ಅಬು ಧಾಬಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪರ ಹರ್ಷಲ್ ಪಟೇಲ್ ಅದ್ಭುತ ಬೌಲ್ ಮಾಡುತ್ತಿದ್ದಾರೆ. ಇದರ ಫಲವಾಗಿ ಅವರು ಪರ್ಪಲ್ ಕ್ಯಾಪ್ ಅನ್ನು ತನ್ನಲ್ಲಿ ಉಳಿಸಿಕೊಂಡಿದ್ದಾರೆ. ಅಲ್ಲದೆ, ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಯಾರೂ ಮಾಡಲಾಗದ ದಾಖಲೆಯೊಂದನ್ನು ಆರ್ಸಿಬಿ ವೇಗಿ ಮಾಡಿದ್ದಾರೆ. ಬುಧವಾರ ರಾತ್ರಿ ಇಲ್ಲಿನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡದ ವಿಕೆಟ್ ಕೀಪರ್ ವೃದ್ದಿಮಾನ್ ಸಹಾ ಅವರನ್ನು ಔಟ್ ಮಾಡುವ ಮೂಲಕ ಹರ್ಷಲ್ ಪಟೇಲ್, ಐಪಿಎಲ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಆರ್ಸಿಬಿ ಎದುರಿಸಿದ್ದ ಡೆತ್ ಬೌಲಿಂಗ್ ಸಮಸ್ಯೆಯನ್ನು ಈ ಬಾರಿ ಪರಿಹರಿಸಿದ್ದಾರೆ. ಇಲ್ಲಿಯವರೆಗೂ ಆಡಿರುವ 13 ಪಂದ್ಯಗಳಿಂದ ಆರ್ಸಿಬಿ ವೇಗಿ ಒಟ್ಟು 29 ವಿಕೆಟ್ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆ ಮೂಲಕ ಪರ್ಪಲ್ ಕ್ಯಾಪ್ ಅನ್ನು ದೀರ್ಘ ಅವಧಿಯಿಂದ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಹಾಗೂ ಇದೇ ತಂಡದ ವಿರುದ್ಧ ಮೊದಲ ಅವಧಿಯ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದು ಹರ್ಷಲ್ ಪಟೇಲ್ ಅವರ ಈ ಟೂರ್ನಿಯಲ್ಲಿನ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಅದರಂತೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಅವರು ಮೂರು ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡವನ್ನು 141 ರನ್ಗಳಿಗೆ ನಿಯಂತ್ರಿಸಲು ತಂಡಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಎಸ್ಆರ್ಎಚ್ ನೀಡಿದ್ದ 142 ರನ್ ಗುರಿ ಹಿಂಬಾಲಿಸಿದ್ದ ಆರ್ಸಿಬಿ ಆರಂಭದಲ್ಲಿಯೇ ನಾಯಕ ವಿರಾಟ್ ಕೊಹ್ಲಿ ಹಾಗೂ ಡ್ಯಾನ್ ಕ್ರಿಸ್ಟಿಯನ್ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಇದರ ಹೊರತಾಗಿಯೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಸ್ಪೋಟಕ ಬ್ಯಾಟಿಂಗ್ನಿಂದ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿ ಸಾಗುತ್ತಿತ್ತು. ಆದರೆ, ಮ್ಯಾಕ್ಸ್ವೆಲ್ ರನೌಟ್ ಆಗುವ ಮೂಲಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು. ಆರ್ಸಿಬಿ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 137 ರನ್ಗೆ ಸೀಮಿತವಾಯಿತು. ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿಯಿತು. ಆ ಮೂಲಕ ಅಗ್ರ ಸ್ಥಾನಕ್ಕೇರುವ ಅವಕಾಶವನ್ನು ಸುಲಭವಾಗಿ ಕೈಚೆಲ್ಲಿಕೊಂಡಿತು. ಶುಕ್ರವಾರ ನಡೆಯುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ. ಮ್ಯಾಕ್ಸ್ವೆಲ್ ರನೌಟ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್: ಕೊಹ್ಲಿ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ಆದಷ್ಟು ಬೇಗ ಪಂದ್ಯವನ್ನು ಮುಗಿಸುವುದು ನಮ್ಮ ಉದ್ದೇಶವಾಗಿತ್ತು. ಆರಂಭದಲ್ಲಿ ಕೆಲ ವಿಕೆಟ್ಗಳು ಉರುಳಿದರೂ ನಂತರ ಇನಿಂಗ್ಸ್ ಅನ್ನು ಮರು ಬೆಳೆಸುವುದು ತಂಡದ ಕೀ ಸಂಗತಿ. ಮ್ಯಾಕ್ಸ್ವೆಲ್ ರನ್ಔಟ್ ಆಗಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್," ಎಂದು ಹೇಳಿದರು. "ಡಿವಿಲಿಯರ್ಸ್ ಕ್ರೀಸ್ನಲ್ಲಿ ಇರುವವರೆಗೂ ನೀವು ಪಂದ್ಯದಿಂದ ಹೊರಗುಳಿಯುವುದಿಲ್ಲ. ಆದರೆ, ನಿರ್ಣಾಯಕ ಸಮಯದಲ್ಲಿ ಅವರಿಗೆ ಹೆಚ್ಚು ಸ್ಟ್ರೈಕ್ ಸಿಗದೆ ಇರುವುದು ಇಲ್ಲಿ ಬೇಸರದ ಸಂಗತಿ. ಆದರೆ, ಈ ಹಂತದಲ್ಲಿ ಶಹಬಾಝ್ ಅಹಮದ್ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇದು ಅಲ್ಪ ಮೊತ್ತದ ಪಂದ್ಯವಾದರೂ ಸನ್ರೈಸರ್ಸ್ ಹೈದರಾಬಾದ್ ಬೌಲರ್ಗಳು ಕೊನೆಯಲ್ಲಿ ಅತ್ಯುತ್ತಮ ಬೌಲ್ ಮಾಡಿದ್ದಾರೆ, ಹಾಗಾಗಿ ನಾವು ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಿರಲಿಲ್ಲ," ಎಂದು ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uMoEIB