ಮಂಗಳೂರು: ಸಚಿವ ಸಿಪಿ ಯೋಗೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮವೊಂದರ ವೇದಿಕೆ ಕುಸಿದುಬಿದ್ದು ಎಲ್ಲರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಮಂಗಳೂರಿನ ಸಸಿಹಿತ್ಲುವಿನಲ್ಲಿ ನಡೆದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ದ.ಕ., ಕರ್ನಾಟಕ ಹಾಲು ಉತ್ಪಾದಕರ ಫೆಡರೇಶನ್ ಸಹಕಾರದೊಂದಿಗೆ ಸಸಿಹಿತ್ಲುವಿನ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸಹಯೋಗದೊಂದಿಗೆ ಸಸಿಹಿತ್ಲುವಿನಲ್ಲಿ ನಡೆದ ನಂದಿನಿ ಉತ್ಸವದ ಮೊದಲು ನಂದಿನಿ ನದಿಗೆ ಆರತಿ ಕಾರ್ಯಕ್ರಮದಲ್ಲಿ ಆರತಿಗಾಗಿ ನಿರ್ಮಾಣ ಮಾಡಿದ ಸ್ಟೇಜೊಂದು ಗಣ್ಯರ ಭಾರ ತಾಳಲಾರದೆ ಕುಸಿದು ಬಿದ್ದಿದೆ. ಏನಾಗುತ್ತಿದೆ ಅಂತ ನೋಡುವಷ್ಟರಲ್ಲೇ ಸಚಿವ ಸಿಪಿ ಯೋಗೇಶ್ವರ್ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ಕೆಳಗೆ ಕುಸಿದು ಬಿದ್ದಿದ್ದಾರೆ. ಆದರೆ ಸ್ಟೇಜ್ ಹಿಂದಕ್ಕೆ ಬಿದ್ದ ಕಾರಣ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಸಭಾ ಕಾರ್ಯಕ್ರಮಕ್ಕೂ ಮೊದಲು ನಂದಿನಿ ನದಿಯ ಆರತಿಗಾಗಿ ಗಣ್ಯರಿಗೆ ಮಾತ್ರ ಈ ಸ್ಟೇಜ್ ಹತ್ತಲು ಅವಕಾಶ ನೀಡಬೇಕಿತ್ತು. ಆದರೆ ಗಣ್ಯರ ಜತೆಗೆ ಇತರ ಮಂದಿ ಕೂಡ ಸ್ಟೇಜ್ ಮೇಲೆ ಹತ್ತಿದರು. ಇವರ ಭಾರ ತಾಳಿಕೊಳ್ಳಲಾಗದೇ ಸ್ಟೇಜ್ ಕುಸಿದಿದೆ ಎನ್ನಲಾಗಿದೆ.
from India & World News in Kannada | VK Polls https://ift.tt/2OL9WRC