ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭೀಕರ ಭೂಕಂಪ: 20 ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ಕ್ವೆಟ್ಟಾ: ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದ ಭಾರಿ ಭೂಕಂಪನದಲ್ಲಿ ಸುಮಾರು 20 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜನರು ಇನ್ನೂ ಬೆಳಗಿನ ಸವಿ ನಿದ್ರೆಯಲ್ಲಿರುವಾಗಲೇ ಈ ಅವಘಡ ಉಂಟಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಂತ್ಯದಲ್ಲಿ ರಿಕ್ಟರ್ ಮಾಪನದಲ್ಲಿ 5.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಹೆಚ್ಚಿನ ಜನರು ಮನೆಗಳ ಛಾವಣಿ ಮತ್ತು ಗೋಡೆಗಳು ಕುಸಿದು ಮೃತಪಟ್ಟಿದ್ದಾರೆ. ಭೂಕಂಪನದ ಬೆನ್ನಲ್ಲೇ ಈ ಪ್ರದೇಶದಲ್ಲಿ ವ್ಯಾಪಕ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ತೀವ್ರ ಕತ್ತಲೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಫ್ಲ್ಯಾಶ್‌ ಲೈಟ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುವಂತಾಯಿತು. ಇಲ್ಲಿನ ಬಹು ದೂರದಲ್ಲಿರುವ ಪರ್ವತ ಶ್ರೇಣಿಯಲ್ಲಿನ ನಗರ ಹರ್ನೈ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ. ಇಲ್ಲಿ ತೀರಾ ಕಡಿದಾದ ರಸ್ತೆ ಇರುವುದರಿಂದ ಸಂಚಾರ ದುಸ್ತರವಾಗಿದೆ. ಜತೆಗೆ ವಿದ್ಯುತ್ ಹಾಗೂ ಮೊಬೈಲ್ ಫೋನ್ ಸಂಪರ್ಕ ಕೊರತೆ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಭೂಕಂಪನದಿಂದ 20 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ ಎಂದು ಬಲುಚಿಸ್ತಾನ ಗೃಹ ಸಚಿವ ಮಿರ್ ಜಿಯಾ ಉಲ್ಲಾ ಲಂಗೌ ತಿಳಿಸಿದ್ದಾರೆ. ಮೃತ 20 ಮಂದಿಯಲ್ಲಿ ಒಬ್ಬ ಮಹಿಳೆ ಮತ್ತು ಆರು ಮಂದಿ ಮಕ್ಕಳು ಸೇರಿದ್ದಾರೆ. 200ಕ್ಕ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪ್ರಾಂತೀಯ ಅಧಿಕಾರಿ ಸುಹೈಲ್ ಅನ್ವರ್ ಹಷ್ಮಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ನಾವು ಹೆಲಿಕಾಪ್ಟರ್‌ಗಳನ್ನು ತರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಬಲೂಚಿಸ್ತಾನ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ನಸೀರ್ ನಸರ್ ತಿಳಿಸಿದ್ದಾರೆ. ವಿದ್ಯುತ್ ಕಡಿತ ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸಮಸ್ಯೆ ಉಂಟುಮಾಡಿದೆ. ಟಾರ್ಚ್ ಹಾಗೂ ಮೊಬೈಲ್ ಫ್ಲ್ಯಾಶ್‌ಲೈಟ್‌ಗಳ ನೆರವಿನಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಗಾಯಾಳುಗಳ ಕೈ ಕಾಲುಗಳು ಮುರಿದಿವೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಕನಿಷ್ಠ 40 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಈ ಭೂಕಂಪನವು ರಿಕ್ಟರ್ ಮಾಪನದಲ್ಲಿ 5.7 ತೀವ್ರತೆ ಹೊಂದಿದೆ. ಬೆಳಿಗ್ಗೆ 3 ಗಂಟೆ ಸುಮಾರಿಗೆ ಸುಮಾರು 20 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ. 2015ರ ಅಕ್ಟೋಬರ್‌ನಲ್ಲಿ ಹಾಗೂ ಅಫ್ಘಾನಿಸ್ತಾನಗಳಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಸುಮಾರು 400 ಮಂದಿ ಬಲಿಯಾಗಿದ್ದರು. 2005ರಲ್ಲಿ ಉಂಟಾಗಿದ್ದ 7.6 ತೀವ್ರತೆಯ ಭೀಕರ ಭೂಕಂಪನದಲ್ಲಿ 73,000ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು. ಲಕ್ಷಾಂತರ ಮಂದಿ ಆಗ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದರು. ಸುಮಾರು 35 ಲಕ್ಷ ಮಂದಿ ನಿರಾಶ್ರಿತರಾಗಿದ್ದರು.


from India & World News in Kannada | VK Polls https://ift.tt/3oFMh4k

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...