ದುಬೈಗೆ ಪರಾರಿಯಾದ 'ಓಮಿಕ್ರಾನ್' ಸೋಂಕಿತ: ಬೆಂಗಳೂರಿನಲ್ಲಿ ಇನ್ನೂ ಐವರಿಗಾಗಿ ಹುಡುಕಾಟ!

ಬೆಂಗಳೂರು: ದೇಶದಲ್ಲಿಯೇ ಮೊದಲ ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿದ್ದು, ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ತಲೆಬಿಸಿ ಹೆಚ್ಚಿಸಿದೆ. ಓಮಿಕ್ರಾನ್ ಸೋಂಕಿತ ಹಾಗೂ ವಿದೇಶದಿಂದ ಬಂದ ಕೆಲವರು ತಲೆನೋವಾಗಿ ಪರಿಣಮಿಸಿದ್ದಾರೆ. ವಿದೇಶ ಪ್ರಯಾಣ ಮುಗಿಸಿ ಬಂದವರು ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಪಡಬೇಕು. ಅವರ ಕೋವಿಡ್ ವರದಿ ಬರುವವರೆಗೂ ಅವರು ಅಲ್ಲಿಯೇ ಇರಬೇಕು ಎಂದು ನಿಯಮ ಹೇಳುತ್ತದೆ. ಆದರೆ ಸುಮಾರು ಹತ್ತು ಮಂದಿ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಓಮಿಕ್ರಾನ್ ತಳಿ ವೈರಸ್, ಬೆಂಗಳೂರಿನ ಇಬ್ಬರಲ್ಲಿ ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಇದೇ ವೇಳೆ ಬಂದಿದ್ದ ಸುಮಾರು 57 ಮಂದಿಯ ಕೋವಿಡ್ ವರದಿ ನೆಗೆಟಿವ್ ಬಂದಿದ್ದರೂ, ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನು 10 ಮಂದಿ 'ನಾಪತ್ತೆ'ಯಾಗಿದ್ದು, ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಶುಕ್ರವಾರ ತಿಳಿಸಿದ್ದರು. ಓಮಿಕ್ರಾನ್ ಪತ್ತೆಯಾಗಿರುವ ವ್ಯಕ್ತಿ ಈ ಮೊದಲು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡು ಕೋವಿಡ್ ನೆಗೆಟಿವ್ ವರದಿ ಪಡೆದುಕೊಂಡಿದ್ದಾನೆ. ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಆತ, ಏಳು ದಿನಗಳ ಬಳಿಕ ದುಬೈಗೆ ತೆರಳಿದ್ದಾನೆ. ನಾವು ಪೊಲೀಸರಿಗೆ ದೂರು ನೀಡಿದ್ದು, ಆ ವ್ಯಕ್ತಿ ಉಳಿದುಕೊಂಡಿದ್ದ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಏನು ಸಮಸ್ಯೆಯಾಗಿತ್ತು ಎಂದು ಅವರು ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದ್ದರು. ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದ ಆತ ಹೋಟೆಲ್‌ಗೆ ಬಂದಾಗ ಆತನ ಕೋವಿಡ್ 19 ವರದಿ ಪಾಸಿಟಿವ್ ಬಂದಿತ್ತು. ಬಳಿಕ ಆತ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದ. ಸರ್ಕಾರಿ ವೈದ್ಯರು ಹೋಟೆಲ್‌ಗೆ ಭೇಟಿ ನೀಡಿದ್ದಾಗಿ ಆತನಲ್ಲಿ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ (Asymptomatic). ಹೀಗಾಗಿ ಪ್ರತ್ಯೇಕವಾಗಿ ಇರುವಂತೆ ಸಲಹೆ ನೀಡಿದ್ದರು. ಆದರೆ, 'ಅಪಾಯದಲ್ಲಿ ಇರುವ' ಎಂದು ಗುರುತಿಸಲಾಗಿರುವ ದೇಶಗಳ ಪೈಕಿ ಒಂದು ದೇಶದಿಂದ ಬಂದಿದ್ದರಿಂದ ಆತನ ಮಾದರಿಗಳನ್ನು ನ.22ರಂದು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದ 22 ಮಂದಿಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಜತೆಗೆ 240 ದ್ವಿತೀಯ ಸಂಪರ್ಕಿತರನ್ನೂ ಪರೀಕ್ಷಿಸಲಾಗಿತ್ತು. ಯಾರಲ್ಲಿಯೂ ಕೋವಿಡ್ ಕಂಡುಬಂದಿಲ್ಲ. ನ. 23ರಂದು ಖಾಸಗಿ ಲ್ಯಾಬ್ ಒಂದರಲ್ಲಿ ಪರೀಕ್ಷೆ ಮಾಡಿಸಿಕೊಂಡ ಆತನಿಗೆ ನೆಗೆಟಿವ್ ವರದಿ ಬಂದಿತ್ತು. ನ. 27ರ ಮಧ್ಯರಾತ್ರಿ ವೇಳೆಗೆ ಆತ ಹೋಟೆಲ್‌ ಚೆಕ್ ಔಟ್ ಮಾಡಿ, ಕ್ಯಾಬ್ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿದ್ದಾನೆ. ಅಲ್ಲಿಂದ ದುಬೈಗೆ ಪ್ರಯಾಣಿಸಿದ್ದಾನೆ. ಓಮಿಕ್ರಾನ್ ದೃಢಪಡುವ ವೇಳೆಗೆ ಆತ ಭಾರತದಿಂದ ತಪ್ಪಿಸಿಕೊಂಡಾಗಿತ್ತು. ಬೆಂಗಳೂರಿನಲ್ಲಿ ಐವರು ನಾಪತ್ತೆನವೆಂಬರ್ 28 ರಿಂದ ಡಿಸೆಂಬರ್ 1ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಐವರು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ 'ಅಪಾಯದಲ್ಲಿ ಇರುವ' ದೇಶಗಳೆಂದು ಗುರುತಿಸಿರುವ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನೂ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ. ಮುಖ್ಯವಾಗಿ ದಕ್ಷಿಣ ಆಫ್ರಿಕಾದಿಂದ ಮರಳಿದವರನ್ನು ಹುಡುಕಲು ಆದ್ಯತೆ ನೀಡಲಾಗಿದೆ. ಕಳೆದ ಮೂರು ವಾರಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದವರನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಹತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಹೇಳಿತ್ತು. ಆದರೆ ಬಿಬಿಎಂಪಿ ಐವರು ಮಾತ್ರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದೆ. ಕಳೆದ ಮೂರು ವಾರಗಳಲ್ಲಿ 72 ಮಂದಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರಲ್ಲಿ 43 ಮಂದಿ ಬೆಂಗಳೂರಿನ ಹಾಗೂ 29 ಮಂದಿ ನಗರದ ಹೊರಗಿನ ವಾಸಸ್ಥಳ ವಿವರ ನೀಡಿದ್ದಾರೆ. ಇವರಲ್ಲಿ ನಾಲ್ವರು ಬೆಂಗಳೂರಿನಿಂದ ಇತರೆ ಮೆಟ್ರೋಪಾಲಿಟನ್ ನಗರಗಳಿಗೆ ತೆರಳಿದ್ದಾರೆ. ಈ ಪ್ರಯಾಣಿಕರ ಬಗ್ಗೆ ಆಯಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ. ನ. 28ರಿಂದ ಡಿ. 1ರ ಅವಧಿಯಲ್ಲಿ 23 ಮಂದಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಇವರಲ್ಲಿ 18 ಮಂದಿಯನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ನೆಗೆಟಿವ್ ವರದಿ ಬಂದಿದೆ. ಐವರು ಇನ್ನೂ ಸಿಕ್ಕಿಲ್ಲ. ಅನೇಕರು ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ನೀಡಿದ್ದಾರೆ. ಈಗ ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3ompV7p

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...