ಹೊಸದಿಲ್ಲಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ 15 ಸದಸ್ಯರ ತಮ್ಮ ನೆಚ್ಚಿನ ಭಾರತ ತಂಡವನ್ನು ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಹಿರಿಯ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಹಾಗೂ ಆರಂಭಿಕ ಶುಭಮನ್ ಗಿಲ್ ಅವರನ್ನು ಕೈ ಬಿಟ್ಟಿದ್ದಾರೆ. ಇದೇ ಡಿ.16 ರಂದು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಲಿದ್ದು, ಡಿ.26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕೆಲವೇ ದಿನಗಳಲ್ಲಿ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಆದರೆ, ಇದಕ್ಕೂ ಮುನ್ನ ಆಕಾಶ್ ಚೋಪ್ರಾ ತಮ್ಮ ನೆಚ್ಚಿನ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಚರ್ಚೆ ಮಾಡಿರುವ ಆಕಾಶ್ ಚೋಪ್ರಾ, ಇದರಲ್ಲಿ ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ಅನ್ನು ಕೂಡ ಪ್ರಕಟಿಸಿದ್ದು, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ಗೆ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಟ್ಟು ಇನ್ಫಾರ್ಮ್ ಆರಂಭಿಕ ಮಯಾಂಕ್ ಅಗರ್ವಾಲ್ ಅವರನ್ನು ಕೈ ಬಿಟ್ಟಿದ್ದಾರೆ. "ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಅವರನ್ನು ಇನಿಂಗ್ಸ್ ಅರಂಭಿಸಲು ನಾನು ಆಯ್ಕೆ ಮಾಡಿದ್ದೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ರೋಹಿತ್-ರಾಹುಲ್ ಇಬ್ಬರೂ ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿಯೂ ಈ ಜೋಡಿ ಉತ್ತಮ ಪ್ರದರ್ಶನ ತೋರಿತ್ತು," ಎಂದು ಹೇಳಿದರು. "ನನ್ನ ತಂಡದಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಉಳಿಸಿಕೊಳ್ಳುತ್ತೇನೆ ಹಾಗೂ ಪ್ಲೇಯಿಂಗ್ ಇಲೆವೆನ್ನಲ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಿಸುತ್ತೇನೆ. ಅವರ ಮೇಲೆ ಪ್ರಸ್ತುತ ಸಾಕಷ್ಟು ಒತ್ತಡವಿದೆ ಆದ್ದರಿಂದ ಈ ಪ್ರವಾಸ ಅವರಿಗೆ ತುಂಬಾ ಮುಖ್ಯವಾಗಿದೆ. ಈ ಕಾರಣದಿಂದ ನಾನು ಅವರನ್ನು ಉಳಿಸಿಕೊಳ್ಳುತ್ತೇನೆ," ಎಂದಿದ್ದಾರೆ. "ಇನ್ನು ನಾಯಕ ವಿರಾಟ್ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕದಲ್ಲಿ ಪರಿಗಣಿಸುತ್ತೇನೆ. ದಕ್ಷಿಣ ಆಫ್ರಿಕಾದಲ್ಲಿ ಅವರು ಶತಕ ಸಿಡಿಸಲು ತುಂಬಾ ದಿನಗಳಿಂದ ತಿಣುಕಾಡುತ್ತಿದ್ದಾರೆ. ಆದರೆ, ಈ ಬಾರಿ ಅವರು ಶತಕ ಸಿಡಿಸುವ ಮೂಲಕ ದೀರ್ಘಾವಧಿ ಕಾಯುವಿಕೆಗೆ ಅಂತ್ಯವಾಡಬಹುದು. ಅವರು ಬ್ಯಾಟ್ಸ್ಮನ್ ಆಗಿ ರನ್ ಗಳಿಸಿದ್ದೇ ಆದಲ್ಲಿ, ನಾಯಕನಾಗಿ ವಿರಾಟ್ ಕೊಹ್ಲಿಗೆ ನೆರವಾಗಲಿದ್ದಾರೆ," ಎಂದು ಹೇಳಿದರು. "ಐದನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದ್ದೇನೆ. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿರುವ ಒಬ್ಬ ಆಟಗಾರನನ್ನು ಯಾರು ತಾನೆ ಕೂರಿಸುತ್ತಾರೆ. ಅವರು ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗಾಗಿ ಅಜಿಂಕ್ಯ ರಹಾನೆ ಅವರನ್ನು ನಾನು ಆಯ್ಕೆ ಮಾಡಿಲ್ಲ ಅಂದಹಾಗೆ. ಸ್ಥಿರವಾಗಿ ರನ್ ಗಳಿಸುವ ಆಟಗಾರನನ್ನು ನಾವು ಉಳಿಸಿಕೊಳ್ಳಬೇಕಾಗಿದೆ," ಎಂದರು. "ಇನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಐವರು ಬ್ಯಾಟ್ಸ್ಮನ್ಗಳ ಜೊತೆಗೆ ಒಬ್ಬ ವಿಕೆಟ್ ಕೀಪರ್ ಅನ್ನು ಪರಿಗಣಿಸಿದ್ದೇನೆ. ಆದ್ದದಿಂದ ನಾಯಕನ ಫಿಲಾಸಫಿಯನ್ನು ಬದಲಾಯಿಸಲು ನನಗೆ ಇಷ್ಟವಿಲ್ಲ. ಅವರು ಐವರು ಬೌಲರ್ಗಳನ್ನು ಆಡಿಸುತ್ತೇನೆಂದು ತಿಳಿಸಿದ್ದಾರೆ. ಅದರಂತೆ ನಾನು ಕೂಡ ಐವರು ಬೌಲರ್ಗಳನ್ನು ಆರಿಸಿದ್ದೇನೆ," ಎಂದು ಹೇಳಿದರು. "ನಂ.7ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ 8ನೇ ಕ್ರಮಾಂಕದಲ್ಲಿ ಆರ್ ಅಶ್ವಿನ್ ಅವರನ್ನು ಪರಿಗಣಿಸುತ್ತೇನೆ. ಆ ಮೂಲಕ ತಂಡಕ್ಕೆ ಒಟ್ಟು ಇಬ್ಬರು ಸ್ಪಿನ್ನರ್ಗಳು ಲಭಿಸಿದಂತಾಗುತ್ತದೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಡಿಸುತ್ತೇನೆ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಚೋಪ್ರಾ ಆರಿಸಿದ ಭಾರತ ತಂಡದ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು: ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಶಾರ್ದುಲ್ ಠಾಕೂರ್ ಹಾಗೂ ಉಮೇಶ್ ಯಾದವ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3IvooEc