ಪುಣೆ: ಟಿ20 ಸರಣಿಯ ಕೊನೆಯ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧ ಓಡಿಐ ಸರಣಿಯ ಆರಂಭಿಕ ಪಂದ್ಯದಲ್ಲಿಯೇ 98 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ, ಕೇವಲ ಎರಡೇ ಎರಡು ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದು ಬೇಸರದ ಸಂಗತಿಯಾಯಿತು. ಮಂಗಳವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಭಾರತ ತಂಡ 66 ರನ್ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತು. ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮೊದಲನೇ ವಿಕೆಟ್ಗೆ 64 ರನ್ ಜತೆಯಾಟವಾಡಿದರು. ನಂತರ ರೋಹಿತ್ ಔಟ್ ಆದ ಬಳಿಕ ನಾಯಕ ವಿರಾಟ್ ಕೊಹ್ಲಿಯೊಂದಿಗೆ 105 ರನ್ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಅದ್ಭುತ ಬ್ಯಾಟಿಂಗ್ ಮಾಡಿದ ಎಡಗೈ ಬ್ಯಾಟ್ಸ್ಮನ್ 106 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 98 ರನ್ ಗಳಿಸಿ ಭಾರತ 317 ರನ್ ಗಳಿಸಲು ನೆರವಾದರು. 318 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 135 ರನ್ಗೆ ಒಂದೂ ವಿಕೆಟ್ ಕಳೆದುಕೊಂಡಿರಲಿಲ್ಲ. ಆದರೆ, ಭಾರತೀಯ ಬೌಲರ್ಗಳು ಸ್ಟನ್ನಿಂಗ್ ಕಮ್ಬ್ಯಾಕ್ ಮಾಡಿ ಪ್ರವಾಸಿಗರನ್ನು 42.1 ಓವರ್ಗಳಿಗೆ 251 ರನ್ಗಳಿಗೆ ಆಲೌಟ್ ಮಾಡಿದರು. ಪಂದ್ಯದ ಬಳಿಕ ಮಾತನಾಡಿದ ನಾಯಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಶಿಖರ್ ಧವನ್ ಬ್ಯಾಟಿಂಗ್ ಪ್ರದರ್ಶನವನ್ನು ಗುಣಗಾನ ಮಾಡಿದರು. "ಶಿಖರ್ ಧವನ್ ಇನಿಂಗ್ಸ್ ಅದ್ಭುತವಾಗಿತ್ತು. ಕೆ.ಎಲ್ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ನೊಂದಿಗೆ ಕಮ್ಬ್ಯಾಕ್ ಮಾಡಿದ್ದಾರೆ. ನಮ್ಮ ಆಟಗಾರರು ಖಂಡಿತಾ ನಿಸ್ವಾರ್ಥ ಮನೋಭಾವದಿಂದ ತಂಡದ ಗೆಲುವಿಗೆ ನೆರವಾಗುತ್ತಾರೆಂದು ನಮಗೆ ಗೊತ್ತಿದೆ. ತಂಡದ ಒಂದೊಂದು ಕ್ರಮಾಂಕಕ್ಕೂ ನಮ್ಮಲ್ಲಿ ಎರಡು ಅಥವಾ ಮೂವರು ಆಟಗಾರರಿದ್ದಾರೆ. ಇದು ಭಾರತೀಯ ಕ್ರಿಕೆಟ್ ಪಾಲಿಗೆ ಶುಭ ಚಿಹ್ನೆ. ಪ್ರಸ್ತುತ ನಾವು ಸರಿಯಾದ ಹಾದಿಯಲ್ಲಿದ್ದೇವೆ ಮತ್ತು ಆಯ್ಕೆ ಮಾಡಲು ದೊಡ್ಡ ಆಟಗಾರರನ್ನು ಹೊಂದಿದ್ದೇವೆ," ಎಂದು ಕೊಹ್ಲಿ ಹೇಳಿದರು. "ಭಾರತ ತಂಡದಲ್ಲಿ ಆಡದೇ ಇದ್ದಾಗ ಶಿಖರ್ ಧವನ್ ಅವರ ಬಾಡಿ ಲಾಂಗ್ವೇಜ್ ಅದ್ಭುತವಾಗಿತ್ತು. ಅವರು ನಮಗೆ ತುಂಬಾ ಸಹಾಯಕರಾಗಿದ್ದರು. ಇಂದಿನ ತಂಡದ ಫಲಿತಾಂಶಕ್ಕೆ ಅವರು ಅರ್ಹರಾಗಿದ್ದಾರೆ. ಇಂದು (ಮಂಗಳವಾರ) ಅವರು ಕಠಿಣ ಹಾದಿಯಲ್ಲಿ ಬ್ಯಾಟಿಂಗ್ ಮಾಡಿ 98 ರನ್ ಗಳಿಸಿದರು. ಇದು ಸ್ಕೋರ್ಬೋರ್ಡ್ ತೋರಿಸುವುದಕ್ಕಿಂತ ಮೌಲ್ಯಯುತವಾಗಿದೆ," ಎಂದು ಸಹ ಆಟಗಾರನನ್ನು ಟೀಮ್ ಇಂಡಿಯಾ ನಾಯಕ ಶ್ಲಾಘಿಸಿದರು. ಮಂಗಳವಾರದ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಓಡಿಐ ಸರಣಿಯಲ್ಲಿ 1-0 ಮುನ್ನಡೆ ಮಡೆದಿದ್ದು, ಉಭಯ ತಂಡಗಳು ಶುಕ್ರವಾರ ಇದೇ ಅಂಗಣದಲ್ಲಿ ಎರಡನೇ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fb06Dc