ಜಯಪ್ಪ ರಾಥೋಡ್ ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ಜಲಾಶಯ ಕಳೆದ 3-4 ವರ್ಷದಿಂದ ಸತತವಾಗಿ ಭರ್ತಿಯಾಗುತ್ತಲೇ ಇದೆ. ಆದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆಗೆ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದಂತೆಯೇ, ಜಲಾಶಯಕ್ಕೆ ಬರಲು ಆರಂಭಿಸುತ್ತದೆ. ಈ ಬಾರಿ ಮಳೆಗಾಲದ ಆರಂಭದಲ್ಲಿಯೇ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಾಗಿತ್ತು. ಅದಾದ ಬಳಿಕ ಈ ವರ್ಷ ಇದುವರೆಗೆ 3 -4 ಬಾರಿ ಜಲಾಶಯದಿಂದ ಸುಮಾರು 146 ಟಿಎಂಸಿ ನೀರು ನದಿಗೆ ಹರಿಸಲಾಗಿದೆ. ಇದೇ ನೀರನ್ನು ಸಂಗ್ರಹ ಮಾಡಿಟ್ಟುಕೊಂಡಲ್ಲಿ ಈ ಭಾಗದ ಜನರು ಎರಡನೇ ಬೆಳೆಗಾಗಿ ಪರದಾಡುವುದನ್ನು ತಪ್ಪಿಸಬಹುದಿತ್ತು. ತುಂಗಭದ್ರಾ ಜಲಾಶಯಕ್ಕೆ ಸಮನಾಂತರ ನಿರ್ಮಿಸಲು ಸಿದ್ಧಪಡಿಸಲಾಗುತ್ತಿದೆ ಎನ್ನುವ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತಂದಲ್ಲಿ ರೈತರಿಗೆ ನೆರವಾಗಬಹುದು. ಕೆರೆ-ಕಟ್ಟೆಗಳ ತುಂಬಿಸಿ: ಪ್ರತಿ ವರ್ಷ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿದು ಹೋಗುತ್ತಿದೆ. ನಿವೃತ್ತ ಎಂಜಿನಿಯರ್ಗಳ ಅಂದಾಜಿನಂತೆ ಭರ್ತಿಯಾದ ಪ್ರತಿ ವರ್ಷಗಳಲ್ಲಿ ಸುಮಾರು 100 ಟಿಎಂಸಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ನೀರನ್ನು ನದಿಗೆ ಹರಿಸಲಾಗಿದೆ. ಜಿಲ್ಲೆಯಲ್ಲಿ ನೂರಾರು ಕೆರೆ - ಕಟ್ಟೆಗಳಿದ್ದು, ಹೆಚ್ಚು ಮಳೆಯಾಶ್ರಿತ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸುವ ಮುತುವರ್ಜಿಯನ್ನು ಯಾರೊಬ್ಬರೂ ತೋರದಿರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ಕೈಗನ್ನಡಿಯಾಗಿದೆ. ಮಳೆ ಆಗದೇ ಜನ - ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಎದುರಾದರೂ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ಕಿವಿಗೊಡುತ್ತಿಲ್ಲ ಎಂಬ ದೂರಿದೆ. ಡ್ಯಾಂ ಸಮೀಪದವರಿಗೆ ನೀರಿನ ಸಮಸ್ಯೆ: ಡ್ಯಾಂ ಸುತ್ತಮುತ್ತಲಿನ ಗ್ರಾಮಗಳಲ್ಲಿಯೇ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದನ್ನೇ ಗಮನ ಹರಿಸಿ ಬಗೆಹರಿಸದವರು ಇನ್ನು ಪೋಲಾಗುವ ನೀರು ಬಳಕೆಗೆ ಕ್ರಮ ವಹಿಸುತ್ತಾರೆ ಎಂಬುದು ಕಷ್ಟ ಸಾಧ್ಯ. ಈ ಬಾರಿ ಮಳೆಗಾಲ ಮುಗಿಯಲು ಇನ್ನೂ ಸಮಯಾವಕಾಶವಿದ್ದು, ಈಗಾಗಲೇ 146 ಟಿಎಂಸಿ ನೀರು ನದಿಗೆ ಬಿಡಲಾಗಿದೆ. ಎರಡನೇ ಬೆಳೆಗೆ ನೀರಿನ ನಿರೀಕ್ಷೆ: ಸದ್ಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ನೀರಿನ ಸಮಸ್ಯೆ ಆಗುವ ಸಾಧ್ಯತೆಗಳು ಅಷ್ಟಾಗಿ ಇಲ್ಲ. ಇನ್ನೆರಡು ತಿಂಗಳು ಉತ್ತಮವಾಗಿ ಮಳೆ ಆದಲ್ಲಿ ಎರಡನೇ ಬೆಳೆಗೆ ನೀರುವ ಲಭ್ಯವಾಗಬಹುದು. 9 ಬಾರಿ ಜಲಾಶಯ ತುಂಬಿಲ್ಲ: ತುಂಗಭದ್ರಾ ಜಲಾಶಯ ನಿರ್ಮಾಣವಾದ ಬಳಿಕ ಇದುವರೆಗೆ 9 ಬಾರಿ ಜಲಾಶಯ ಭರ್ತಿಯಾಗಿಲ್ಲ. 1953ರಲ್ಲಿ ಜಲಾಶಯ ನಿರ್ಮಾಣಗೊಂಡ ಬಳಿಕ 1976-77, 87-88, 1995-96ರಲ್ಲಿ ಭರ್ತಿಯಾಗಿತ್ತು. ಬಳಿಕ 2001-02, 02-03, 03-04, 2015-16, 2016-17, 2017-18ನೇ ವರ್ಷಗಳಲ್ಲಿ ಜಲಾಶಯ ಭರ್ತಿಯಾಗಿರಲಿಲ್ಲ. ಈ ವರ್ಷಗಳಲ್ಲಿ ರೈತರು ಎರಡನೇ ಬೆಳೆಗೆ ನೀರು ಸಿಗದೇ ಪರದಾಡಿದ್ದಾರೆ. 146 ಟಿಎಂಸಿ ನೀರು ನದಿಗೆ: ಪ್ರಸ್ತುತ ಸಾಲಿನಲ್ಲಿ ಜಲಾಶಯದಿಂದ ಒಟ್ಟು 146 ಟಿಎಂಸಿ ನೀರು ಹರಿದು ಹೋಗಿದೆ. ಒಟ್ಟು 246.85 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದ್ದು, 100 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಸದ್ಯ ಭರ್ತಿಯಾಗಿದೆ. ಪ್ರಸ್ತುತ 10,748 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 10,569 ಕ್ಯುಸೆಕ್ ನದಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ 98.47 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಟ್ಟು 212.26 ಟಿಎಂಸಿ ನಿರು ಹರಿದು ಬಂದಿತ್ತು. 2018ರಲ್ಲಿ260 ಟಿಎಂಸಿ, 2019ರಲ್ಲಿ180, 2020ರಲ್ಲಿ 142 ಟಿಎಂಸಿ ನೀರು ನದಿಗೆ ಹರಿಸಲಾಗಿದೆ.
from India & World News in Kannada | VK Polls https://ift.tt/3lNMjnC