ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಮೇಲೆ ಯೋಧರಿಂದ ಏಕಾಏಕಿ ದಾಳಿ: ಮೃತದೇಹ ಮರೆಮಾಚಲು ಸೇನೆ ಯತ್ನ..?

ಕೋಹಿಮಾ (): ಗಣಿ ಕೆಲಸದಿಂದ ಮನೆಗೆ ವಾಪಸಾಗುತ್ತಿದ್ದ ಕಾರ್ಮಿಕರಿಗೆ ಗುಂಡಿಕ್ಕುವ ಮುನ್ನ ಅವರು ಹೌದೋ ಅಲ್ಲವೋ ಎನ್ನುವುದನ್ನು ತಿಳಿಯುವ ಯಾವುದೇ ಪ್ರಯತ್ನವನ್ನು ವಿಶೇಷ ಪಡೆ ಮಾಡಿಲ್ಲ ಎಂದು ನಾಗಾಲ್ಯಾಂಡ್‌ ನೇತೃತ್ವದ ಸತ್ಯ ಶೋಧನಾ ವರದಿ ತಿಳಿಸಿದೆ. ಡಿಸೆಂಬರ್‌ 4ರಂದು ನಾಗಾಲ್ಯಾಂಡ್‌ನ ಮೋನ್‌ ಜಿಲ್ಲೆಯಲ್ಲಿ 14 ನಾಗರಿಕರನ್ನು ಸೈನಿಕರು ಗುಂಡಿಕ್ಕಿ ಹತ್ಯೆಗೈದಿದ್ದರು. ಅವರು ನಿಷೇಧಿತ ಸಂಘಟನೆಯ ಬಂಡುಕೋರರು ಇರಬಹುದು ಎನ್ನುವ ತಪ್ಪು ಗ್ರಹಿಕೆಯಿಂದ ಹಠಾತ್‌ ಗುಂಡಿನ ದಾಳಿ ನಡೆಸಿತ್ತು. ಗಣಿ ಕೆಲಸ ಮುಗಿಸಿ ವ್ಯಾನ್‌ನಲ್ಲಿ ಓಟಿಂಗ್‌ನ ತಮ್ಮ ಮನೆಗಳಿಗೆ ಹೊರಟಿದ್ದ ಆ ಕಾರ್ಮಿಕರು, ಕಾಡಿನ ಮಧ್ಯೆ ಯೋಧರ ಗುಂಡಿಗೆ ಬಲಿಯಾಗಿದ್ದರು. 'ಚೆಲ್ಲಾಪಿಲ್ಲಿಯಾಗಿ ಬಿದ್ದ ಆರು ಮೃತದೇಹಗಳನ್ನು ಯೋಧರು ಒಟ್ಟುಗೂಡಿಸಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿದ್ದರು. ಆ ಮೃತದೇಹಗಳನ್ನು ತಮ್ಮ ಬೇಸ್‌ ಕ್ಯಾಂಪಿಗೆ ಸಾಗಿಸಿ ಮರೆ ಮಾಚಲು ಕಮಾಂಡೋ ಪಡೆ ಯತ್ನಿಸಿತ್ತು' ಎನ್ನುವ ಸಂಗತಿಯನ್ನು ರಾಜ್ಯ ಡಿಜಿಪಿ ಟಿ. ಜಾನ್‌ ಲಾಂಗ್‌ ಕುಮಾರ್‌ ಮತ್ತು ಆಯುಕ್ತ ರೊವಿಲಾಟುವೊ ಮೊರ್‌ ಸಿದ್ಧಪಡಿಸಿದ ಜಂಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ, ಮೃತ ದೇಹಗಳನ್ನು ಮರೆ ಮಾಚುವ ಯಾವುದೇ ಪ್ರಯತ್ನವನ್ನು ತಾವು ಮಾಡಿಲ್ಲ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕಮಾಂಡೋ ಅಧಿಕಾರಿಗಳು ಹೇಳಿದ್ದಾರೆ. 'ಡಿಸೆಂಬರ್ 4 ರ ಸಂಜೆ ತಿರು ಪ್ರದೇಶದಿಂದ ಎಂಟು ಕಾರ್ಮಿಕರು ವಾಹನದಲ್ಲಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಹಠಾತ್‌ ಎದುರಾದ ಕಮಾಂಡೋ ಪಡೆ, ಯಾವುದೇ ರೀತಿಯ ವಿಚಾರಣೆ ನಡೆಸದೇ ಏಕಾಏಕಿ ವ್ಯಾನ್‌ ಮೇಲೆ ಗುಂಡಿನ ದಾಳಿ ನಡೆಸಿತು. ವ್ಯಾನ್‌ನಲ್ಲಿದ್ದ ಎಂಟು ಮಂದಿ ಬಳಿ ಯಾವುದೇ ರೀತಿಯ ಆಯುಧ ಇರಲಿಲ್ಲ. ಬರಿಗೈಯಲ್ಲಿದ್ದವರ ಮೇಲೆ ಸೇನೆ ಗುಂಡು ಹಾರಿಸಿತು. ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ಇಬ್ಬರು ಗಂಭೀರವಾಗಿ ಗಾಯಗೊಂಡರು. ನಂತರ ಅವರ ಅಮಾಯಕತೆ ಬಗ್ಗೆ ತಿಳಿದ ಸೇನೆ, ಮೃತದೇಹಗಳನ್ನು ಸುತ್ತಿಕೊಂಡು ಮತ್ತೊಂದು ವ್ಯಾನ್‌ನಲ್ಲಿ ಹಾಕಿ ಬೇಸ್‌ ಕ್ಯಾಂಪಿಗೆ ಸಾಗಿಸುವ ಯತ್ನ ನಡೆಸಿತ್ತು. ಅದೇ ವೇಳೆಗೆ ಓಟಿಂಗ್‌ ಗ್ರಾಮಸ್ಥರು ಸ್ಥಳಕ್ಕೆ ಬಂದು ಪ್ರತಿ ದಾಳಿ ನಡೆಸಿದರು. ಯೋಧನೊಬ್ಬ ಮೃತಪಟ್ಟ ಬಳಿಕ ಕಮಾಂಡೋ ಪಡೆ ಗ್ರಾಮಸ್ಥರ ಮೇಲೂ ಗುಂಡು ಹಾರಿಸಿತು. ಆಗ ಇನ್ನೂ ಏಳು ಮಂದಿ ಬಲಿಯಾದರು' ಎಂದು ವರದಿ ವಿವರಿಸಿದೆ. ಉದ್ವಿಗ್ನ ಸ್ಥಿತಿ: ಘಟನೆ ಖಂಡಿಸಿ ನಾಗಾಲ್ಯಾಂಡಿನ ವಿವಿಧ ಸಂಘಟನೆಗಳು ಮಂಗಳವಾರವೂ ಬಂದ್‌ ಆಚರಣೆ ಮಾಡಿದವು. ಮೋನ್‌ ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಕಂಡು ಬಂತು. ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೈನಿಕರ ವಿಶೇಷಾಧಿಕಾರ ಕಾಯಿದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಾಗಾಲ್ಯಾಂಡ್‌ ಸರಕಾರವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಸೇನಾ ತನಿಖೆಗೆ ಆದೇಶ: ಏತನ್ಮಧ್ಯೆ, ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಮೇಜರ್‌ ಜನರಲ್‌ ನೇತೃತ್ವದ ತನಿಖೆಗೆ ಆದೇಶ ನೀಡಿದೆ. 'ಗುಪ್ತಚರ ಮಾಹಿತಿ' ಮತ್ತು 'ಪರಿಸ್ಥಿತಿ' ಅನಿವಾರ್ಯತೆಯಿಂದ ಈ ಅನಾಹುತ ಘಟಿಸಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಲೆಫ್ಟಿನೆಂಟ್‌ ಜನರಲ್ ಅಶೋಕ್‌ ಮೆಹ್ತಾ ಹೇಳಿದರು.


from India & World News in Kannada | VK Polls https://ift.tt/3Dy5859

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...