ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಟೆಸ್ಟ್ ಸರಣಿಗೆ ಔಟ್ ಆಫ್ ಫಾರ್ಮ್ ಅವರನ್ನು ಕೈ ಬಿಡಲು ಟೀಮ್ ಮ್ಯಾನೇಜ್ಮೆಂಟ್ ತೀರ್ಮಾನಿಸಿದರೆ ಬ್ಯಾಟಿಂಗ್ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯ ಬ್ಯಾಟ್ಸ್ಮನ್ಗಳಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ನಿಯಮಿತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ 'ಖೇಲ್ನೀತಿ'ಯಲ್ಲಿ ಈ ರೀತಿಯ ನಿಲುವನ್ನು ಪ್ರಕಟಿಸಿದ್ದಾರೆ. ನ್ಯೂಜಿಲೆಂಡ ವಿರುದ್ಧ ಮುಂಬೈ ಟೆಸ್ಟ್ ಪಂದ್ಯದ ಪ್ರಥಮ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ ಕ್ರಮವಾಗಿ 150 ಹಾಗೂ 62 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟವನ್ನು ಮೈಗೂಡಿಸಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ. "ಒಬ್ಬ ಆಟಗಾರ 4 ರಿಂದ 5 ವರ್ಷಗಳ ಕಾಲ ದೇಶಿ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿದ್ದರೆ, ಅವರು ಸ್ಪಿನ್ನರ್ಗಳನ್ನು ಅತ್ಯುತ್ತಮವಾಗಿ ಎದುರಿಸುತ್ತಾರೆ. ಹೊಸ ಚೆಂಡಿನಲ್ಲಿ ವೇಗಿಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ಸ್ಪಿನ್ನರ್ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಮಯಾಂಕ್ ಅಗರ್ವಾಲ್ ಮೂರನೇ ಕ್ರಮಾಂಕಕ್ಕೆ ಅತ್ಯುತ್ತಮ ಆಯ್ಕೆ," ಎಂದು ತಿಳಿಸಿದರು. ಪ್ರಸ್ತುತ ಭಾರತ ತಂಡದ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಲು ಇದು ಸಕಾಲ ಎಂಬ ಅಂಶವನ್ನು ಇದೇ ವೇಳೆ ಮಾಜಿ ವಿಕೆಟ್ ಕೀಪರ್ ಹೇಳಿದರು. "ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಸ್ಥಿರತೆ ಇರಬೇಕು. ಒಂದು ವೇಳೆ 3, 4 ಹಾಗೂ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿಯಮಿತವಾಗಿ ರನ್ ಮೂಡಿ ಬಂದಿಲ್ಲವಾದರೆ, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅದರಲ್ಲೂ ನೀವು ಬಲಿಷ್ಠ ಬೌಲಿಂಗ್ ದಾಳಿ ವಿರುದ್ಧ ಆಡುತ್ತಿದ್ದರೆ, ನೀವು ಸುಲಭವಾಗಿ ರನ್ಗಳಿಸಲು ಬಿಡುವುದಿಲ್ಲ," ಎಂದರು. "ಹಾಗಾಗಿ, ಮುಖ್ಯ ಆಟಗಾರರು ಫಾರ್ಮ್ಗೆ ಮರಳಲು ನೀವು ಸ್ವಲ್ಪ ಸಮಯದವರೆಗೂ ಕಾಯಬೇಕಾಗುತ್ತದೆ ಅಥವಾ ಹೊಸ ಆಟಗಾರರಿಗೆ ಅವಕಾಶ ನೀಡಬೇಕಾಗುತ್ತದೆ. ನನಗೆ ಅನಿಸಿದ ಹಾಗೆ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಬೇಕಾದ ಸಮಯ ಇದೀಗ ಬಂದಿದೆ," ಎಂದು ಸಬಾ ಕರೀಮ್ ಹೇಳಿದರು. ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಟೆಸ್ಟ್ನಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ಕಳೆದುಕೊಂಡಿದ್ದ ಭಾರತ ತಂಡ, ಮುಂಬೈ ಟೆಸ್ಟ್ ಪಂದ್ಯದಲ್ಲಿ 372 ರನ್ಗಳ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು. ನ್ಯೂಜಿಲೆಂಡ್ ವಿರುದ್ಧ ತವರು ಸರಣಿಗಳಲ್ಲಿ ಯಶಸ್ವಿಯಾಗಿರುವ ಭಾರತ ತಂಡ ಡಿ.16ರಂದು ದಕ್ಷಿಣ ಆಫ್ರಿಕಕ್ಕ ಪ್ರಯಾಣ ಬೆಳೆಸಲಿದ್ದು, ಡಿ.26 ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತೊಡಗಲಿದೆ. ನಂತರ ಮೂರು ಪಂದ್ಯಗಳ ಓಡಿಐ ಸರಣಿ ಆಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31GktmU