
ಧಾರವಾಡ: ನವೆಂಬರ್ನಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ರೈತರ ಸಾವಿರಾರೂ ಹೆಕ್ಟೇರ್ ಬೆಳೆ, ಮನೆ ಹಾನಿ ಸೇರಿದಂತೆ ಹುಬ್ಬಳ್ಳಿ- ಅವಳಿನಗರದ ಬಹುತೇಕ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಬುಧವಾರ ರಾತ್ರಿಯಿಂದ ಸುರಿಯಲು ಆರಂಭಿಸಿದ್ದರಿಂದ ರೈತರು ಇರುವ ಬೆಳೆಯನ್ನಾದರೂ ಕಾಪಾಡಿಕೊಳ್ಳಲು ಹೆಣಗಾಡುವಂತಾಗಿದೆ. ಹೌದು! ನವೆಂಬರ್ ಮೂರು ಮತ್ತು ಕೊನೆಯ ವಾರದಲ್ಲಿ ಸುರಿದ ನಿರಂತರ ಮಳೆಗೆ ಧಾರವಾಡ ಜಿಲ್ಲೆಯಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದ ಕಡಲೆ, ಜೋಳ, ಗೋದಿ, ಗೋವಿನಜೋಳ, ಕಬ್ಬು, ಟೊಮೆಟೊ ಹಾಗೂ ಮುಂಗಾರಿನ ಹತ್ತಿ ಸೇರಿದಂತೆ ಇತರ ತರಕಾರಿ ಬೆಳೆಗಳು ಮಣ್ಣು ಪಾಲಾಗಿವೆ. ಜಿಲ್ಲೆಯಾದ್ಯಂತ 96,583.88 ಹೆಕ್ಟೇರ್ ಕೃಷಿ ಬೆಳೆ ಹಾಗೂ 8,759.80 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ 200ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾಗೂ ಸುಮಾರು 22 ಮನೆಗಳು ಪೂರ್ಣ ಹಾನಿಯಾಗಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸರಕಾರ ಸಮೀಕ್ಷೆ ನಡೆಸಿದೆ. ಈ ಮಧ್ಯೆ ಮತ್ತೆ ಆರಂಭಗೊಂಡಿದ್ದರಿಂದ ರೈತರಿಗೆ ಹಾಗೂ ನಗರದ ಜನತೆಯ ಜೀವನ ಅಸ್ತವ್ಯಸ್ತವಾಗಿದೆ. ಕಡಲೆ ಬೆಳೆಗೆ ಹೆಚ್ಚು ಹಾನಿಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಕಡಲೆ ಬೆಳೆಯು ನಿರಂತರ ಮಳೆಗೆ ಜಿಲ್ಲೆಯಲ್ಲಿ ತೀವ್ರವಾದ ಹಾನಿಯಾಗಿದೆ. ಧಾರವಾಡ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಭಾಗದಲ್ಲಿ ಅತೀ ಹೆಚ್ಚಾಗಿ ಕಡಲೆ ಬೆಳೆಯನ್ನು ಬೆಳೆಯುತ್ತಾರೆ. ನವೆಂಬರ್ನಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಬಹುತೇಕ ಹಾನಿಯಾಗಿದೆ. ಅಲ್ಲದೇ ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕೀಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಂದು ಬಾರಿ ಈ ಕೀಟ ಬೆಳೆಗೆ ಲಗ್ಗೆ ಇಟ್ಟರೆ ಅಲ್ಲಿಗೆ ಬೆಳೆಯ ಕಥೆ ಮುಗಿದಂತೆಯೇ ಸರಿ. ಇನ್ನು ಕೀಟಗಳು ಎಲೆಯನ್ನೇ ಹೆಚ್ಚು ತಿನ್ನುವುದರಿಂದಾಗಿ ಗಿಡಗಳಿಗೆ ಪತ್ರ ಹರಿತ್ತು ಇಲ್ಲದೆ ಒಣಗಿದಂತೆ ಕಾಣುತ್ತವೆ. ಬಳಿಕ ನಿಧಾನವಾಗಿ ಅವುಗಳ ಬೆಳವಣಿಗೆ ಕುಂಠಿತಗೊಂಡು, ಇಳುವರಿ ಕಡಿಮೆಯಾಗುತ್ತದೆ. ಈಗ ಮತ್ತೆ ಮಳೆ ಆರಂಭವಾಗಿದ್ದರಿಂದ ಕಡಲೆ ಬೆಳೆಗೆ ಹೆಚ್ಚು ತೇವಾಂಶ ಆಗಿ ಹಾನಿಯಾಗುತ್ತದೆ. ಇದರಿಂದ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಕಡಲೆ ಬೆಳೆ ಮಣ್ಣು ಪಾಲಾಗುವ ಸಾಧ್ಯತೆ ಇದೆ. ಇದರಿಂದ ಈ ಬಾರಿಯೂ ನಮಗೆ ಹಿಂಗಾರು ಫಸಲಿನ ಬಗ್ಗೆ ನಿರಾಸೆಯಾಗಿದೆ ಎನ್ನುತ್ತಾರೆ ನವಲಗುಂದದ ರೈತ ಶಂಕರಗೌಡ ಪಾಟೀಲ. ಹಾನಿ ಪೋರ್ಟಲ್ನಲ್ಲಿ ಅಳವಡಿಕೆ ನವೆಂಬರ್ನಲ್ಲಿನ ಮಳೆಯಿಂದಾದ ಮನೆ, ಬೆಳೆ ಹಾನಿ ವಿವರವನ್ನು ಪರಿಹಾರ ಮತ್ತು ಆರ್ಜಿಎಚ್ಸಿಎಲ್ ಪೋರ್ಟಲ್ನಲ್ಲಿ ಅಳವಡಿಸುವ ಕಾರ್ಯ ಶೇ. 90ರಷ್ಟಾಗಿದೆ. ಅಧಿಕಾರಿಗಳ ತಂಡಗಳು ಹಾನಿ ಸಮೀಕ್ಷೆ ಮುಗಿಸಿದ್ದು, ಉಳಿದ ಅರ್ಜಿಗಳ ಅಳವಡಿಕೆ ಕಾರ್ಯ ನಿಗದಿತ ಅವಧಿಯಲ್ಲಿ ಮುಕ್ತಾಯವಾಗಲಿದೆ. ಅಲ್ಲದೇ 2019-20, 2020- 2021 ಹಾಗೂ 2021ರ ಜೂನ್- ಆಗಸ್ಟ್ನಲ್ಲಿ ಮಳೆಯಿಂದಾದ ಹಾನಿಯನ್ನು ಈಗ ಪರಿಗಣಿಸುವುದಿಲ್ಲ. ಕೇವಲ 2021ರ ನವೆಂಬರ್ ತಿಂಗಳ ಹಾನಿಯನ್ನು ಆರ್ಜಿಎಚ್ಸಿಎಲ್ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಳಿನಗರದ 57 ಕಿಮೀ ರಸ್ತೆ ಹಾನಿ ಅಕಾಲಿಕ ಮಳೆಯಿಂದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಕೆಲವಡೆ ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ. ಸುಮಾರು 56.93 ಕಿ.ಮೀ. ನಷ್ಟು ರಸ್ತೆಗಳು ಹಾನಿಯಾಗಿದ್ದು, 33.90 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಅಂದಾಜಿಸಿದೆ. ಜೂನ್-ಜುಲೈನಲ್ಲಿ ಸುರಿದ ವಾಡಿಕೆ ಮಳೆಯಿಂದ ಕೆಟ್ಟು ಹೋಗಿದ್ದ ರಸ್ತೆಯ ತಗ್ಗು- ಗುಂಡಿಗಳನ್ನು ಮುಚ್ಚಲು ಪಾಲಿಕೆ ಮುಂದಾಗಿತ್ತು. ಅದರಂತೆ ಟೆಂಡರ್ ಕರೆದು ಆದೇಶ ನೀಡಿತ್ತು. ಅಷ್ಟರಲ್ಲಿಯೇ ನವೆಂಬರ್ನಲ್ಲಿ ಸುರಿದ ಅಕಾಲಿಕ ಮಳೆಯಿಂದ ತಗ್ಗು- ಗುಂಡಿ ಮುಚ್ಚುವ ಕೆಲಸಕ್ಕೆ ಬ್ರೇಕ್ ಬಿದ್ದಿದ್ದು, ರಸ್ತೆಗಳ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರಕಾರ, ಧಾರವಾಡ ಜಿಲ್ಲಾಡಳಿತಕ್ಕೆ 7.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೊತ್ತವು ಜೀವ ಹಾನಿ, ಮನೆ ಕುಸಿತ, ಬೆಳೆ ಹಾನಿ ಪರಿಹಾರಕ್ಕೆ ಸಾಲದು. ಇನ್ನೆಲ್ಲಿಂದ ರಸ್ತೆ ದುರಸ್ತಿಗೆ ಹಣ ತರುವುದು ಎಂಬುದು ಪಾಲಿಕೆಯ ಪ್ರಶ್ನೆಯಾಗಿದೆ.
from India & World News in Kannada | VK Polls https://ift.tt/3EvSV24