ಬೆಂಗಳೂರು: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಕಂಡ ಸರ್ವಶ್ರೇಷ್ಠ ನಾಯಕ ಎಂದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಟ್ವೀಟ್ ಮಾಡುವ ಮೂಲಕ ಗುಣಗಾನ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಹಣಾಣಿಯಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿತು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತನಗನ ಬಹುದೊಡ್ಡ ಗೆಲುವಾಗಿ ಕಿವೀಸ್ ಎದುರು 372 ರನ್ಗಳ ಅದ್ಭುತ ಗೆಲುವು ದಕ್ಕಿಸಿಕೊಂಡಿತು. ಅಲ್ಲದೆ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯ ಡ್ರಾ ಫಲಿತಾಂಶ ಕಂಡಿತ್ತು. "ನಾನು ಈ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಸರ್ವಶ್ರೇಷ್ಠ ನಾಯಕ ಎಂದು. ಅವರ ಗೆಲುವಿನ ಸರಾಸರಿ 59.09ರಷ್ಟಿದ್ದು ಅಗ್ರಸ್ಥಾನದಲ್ಲಿದ್ದಾರೆ. ಅಂದಹಾಗೆ 2ನೇ ಸ್ಥಾನದಲ್ಲಿರುವ ನಾಯಕನ ಸರಾಸರಿ 45ರಷ್ಟಿದೆ," ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ವಿಶೇಷ ವಿಶ್ವ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಮತ್ತು ಟಿ20-ಐ ಕ್ರಿಕೆಟ್ ಮೂರೂ ಮಾದರಿಗಳಲ್ಲಿ ನಾಯಕನಾಗಿ 50ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ಏಕಮಾತ್ರ ನಾಯಕ ಎಂಬ ವಿಶೇಷ ದಾಖಲೆ ಬರೆದಿದ್ದಾರೆ. ಭಾರತ ತಂಡ ಈಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಭಾಗವಾಗಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಡಿಸೆಂಬರ್ 26ರಂದು ಶುರುವಾಗಲಿದೆ. ಭಾರತ ತಂಡ ಡಿ. 16ರಂದು ಮುಂಬೈನಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಬುಧವಾರ ತಂಡ ಪ್ರಕಟ!ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಈಗಾಗಗಲೇ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ ಡೀನ್ ಎಲ್ಗರ್ ಸಾರಥ್ಯದ 21 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟ ಮಾಡಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಪ್ರವಾಸಕ್ಕೆ ಭಾರತ ತಂಡವನ್ನು ಬುಧವಾರ (ಡಿ.8) ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಈಗಾಗಗಲೇ ವರದಿಗಳಾಗಿದೆ. ವರದಿಗಳ ಪ್ರಕಾರ ಭಾರತ ಟೆಸ್ಟ್ ತಂಡಕ್ಕೆ ಉಪನಾಯಕನಾಗಿ ಅಜಿಂಕ್ಯ ರಹಾನೆ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ರಹಾನೆ ಸ್ಥಾನ ಕಳೆದುಕೊಂಡು ರೋಹಿತ್ ಶರ್ಮಾ ನೂತನ ಉಪನಾಯಕನಾಗುತ್ತಾರೆ ಎಂಬ ವದಂತಿಗಳಿದ್ದವು. ಆದರೆ, ಕಳೆಗುಂದಿರುವ ದಕ್ಷಿಣ ಆಫ್ರಿಕಾ ತಂಡದ ಎದುರು ಅವರದ್ದೇ ನಾಡಲ್ಲಿ ಈ ಬಾರಿ ಟೆಸ್ಟ್ ಸರಣಿ ಗೆದ್ದು ಮೊತ್ತ ಮೊದಲ ಬಾರಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಭಾರತ ತಂಡಕ್ಕಿದೆ. ಹೀಗಾಗಿ ಬಿಸಿಸಿಐ ಅನುಭವಿಗಳಿಗೆ ಮಣೆಹಾಕುವ ಸಾಧ್ಯತೆ ಹೆಚ್ಚು. ಜೊತೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ಸರಾಸರಿ 53ಕ್ಕೂ ಹೆಚ್ಚಿದೆ. ವಿರಾಟ್ ಕೊಹ್ಲಿ ನಂತರ ಅತ್ಯುತ್ತಮ ಸರಾಸರಿ ಹೊಂದಿರುವ ಬ್ಯಾಟ್ಸ್ಮನ್ ಅವರು. ಹೀಗಾಗಿ ರಹಾನೆ ವೈಸ್ ಕ್ಯಾಪ್ಟನ್ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ಸರಣಿಯಲ್ಲೂ ರಹಾನೆ ವೈಫಲ್ಯ ಕಂಡರೆ ಭಾರತ ತಂಡದಿಂದ ಹೊರಬೀಳುವುದು ನಿಶ್ಚಿತ. ಟೆಸ್ಟ್ ಸರಣಿ ವೇಳಾಪಟ್ಟಿಪ್ರಥಮ ಟೆಸ್ಟ್: ಡಿಸೆಂಬರ್ 26-30, ಸೆಂಚೂರಿಯನ್ ದ್ವಿತೀಯ ಟೆಸ್ಟ್: ಜನವರಿ 03-07, ಜೊಹಾನ್ಸ್ಬರ್ಗ್ ತೃತೀಯ ಟೆಸ್ಟ್: ಜನವರಿ 11-15, ಕೇಪ್ ಟೌನ್ ಏಕದಿನ ಕ್ರಿಕೆಟ್ ಸರಣಿಪ್ರಥಮ ಒಡಿಐ: ಜನವರಿ 19, ಪಾರ್ಲ್ ದ್ವಿತೀಯ ಒಡಿಐ: ಜನವರಿ 21, ಪಾರ್ಲ್ ತೃತೀಯ ಒಡಿಐ: ಜನವರಿ 23, ಕೇಪ್ ಟೌನ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Dxau0D