ಪ್ರಮೋದ ಹರಿಕಾಂತ ಕಾರವಾರ ಕಾರವಾರ: ಮುಹೂರ್ತಗಳು ಪ್ರಶಸ್ತವಾಗಿರುವ ಡಿಸೆಂಬರ್ನಲ್ಲೇ ಒಮಿಕ್ರಾನ್ ವೈರಸ್ ರಾಜ್ಯಕ್ಕೆ ಕಾಲಿಟ್ಟಿದ್ದರಿಂದ ಮದುವೆ ನಿಶ್ಚಯವಾಗಿದ್ದ ನವ ಜೋಡಿಗಳಲ್ಲಿ ಮತ್ತೆ ಆತಂಕ ಶುರುವಾಗಿದೆ. ಮುಂದಿನ ತಿಂಗಳಿಂದ ವಿವಾಹ ಮುಹೂರ್ತ ಕಡಿಮೆ ಇರುವುದರಿಂದ ಎಲ್ಲೆಡೆ ಮದುವೆ ಗಡಿಬಿಡಿ ಹೆಚ್ಚಾಗಿದೆ. ಕಳೆದ ವರ್ಷವೂ ಕೊರೊನಾ ಎರಡನೇ ಅಲೆಯಿಂದ ಮದುವೆ ಸಮಾರಂಭಗಳು ನಿಂತಿದ್ದವು. ಅನೇಕರು ಅದ್ಧೂರಿ ಮದುವೆ ಸಲುವಾಗಿ ದಿನಾಂಕ ಮುಂದೂಡಿ ಒಂದು ವರ್ಷ ಮೊದಲೇ ಕಲ್ಯಾಣ ಮಂಟಪ ಬುಕ್ಕಿಂಗ್ ಮಾಡಿದ್ದರು. ಈ ವರ್ಷ ಡಿಸೆಂಬರ್ನಲ್ಲಿ ಬುಕ್ಕಿಂಗ್ ಆಗಿರುವ ಮದುವೆಗಳ ಪೈಕಿ ಬಹುತೇಕ ಹಿಂದಿನ ವರ್ಷ ರದ್ದಾದ ಮದುವೆಗಳೇ ಆಗಿವೆ. ಅದರ ಜತೆಗೆ ಈ ವರ್ಷ ಮದುವೆ ನಿಶ್ಚಯ ಮಾಡಿಕೊಳ್ಳುವವರಿಗೆ ಕಲ್ಯಾಣ ಮಂಟಪ ಹುಡುಕುವುದೇ ಸವಾಲಾಗುತ್ತಿದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿ ವಿವಾಹದ ಬಳಿಕ ಮದುವೆ ಸಮಾರಂಭಗಳು ಆರಂಭವಾಗುತ್ತವೆ. ಡಿಸೆಂಬರ್ನಲ್ಲಿ ಸಾಮಾನ್ಯವಾಗಿ ವಿವಾಹ ಮುಹೂರ್ತ ಹೆಚ್ಚಾಗಿರುತ್ತವೆ. ಜನವರಿಯಲ್ಲಿ ಪುಷ್ಯ ಮಾಸ ಆರಂಭವಾಗುವುದರಿಂದ ತಿಂಗಳ ಪೂರ್ತಿ ಮದುವೆಗೆ ಮುಹೂರ್ತ ಇಲ್ಲ. ಫೆಬ್ರವರಿ 4ರಿಂದ ಮಾಘ ಮಾಸ ಶುರುವಾಗುತ್ತದೆ. ಮಾಘ ಮಾಸದಲ್ಲಿ ಮುಹೂರ್ತಗಳು ಇದ್ದರೂ, ಪ್ರಶಸ್ತ ಸಮಯ ಇಲ್ಲ. ಇದ್ದರೂ ಬಹಳ ಕಡಿಮೆ. ಮಾರ್ಚ್ ತಿಂಗಳಿಂದ ಮದುವೆ ಮುಹೂರ್ತಗಳು ಆರಂಭವಾಗುತ್ತವೆ. ದೇವಸ್ಥಾನಗಳಲ್ಲೂ ಮದುವೆ ಆದರೆ, ಅಷ್ಟೊತ್ತಿಗೆ ಇದೇ ಸ್ಥಿತಿ ಇರುತ್ತದೆ ಎನ್ನುವ ನಂಬಿಕೆ ಯಾರಲ್ಲಿಯೂ ಇಲ್ಲ. ಕಳೆದ ವರ್ಷವೂ ಏಪ್ರಿಲ್-ಮೇ ಅವಧಿಯಲ್ಲಿ ಕೊರೊನಾ ಆರ್ಭಟ ಜೋರಾಗಿತ್ತು. ಹಾಗಾಗಿ ಡಿಸೆಂಬರ್ನಲ್ಲಿ ಹೆಚ್ಚಿನ ಮದುವೆಗಳು ನಿಶ್ಚಯವಾಗಿ ಕಲ್ಯಾಣ ಮಂಟಪಗಳು ಏಕಾಏಕಿ ಮುಂಗಡ ಬುಕ್ಕಿಂಗ್ ನಿಂದ ಭರ್ತಿಯಾಗಿವೆ. ಈಗ ಒಮಿಕ್ರಾನ್ ಭೀತಿ ಶುರುವಾಗಿದ್ದರಿಂದ ಕೆಲವರು ದೇವಸ್ಥಾನಗಳಲ್ಲೂ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಜೂನ್, ಜುಲೈ ತಿಂಗಳಲ್ಲಿ ಹೆಚ್ಚಿನ ಮದುವೆಗಳು ನಡೆಯುತ್ತವೆ. ಮಳೆಗಾಲದಲ್ಲಿ ಕೆಲಸಕ್ಕೆ ಬಿಡುವು ಇರುವುದರಿಂದ ಈ ಎರಡು ತಿಂಗಳಲ್ಲಿ ಮದುವೆ ಹೆಚ್ಚು. ಕಳೆದ ವರ್ಷ ಈ ಎರಡು ತಿಂಗಳಲ್ಲಿಯೇ ಕೊರೊನಾ ಭೀತಿ ಜತೆಗೆ ಅತಿವೃಷ್ಟಿ, ಪ್ರವಾಹ ಬಂದು ಮದುವೆ ನಡೆಸುವುದಿರಲಿ, ಜೀವನ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಜೂನ್, ಜುಲೈವರೆಗೆ ಕಾಯದೆ ಬೇಗ ಮದುವೆ ಮುಗಿಸುತ್ತಿದ್ದಾರೆ. ಪೂಜಾರಿಗಳಿಗೂ ಒತ್ತಡ ಮದುವೆ ಸಮಾರಂಭಗಳು ಒಂದೇ ಸಮನೆ ಹೆಚ್ಚಾಗಿದ್ದರಿಂದ ಪೂಜಾರಿಗಳಿಗೂ ಬೇಡಿಕೆ ಬಂದಿದೆ. ಕಲ್ಯಾಣ ಮಂಟಪಗಳ ಜತೆಗೆ ದೇವಸ್ಥಾನಗಳಲ್ಲಿಯೂ ಮದುವೆ ನಡೆಯುತ್ತಿವೆ. ಅದರ ಜತೆಗೆ ಕೊರೊನಾ ಅಲೆ ಬಂದ ಮೇಲೆ ನಡೆದ ಅನೇಕ ಹೋಮ ಕಾರ್ಯಕ್ರಮಗಳೂ ಈಗಲೇ ನಡೆಯಲು ಶುರುವಾಗಿವೆ. ಹಾಗಾಗಿ ಪೂಜಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಬೆಳಗ್ಗೆ ಹೋಮ, ಪೂಜೆ ನಡೆಸಿ ಮಧ್ಯಾಹ್ನ ಮದುವೆ ಕಾರ್ಯದಲ್ಲಿ ತೊಡಗುವಷ್ಟು ಕೆಲಸದ ಒತ್ತಡ ಶುರುವಾಗಿದೆ. ಜನರು ಮದುವೆ ಆದರೆ ಸಾಕು ಎಂದು ಆತುರಾತುರವಾಗಿ ಮದುವೆ ಸಿದ್ಧತೆ ನಡೆಸುತ್ತಿರುವುದರಿಂದ ನಮಗೂ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪೂಜಾರಿಯೊಬ್ಬರು ಹೇಳಿದರು. ಆದರೆ, ಆರಂಭದಲ್ಲಿ ಶುರುವಾದ ಅದ್ಧೂರಿ ಮದುವೆಗಳಿಂದ ಕೆಲಸ ಪಡೆದಿದ್ದ ಬ್ಯಾಂಡ್, ಬಾಣಸಿಗರು, ಅಲಂಕಾರ ಮಾಡುವವರು, ಫೋಟೊಗ್ರಾಫರ್ ಹೀಗೆ ಮದುವೆ ಸಂಬಂಧಿ ವೃತ್ತಿ ಬಾಂಧವರ ಕೆಲಸಕ್ಕೂ ಒಮಿಕ್ರಾನ್ ವೈರಸ್ ಚಿಂತೆ ಉಂಟು ಮಾಡಿದೆ. ಒಂದು ತಿಂಗಳ ನಂತರ ಮತ್ತೆ ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎಲ್ಲ ದಿನವೂ ಕಲ್ಯಾಣ ಮಂಟಪ ಬುಕ್ ಆಗಿದೆ. ಇದರಲ್ಲಿ ಎಲ್ಲವೂ ಕಳೆದ ಮೇ, ಜೂನ್, ಜುಲೈನಲ್ಲಿ ಮುಂದೂಡಿದ್ದ ಮದುವೆಗಳೇ ಬಹಳ ಹಿಂದೆ ಬುಕಿಂಗ್ ಆಗಿದ್ದವು. ಈ ವರ್ಷದ ಹೊಸ ಬುಕಿಂಗ್ ಇಲ್ಲ. ಕಾರವಾರ ಸಾಗರದರ್ಶನ ಕಲ್ಯಾಣ ಮಂಟಪ ಸಿಬ್ಬಂದಿ ಡಿಸೆಂಬರ್ನಲ್ಲಿ ಮದುವೆ ಮುಹೂರ್ತಗಳು ಹೆಚ್ಚಿವೆ. ಹಿಂದಿನ ವರ್ಷ ಮದುವೆ ನಿಶ್ಚಯವಾದವರು ಮತ್ತು ಈ ವರ್ಷ ನಿಶ್ಚಯವಾದವರು ಇದೇ ತಿಂಗಳು ಮದುವೆ ಮಾಡಿಕೊಳ್ಳುತ್ತಿರುವುದರಿಂದ ಈ ಬಾರಿ ಒತ್ತಡ ಹೆಚ್ಚಾಗಿದೆ. ಡಿಸೆಂಬರ್ ನಂತರ ಮುಹೂರ್ತಗಳು ಇಲ್ಲ. ಅನಂತ ಭಟ್ಟ, ಪೂಜಾರಿ
from India & World News in Kannada | VK Polls https://ift.tt/3xUr6OP