ಪುಣೆ: ಇಂಗ್ಲೆಂಡ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ ಯುವ ವೇಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅದರಂತೆ ಪಾಕಿಸ್ತಾನ ತಂಡದ ಮಾಜಿ ವೇಗಿ ಕರ್ನಾಟಕ ಮೂಲದ ವೇಗಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಳೆದ ಮಂಗಳವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಭಾರತ ತಂಡ, 66 ರನ್ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತ್ತು. 318 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಜೆಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋವ್ ಜೋಡಿ ತಂಡಕ್ಕೆ ಭರ್ಜರಿ ಆರಂಭ ದೊರಕಿಸಿಕೊಟ್ಟಿತ್ತು. ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈ ಜೋಡಿ ಭಾರತೀಯ ಬೌಲರ್ಗಳಿಗೆ ಬೆವರಿಳಿಸಿತ್ತು. ಅದರಂತೆ ಪ್ರಸಿಧ್ ಕೃಷ್ಣ ಆರಂಭಿಕ ಮೂರು ಓವರ್ಗಳಲ್ಲಿ 37 ರನ್ ಬಿಟ್ಟುಕೊಟ್ಟಿದ್ದರು. ನಂತರ, 15ನೇ ಓವರ್ನಲ್ಲಿ ಮತ್ತೆ ಚೆಂಡು ಕೈಗೆತ್ತಿಕೊಂಡ ಪ್ರಸಿಧ್, ಜೇಸನ್ ರಾಯ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಆ ಮೂಲಕ 135 ರನ್ಗಳಿಗೆ ಒಂದೂ ವಿಕೆಟ್ ಕಳೆದುಕೊಂಡಿರದ ಇಂಗ್ಲೆಂಡ್ ತಂಡ, 42.1 ಓವರ್ಗಳಿಗೆ 251 ರನ್ಗಳಿಗೆ ಆಲೌಟ್ ಆಯಿತು. ಪ್ರಸಿಧ್ ಕೃಷ್ಣ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಬಳಿಸಿ ಭಾರತೀಯ ಕ್ರಿಕೆಟ್ನಲ್ಲಿ ದಾಖಲೆ ಮಾಡಿದರು. ಪ್ರಸಿಧ್ ಕೃಷ್ಣ ಅವರ ಬೌಲಿಂಗ್ ಸಾಧನೆಯನ್ನು ಕೊಂಡಾಡಿದ ಪಾಕಿಸ್ತಾನ ತಂಡದ ಮಾಜಿ ವೇಗಿ , ಭಾರತದ ಯುವ ವೇಗಿ ಕೃಷ್ಣ ಅಲ್ಲ, 'ಕರಿಷ್ಮಾ' ಎಂದು ಬಣ್ಣಿಸಿದರು. ಕರಿಷ್ಮಾ ಅಂದರೆ 'ಪವಾಡ' ಎಂದರ್ಥ. "ಅವರು ಕೃಷ್ಣ ಅಲ್ಲ; ಅವರು 'ಕರಿಷ್ಮಾ' (ಪವಾಡ). ಮೊದಲನೇ ಸ್ಪೆಲ್ನಲ್ಲಿ ಇಂಗ್ಲೆಂಡ್ ಓಪನರ್ಗಳ ಎದುರು ದುಬಾರಿಯಾಗಿದ್ದ ಪ್ರಸಿಧ್ ಕೃಷ್ಣ, ನಂತರ ಎರಡನೇ ಸ್ಪೆಲ್ನಲ್ಲಿ ಕಮ್ಬ್ಯಾಕ್ ಮಾಡಿ 4 ವಿಕೆಟ್ ಪಡೆದಿದ್ದು ನಿಜಕ್ಕೂ ಪವಾಡ. ಇಂಗ್ಲೆಂಡ್ ವಿರುದ್ಧ ಮೊದಲನೇ ಓಡಿಐ ಪಂದ್ಯದಲ್ಲಿ ಪ್ರಸಿಧ್ ಕೃಷ್ಣ ಪರಿಣಾಮಕಾರಿಯಾಗಿ ಕಮ್ಬ್ಯಾಕ್ ಮಾಡಿದ್ದನ್ನು ನೋಡಲು ನನಗೆ ತುಂಬಾ ಖುಷಿಯಾಗಿತ್ತು," ಎಂದು ಯುವ ವೇಗಿಯನ್ನು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಗುಣಗಾನ ಮಾಡಿದರು. "ಒಮ್ಮೆ ಹೆಚ್ಚಿನ ರನ್ಗಳನ್ನು ಬಿಟ್ಟುಕೊಟ್ಟ ಬಳಿಕ ಒಬ್ಬ ವೇಗದ ಬೌಲರ್ ಆಗಿ ನಿಮ್ಮ ಮನೋವೃತ್ತಿ, ನಿಮ್ಮ ಧೈರ್ಯ, ನಿಮ್ಮ ಪ್ರತಿಭೆ ಹಾಗೂ ಕೌಶಲ ತೋರುವ ಮೂಲಕ ತಿರುಗೇಟು ನೀಡುವ ಅಗತ್ಯವಿರುತ್ತದೆ. ಆದರೆ, ಅವರು(ಕೃಷ್ಣ) ನಾಲ್ಕು ವಿಕೆಟ್ ಪಡೆದ ಹಾದಿ ಅದ್ಭುತವಾಗಿತ್ತು. ಅತ್ಯುತ್ತಮ ಬೌಲಿಂಗ್ ಮಾಡಿದ್ದು, ನೀವು ಇದನ್ನೇ ಮುಂದುವರಿಸಿ," ಎಂದು ಪಾಕ್ ಮಾಜಿ ವೇಗಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ. ಶುಕ್ರವಾರ ನಡೆಯುವ ಎರಡನೇ ಹಣಾಹಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3d0GBuc