ಆರ್‌ಸಿಬಿಯಲ್ಲಿ ಖುಷಿಯಾಗಿದ್ದೇನೆಂದರೆ ನಿಮ್ಮ ಮಾತಿನ ಅರ್ಥವೇನು? ಮ್ಯಾಕ್ಸ್‌ವೆಲ್‌ಗೆ ಗವಾಸ್ಕರ್‌ ಪ್ರಶ್ನೆ!

ಹೊಸದಿಲ್ಲಿ: ಕಳೆದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್ ಪರ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಸೇರ್ಪಡೆಯಾದ ಬಳಿಕ ಹದಿನಾಲ್ಕನೇ ಆವೃತ್ತಿಯಲ್ಲಿ ವಿಭಿನ್ನ ಆಟಗಾರನಾಗಿ ಕಾಣುತ್ತಿದ್ದಾರೆ. ಹದಿಮೂರನೇ ಆವೃತ್ತಿಯ ಟೂರ್ನಿಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪಂಜಾಬ್‌ ಪರ 13 ಪಂದ್ಯಗಳಿಂದ ಕೇವಲ 108 ರನ್‌ ಗಳಿಸಿದ್ದರು. ಅದರಲ್ಲೂ ಅವರು ಒಂದೇ ಒಂದು ಸಿಕ್ಸರ್‌ ಸಿಡಿಸಲು ಸಾಧ್ಯವಾಗಿರಲಿಲ್ಲ. ಆ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ, ಆರ್‌ಸಿಬಿ ಪರ ಈ ವರ್ಷ ಇಲ್ಲಿಯವರೆಗೂ ಐದು ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಬೆಂಗಳೂರು ತಂಡಕ್ಕೆ ಕೀ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸೆ. 29 ರಂದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆಲುವಿನ ಬಳಿಕ ಮಾತನಾಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಗಮಿಸಿದಾಗಿನಿಂದಲೂ ಅತ್ಯುತ್ತಮ ಅನುಭವವಾಗುತ್ತಿದೆ ಹಾಗೂ ಇಲ್ಲಿನ ವಾತಾವರಣವನ್ನು ಆನಂದಿಸುತ್ತಿದ್ದೇನೆಂದು ಹೇಳಿದ್ದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಈ ಹೇಳಿಕೆಗೆ ಬ್ಯಾಟಿಂಗ್‌ ದಿಗ್ಗಜ ಪ್ರತಿಕ್ರಿಯಿಸಿದ್ದಾರೆ. "ಅವರು(ಮ್ಯಾಕ್ಸ್‌ವೆಲ್‌) ಇಲ್ಲಿ(ಆರ್‌ಸಿಬಿ) ಖುಷಿಯಾಗಿದ್ದೇನೆಂದು ಹೇಳಿದ್ದಾರೆ. ಇದರರ್ಥ ಏನು? ಹಾಗಾದರೆ, ತಂಡದಲ್ಲಿ ಖುಷಿಯಾಗಿ ಇರಲಿಲ್ಲವಾ? ಆರ್‌ಸಿಬಿ ತಂಡದಲ್ಲಿ ಖಷಿಯಾಗಿದ್ದೇನೆಂಬ ಬಗ್ಗೆ ಹೇಳುವ ಮೊದಲು ಸ್ವಲ್ಪ ಯೋಚಿಸಬೇಕಾಗಿತ್ತು. ಆದರೆ, ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಖುಷಿಯಾಗಿರಲಿಲ್ಲ ಅಥವಾ ಆರಾಮದಾಯಕವಾಗಿರಲಿಲ್ಲ ಎಂಬುದು ನಿಮ್ಮ ಮಾತಿನಲ್ಲಿ ಸೂಚಿಸುತ್ತದೆ. ಆರ್‌ಸಿಬಿ ತಂಡಕ್ಕೆ ಬಹುಶಃ ಗ್ಲೆನ್‌ ಮ್ಯಾಕ್ಸ್‌ವೆಲ್‌ ದೊಡ್ಡ ಆಟಗಾರನಲ್ಲ. ಏಕೆಂದರೆ, ಇಲ್ಲಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಇದ್ದಾರೆ," ಎಂದು ಗವಾಸ್ಕರ್‌ ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಆರ್‌ಸಿಬಿ ತಂಡದಲ್ಲಿ ಇರುವುದರಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ತನ್ನ ಸ್ವಾಭವಿಕ ಆಟವನ್ನು ಪ್ರದರ್ಶಿಸಲು ಸ್ವಾತಂತ್ರ್ಯವಿದೆ ಎಂಬ ಅಂಶವನ್ನು ಗವಾಸ್ಕರ್ ಇದೇ ವೇಳೆ ಉಲ್ಲೇಖಿಸಿದ್ದಾರೆ. "ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇರುವುದರಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಹೆಚ್ಚಿನ ವಿಶ್ವಾಸವಿದೆ. ದೊಡ್ಡ ಮೊತ್ತ ಕಲೆ ಹಾಕುವ ವಿಷಯದಲ್ಲಿ ತಂಡ ಸಂಪೂರ್ಣವಾಗಿ ನನ್ನನ್ನು ಅವಲಂಬಿಸಿಲ್ಲ ಹಾಗೂ ನಾನು ಆರಾಮಾದಾಯಕ ವಲಯದಲ್ಲಿದ್ದೇನೆಂದು ಮ್ಯಾಕ್ಸ್‌ವೆಲ್‌ಗೆ ಗೊತ್ತಿದೆ. ಏಕೆಂದರೆ, ಕೊಹ್ಲಿ ಹಾಗೂ ಎಬಿಡಿ ಇಬ್ಬರೇ ತಂಡದ ಬಹುತೇಕ ಒತ್ತಡವನ್ನು ನಿರ್ವಹಿಸಲಿದ್ದಾರೆ," ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ. ಪಂಜಾಬ್‌ ಕಿಂಗ್ಸ್ ವಿರುದ್ಧ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 33 ಎಸೆತಗಳಲ್ಲಿ 57 ರನ್‌ ಚೆಚ್ಚಿದ್ದರು. ಇವರ ಅರ್ಧಶತಕದ ನೆರವಿನಿಂದ ಆರ್‌ಸಿಬಿ 6ರನ್‌ ಗಳಿಂದ ಗೆಲುವು ಪಡೆದಿತ್ತು. ಅಂದಹಾಗೆ, ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್‌ 12 ಪಂದ್ಯಗಳಿಂದ 40.70ರ ಸರಾಸರಿಯಲ್ಲಿ 407 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಐದು ಅರ್ಧಶತಕಗಳನ್ನು ಸಿಡಿಸಿ ಆರ್‌ಸಿಬಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯಲು ನೆರವಾಗಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BafoQT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...