'ಇದು ಅತ್ಯಂತ ಕೆಟ್ಟ ಪ್ರದರ್ಶನ' ರಾಜಸ್ಥಾನ್ ವಿರುದ್ಧ ಗಂಭೀರ್‌ ಕಿಡಿ!

ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಪ್ಲೇ ಆಫ್ಸ್‌ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ತಂಡವನ್ನು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಕಟುವಾಗಿ ಟೀಕಿಸಿದ್ದಾರೆ. ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 90 ರನ್‌ ಗಳಿಸಿತ್ತು. ನಂತರ ಗುರಿ ಹಿಂಬಾಲಿಸಿದ್ದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ 8.2 ಓವರ್‌ಗಳಿಗೆ ಪಂದ್ಯವನ್ನು ಮುಗಿಸಿತ್ತು. ಆ ಮೂಲಕ ಪ್ಲೇ ಆಫ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿತು. ಪಂದ್ಯದ ಬಳಿಕ ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಗೌತಮ್‌ ಗಂಭೀರ್‌, "ಈ ರೀತಿಯ ಕ್ರಿಕೆಟ್‌ ಆಡಲು ಮಾತ್ರ ನೀವು ಅರ್ಹರಾಗಿದ್ದೀರಿ. ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಇಂತಹ ಕೆಟ್ಟ ಪ್ರದರ್ಶನ ತೋರಿರುವ ನೀವು ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯುವುದನ್ನು ನಿರೀಕ್ಷಿಸಬಾರದು. ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದಕ್ಕೆ ಇದು ಉತ್ತಮ ಉದಾಹರಣೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾರ್ಜಾ ವಿಕೆಟ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡವನ್ನು ಟೀಮ್‌ ಇಂಡಿಯಾ ಮಾಜಿ ಆರಂಭಿಕ ಗೌತಮ್‌ ಗಂಭೀರ್‌ ಗುಣಗಾನ ಮಾಡಿದ್ದಾರೆ. "ಪಂದ್ಯದಲ್ಲಿ ಎರಡೂ ತಂಡಗಳು ಕಣಕ್ಕೆ ಇಳಿಯುವವರೆಗೂ ಇಲ್ಲಿನ ಪಿಚ್‌ ಬಗ್ಗೆ ನೀವು ನಿರ್ಣಯಿಸಬಾರದು. ಅದರಂತೆ ಮುಂಬೈ ಇಂಡಿಯನ್ಸ್ ಈ ಪಿಚ್‌ ಅನ್ನು ಅತ್ಯಂತ ಸುಲಭಗೊಳಿಸಿತು. ಶಾರ್ಜಾ ಅತ್ಯುತ್ತಮ ಬ್ಯಾಟಿಂಗ್‌ ವಿಕೆಟ್‌ ಎಂಬುದನ್ನು ಮುಂಬೈ ಬ್ಯಾಟ್ಸ್‌ಮನ್‌ಗಳು ಸಾಬೀತುಪಡಿಸಿದರು. ಎರಡೂ ತಂಡಗಳ ಪ್ರದರ್ಶನದಲ್ಲಿ ಎಷ್ಟು ಗುಣಮಟ್ಟವಿದೆ ಎಂಬುದು ಈ ಫಲಿತಾಂಶ ತೋರಿಸುತ್ತಿದೆ. ಅಂದಹಾಗೆ ರಾಜಸ್ಥಾನ್‌ ರಾಯಲ್ಸ್ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯುವ ರೇಸ್‌ನಲ್ಲಿ ಇರುವಂತೆ ನನಗೆ ಕಾಣಲಿಲ್ಲ," ಎಂದು ಗಂಭೀರ್‌ ಹೇಳಿದರು. ಆರಂಭಿಕ ಬ್ಯಾಟ್ಸ್‌ಮನ್‌ ಎವಿನ್‌ ಲೆವಿಸ್‌ 24 ರನ್‌ ಗಳಿಸಿದ್ದು ಬಿಟ್ಟರೆ, ರಾಜಸ್ಥಾನ್‌ ರಾಯಲ್ಸ್ ಪರ ಯಾರೂ ವೈಯಕ್ತಿಕ 20 ರನ್‌ ಗಡಿ ದಾಟಲು ಸಾಧ್ಯವಾಗಲಿಲ್ಲ. ಮಾರಕ ದಾಳಿ ನಡೆಸಿದ ನೇಥನ್‌ ಕೌಲ್ಟರ್ ನೈಲ್‌4 ಓವರ್‌ಗಳಿಗೆ ಕೇವಲ 14 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದುಕೊಂಡರೆ, ಜೇಮ್ಸ್ ನಿಶಮ್‌ 12 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು. ಬ್ಯಾಟಿಂಗ್‌ ಶ್ಲಾಘಿಸಿದ ಗಂಭೀರ್‌ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಇಶಾನ್‌ ಕಿಶನ್‌ ಅವರನ್ನು ಕಳುಹಿಸಿದ್ದು ಮುಂಬೈ ಇಂಡಿಯನ್ಸ್ ಪಾಲಿಗೆ ನೆರವಾಯಿತು. ಅದರಂತೆ ಇಶಾನ್‌ ಕೇವಲ 25 ಎಸೆತಗಳಲ್ಲಿ 50 ರನ್‌ ಚೆಚ್ಚಿದ್ದರು. ಆ ಮೂಲಕ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್‌ ಗಂಭೀರ್, ಇಶಾನ್‌ ಕಿಶನ್‌ ಉಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅತ್ಯುತ್ತಮ ಸಂಯೋಜನೆ ಸಿಗುತ್ತಿದೆ ಎಂದು ಹೇಳಿದ್ದಾರೆ. "ಇನಿಂಗ್ಸ್ ಆರಂಭಿಸಲು ಸಿಕ್ಕ ಅವಕಾಶವನ್ನು ಇಶಾನ್‌ ಕಿಶನ್‌ ಎರಡೂ ಕೈಗಳಿಂದ ಬಾಚಿ ಅಪ್ಪಿಕೊಂಡರು. ಅಂದಹಾಗೆ ಚೇತನ್‌ ಸಾಕರಿಯ ಅವರಿಗೆ ಇಶಾನ್‌ ಕಿಶನ್‌ ಮೇಡಿನ್‌ ಓವರ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಶಾನ್‌ ಆಕ್ರಮಣಕಾರಿಯಾಗಿ ಆಡಬೇಕೆಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಅದರಂತೆ ಯುವ ಬ್ಯಾಟ್ಸ್‌ಮನ್‌ ಅದ್ಭುತ ಹೊಡೆತಗಳನ್ನು ಆಡಿದರು. ಇದು ಮುಂಬೈ ಬ್ಯಾಟ್ಸ್‌ಮನ್‌ಗೆ ಸಾಕಷ್ಟು ವಿಶ್ವಾಸವನ್ನು ತಂದುಕೊಟ್ಟಿದೆ," ಎಂದು ಗಂಭೀರ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Fm3tSs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...