ಹೊಸದಿಲ್ಲಿ: 2018ನೇ ಇಸವಿಯಲ್ಲಿ ನಡೆದ ಹಗರಣ ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡದ ಆಟಗಾರಾದ ನಾಯಕ , ಎಡಗೈ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್, ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದರು. ತಮ್ಮಿಂದಾಗಿರುವ ತಪ್ಪಿಗಾಗಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬೇಷರತ್ ಕ್ಷಮೆಯಾಚಿಸಿದರೂ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷದ ನಿಷೇಧವನ್ನು ಹೇರಿತ್ತು. ಬಳಿಕ ಆಸೀಸ್ ಸ್ಟಾರ್ ಆಟಗಾರರು 2019ನೇ ಸಾಲಿನ ಏಕದಿನ ವಿಶ್ವಕಪ್ ವೇಳೆಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ಪ್ರಸ್ತುತ ಘಟನೆ ಇನ್ನು ಮಾಸದೇ ಉಳಿದಿದೆ. ಈ ನಡುವೆ ಸೀಮಿತ ಓವರ್ಗಳ ಟೂರ್ನಿಗಾಗಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದೆ. ಸ್ಯಾಂಡ್ ಪೇಪರ್ ಹಗರಣದ ಬಳಿಕ ಕಾಂಗರೂ ಪಡೆ ಕೈಗೊಂಡ ಮೊದಲ ದಕ್ಷಿಣ ಆಫ್ರಿಕಾ ಪ್ರವಾಸ ಇದಾಗಿತ್ತು. ಈ ನಡುವೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ಗೆ ಮುಜುಗರದ ಸನ್ನಿವೇಶವು ಎದುರಾಗಿತ್ತು. ದಕ್ಷಿಣ ಆಫ್ರಿಕಾ ಅಭಿಮಾನಿಯೊಬ್ಬರು 'ಸ್ಯಾಂಡ್ ಪೇಪರ್ ಮಾರಾಟಕ್ಕಿದೆ' ಎಂಬ ಭಿತ್ತಿಪತ್ರವನ್ನು ಪ್ರದರ್ಶಿಸಿದ್ದರು. ಈ ಮೂಲಕ ಬಾಲ್ ಟ್ಯಾಂಪರಿಂಗ್ ಪ್ರಕರಣದ ಕರಾಳ ದಿನಗಳ ನೆನಪಿಸಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಆದರೂ ಇವೆಲ್ಲವೂ ಕಮ್ ಬ್ಯಾಕ್ ಹೀರೊ ಸ್ಮಿತ್ ಮೇಲೆ ಯಾವುದೇ ಅಡ್ಡ ಪರಿಣಾಮವನ್ನು ಬೀರಲಿಲ್ಲ. ಅಲ್ಲದೆ ಗಮನಾರ್ಹ ನಿರ್ವಹಣೆ ನೀಡಿರುವ ಸ್ಟೀವ್ ಸ್ಮಿತ್ 32 ಎಸೆತಗಳಲ್ಲಿ 45 ರನ್ ಗಳಿಸಿ ಆಸ್ಟ್ರೇಲಿಯಾ ತಂಡವನ್ನು 196 ರನ್ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದರು. ಬಳಿಕ ಆಶ್ಟನ್ ಅಗರ್ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆಯ ನೆರವಿನಿಂದ 107 ರನ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ನಿಮ್ಮ ಮಾಹಿತಿಗಾಗಿ, 2019 ಏಕದಿನ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಸ್ಮಿತ್ ವಿರುದ್ಧ ನಿಂದನೆಯನ್ನು ಮಾಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಆಟಗಾರನನ್ನು ನಿಂದಿಸುವುದನ್ನು ತಡೆಹಿಡಿದಿದ್ದರು. ಇದಕ್ಕಾಗಿ ಐಸಿಸಿಯಿಂದ 'ಸ್ಪಿರಿಟ್ ಆಫ್ ಪ್ರಶಸ್ತಿ'ಗೂ ಭಾಜನವಾಗಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bYYcl1