ಮೈಸೂರು: ಕರ್ನಾಟಕದ ಸಾಂಸ್ಕೃತಿಕ ಆಚರಣೆಯ ಹೆಗ್ಗುರುತು ದಸರಾಗೆ ಅಧಿಕೃತ ಚಾಲನೆ ದೊರೆತಿದೆ. ಈ ಬಾರಿಯ ಮೈಸೂರು ದಸರಾವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಅವರು ಉದ್ಘಾಟಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ದಸರಾ ಹಬ್ಬದ ವಾತಾವರಣ ಕಳೆಗಟ್ಟಲಿದೆ. ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ಬೆಳಗ್ಗೆ 8.15ಕ್ಕೆ ಸರಿಯಾಗಿ ದೀಪ ಪ್ರಜ್ವಲನೆ ಮಾಡಿ, ತಾಯಿ ಚಾಮುಂಡೇಶ್ವರಿಗೆ ನಮಿಸಿ ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟನೆ ಮಾಡಿದರು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇನ್ನಿತರ ಸಚಿವರು ಹಾಗೂ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಹಬ್ಬ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿ ಉದ್ಘಾಟನೆ ಮಾಡಿದ ವೇಳೆ ಸಚಿವರಾದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಆರ್. ಅಶೋಕ್, ಬಿ.ಸಿ ಪಾಟೀಲ್, ಸುನೀಲ್ ಕುಮಾರ್, ನಾರಾಯಣ ಗೌಡ, ಶಶಿಕಲಾ ಜೊಲ್ಲೆ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಹರ್ಷವರ್ಧನ, ಜಿ.ಟಿ.ದೇವೇಗೌಡ, ನಾಗೇಂದ್ರ, ಮಂಜುನಾಥ್, ಶ್ರೀಕಂಠೇಗೌಡ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು. ಈ ಬಾರಿ ಉದ್ಘಾಟನಾ ಕಾರ್ಯಕ್ರಮಕ್ಕೆ 400 ಮಂದಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೊರೊನಾ ನಿಯಮಾನುಸಾರ ನಡೆಯಲಿದೆ. ನಾಡಹಬ್ಬ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಯಾಗುತ್ತಿದೆ. ಮುಖ್ಯಮಂತ್ರಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿದ್ದು, ದೀಪಾಲಂಕಾರ ಅದ್ಧೂರಿಯಾಗಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಹಬ್ಬ ಉದ್ಘಾಟಿಸಿರೋದು ಖುಷಿಯ ವಿಚಾರ ಎಂದು ಹೇಳಿದರು. ಈ ವೇಳೆ ಉದ್ಘಾಟನೆ ನೆರವೇರಿಸಿದ ಎಸ್.ಎಂ.ಕೃಷ್ಣ ಅವರಿಗೆ ಗೌರವ ಅರ್ಪಣೆ ಸಲ್ಲಿಸಲಾಯಿತು. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿಗೂ ದಸರಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
from India & World News in Kannada | VK Polls https://ift.tt/3v1Ecs9