ರಾಜಸ್ಥಾನ ಬಿಕ್ಕಟ್ಟು: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ; ಪೈಲಟ್‌ ಕ್ಯಾಂಪ್‌ಗೆ ಬಿಗ್‌ ರಿಲೀಫ್‌

ಜೈಪುರ: ರಾಜಸ್ಥಾನದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿಗೆ ಮಹತ್ವದ ತಿರುವು ಸಿಕ್ಕಿದ್ದು, ಮಾಜಿ ಡಿಸಿಎಂ ಸೇರಿ 19 ಶಾಸಕರ ಅನರ್ಹತೆ ವಿಚಾರವಾಗಿ ರಾಜಸ್ಥಾನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಹತ್ವದ ಆದೇಶ ನೀಡಿದೆ. ಸತತ ಮೂರನೇ ಬಾರಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಹೈಕೋರ್ಟ್‌ ಆದೇಶ ನೀಡಿರುವುದು ಸ್ಪೀಕರ್‌ ಸಿ.ಪಿ.ಜೋಷಿ ಹಾಗೂ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಭಾರೀ ಹಿನ್ನಡೆಯಾಗಿದೆ. ಮಂಗಳವಾರ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಅನರ್ಹತೆ ಪ್ರಕರಣದ ತೀರ್ಪನ್ನು ಶುಕ್ರವಾರ ಬೆಳಗ್ಗೆ ಪ್ರಕಟಿಸಿದ ಹೈಕೋರ್ಟ್‌, ಮುಂದಿನ ಆದೇಶದವರೆಗೂ ಶಾಸಕರ ಅನರ್ಹತೆಗೆ ತಡೆವೊಡ್ಡಿದೆ. ಇದರಿಂದ ರಾಜಸ್ಥಾನ ಕಾಂಗ್ರೆಸ್‌ನ ರೆಬೆಲ್‌ ನಾಯಕ ಸಚಿನ್‍ ಪೈಲಟ್ ಕ್ಯಾಂಪ್‌ಗೆ ಬಹುದೊಡ್ಡ ನಿರಾಳತೆ ಸಿಕ್ಕಂತಾಗಿದ್ದು, ಅನರ್ಹತೆಯ ತೂಗುಗತ್ತಿಯಿಂದ 19 ಶಾಸಕರು ಸದ್ಯಕ್ಕೆ ಬಚಾವಾಗಿದ್ದಾರೆ. ಮಂಗಳವಾರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ್ದ ರಾಜಸ್ಥಾನ ಹೈಕೋರ್ಟ್‌ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಅಲ್ಲದೆ, ಅನರ್ಹತೆ ವಿಚಾರದಲ್ಲಿ ನ್ಯಾಯಾಲಯದ ಆದೇಶದವರೆಗೂ ಕ್ರಮ ಕೈಗೊಳ್ಳದಂತೆ ಸ್ಪೀಕರ್‌ಗೆ ಸೂಚಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸ್ಪೀಕರ್‌ ಸಿ.ಪಿ.ಜೋಷಿ ಹೈಕೋರ್ಟ್‌ ವಿಳಂಬ ಧೋರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಡೆಯಿರಿ ಎಂದು ಸ್ಪೀಕರ್‌ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶವನ್ನು ನೀಡಬಹುದು ಎಂದು ಹೇಳಿತ್ತು. ಇದರಿಂದ ಸ್ಪೀಕರ್‌ ಮತ್ತು ಗೆಹ್ಲೋಟ್‌ ಪಡೆಗೆ ಭಾರೀ ಹಿನ್ನಡೆ ಉಂಟಾಗಿತ್ತು. ಇನ್ನು, ಶುಕ್ರವಾರದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರವನ್ನು ಪ್ರಕರಣದ ಕಕ್ಷಿದಾರರನ್ನಾಗಿಸಬೇಕೆಂಬ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ಈಗಾಗಲೇ ಬಹುಮತ ಸಾಬೀತು ಪಡಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಶತಾಯಗತಾಯ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಿಎಂ ಗೆಹ್ಲೋಟ್‌ಗೆ ಹೈಕೋರ್ಟ್ ಆದೇಶ ನುಂಗಲಾರದ ತುತ್ತಾಗಿದೆ. ಹೈಕೋರ್ಟ್‌ ಸ್ಪೀಕರ್‌ಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಹೈಕೋರ್ಟ್‌ ತೀರ್ಪನ್ನು ಸ್ಪೀಕರ್‌ ಗೌರವಿಸುತ್ತಾರಾ..? ಅಥವಾ ಸಾಂವಿಧಾನಿಕ ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತಾರಾ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಕಳೆದ ಎರಡು ವಾರಗಳಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕಾಂಗ್ರೆಸ್‌ನ ರೆಬೆಲ್‌ ನಾಯಕ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗ 18 ಶಾಸಕರು ರೆಸಾರ್ಟ್‌ ವಾಸ್ತವ್ಯ ಹೂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಈಗಾಗಲೇ ಸಚಿನ್‌ ಪೈಲಟ್‌ರನ್ನು ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.


from India & World News in Kannada | VK Polls https://ift.tt/30Gg3bM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...