್.ಎಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದರು. ಉಪ ಚುನಾವಣೆ ಉದ್ದಕ್ಕೂ ಆರ್ಎಸ್ಎಸ್ ವಿರುದ್ಧ ಹರಿಹಾಯ್ದಿದ್ದ ಎಚ್ಡಿಕೆ, ಈಗ ಹೇಗೆ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುತ್ತಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
from India & World News in Kannada | VK Polls https://ift.tt/3Ev8ZBz