ಕಾಂಗ್ರೆಸ್‌ನ ಹಣ ಬಲ ಹಾಗೂ ಬಿಜೆಪಿಯ ಜನ ಬಲದ ನಡುವೆ ಸಂಘರ್ಷ: ಸಿಎಂ ಬೊಮ್ಮಾಯಿ

: ನಮ್ಮ ಸರಕಾರದ ಗಮನ ಗ್ರಾಮಗಳ ಕಡೆಗೆ ಇದೆ. ಗ್ರಾಮಗಳ ಅಭಿವೃದ್ಧಿಯೇ ನಮ್ಮ ಪಕ್ಷದ, ಸರಕಾರದ ಮೂಲ ಉದ್ದೇಶವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿಯಿಂದ ಬೀದರ್‌ನಲ್ಲಿ ಭಾನುವಾರ ಸಂಜೆ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಬಳಿಗೆ ಆಡಳಿತ ಕೊಂಡೊಯ್ಯಬೇಕು. ಜನರಿದ್ದಲ್ಲೇ ಸೇವೆಗಳು ಲಭಿಸಬೇಕು. ಹೀಗಾಗಿ ಗ್ರಾ. ಪಂ. ಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜ್ಯದ 50 ಗ್ರಾ. ಪಂ. ಗಳ ಮೂಲ ಸೌಕರ್ಯಕ್ಕಾಗಿ ತಲಾ 2 ಕೋಟಿ ನೀಡಲಾಗುತ್ತಿದೆ. ಸಕಾಲದಲ್ಲಿ ಅನುದಾನ ಬಳಸಿಕೊಂಡರೆ ಹೆಚ್ಚುವರಿಯಾಗಿ 25 ಲಕ್ಷ ರೂ. ನೀಡಲಾಗುವುದು ಎಂದರು. ರಾಜ್ಯದ 750 ಗ್ರಾಮಗಳಿಗೆ ಸಂಪೂರ್ಣ ಸೂರು ಕಲ್ಪಿಸಲಾಗುತ್ತದೆ. ಜನರ ಕೈಗೆ ಅಧಿಕಾರ ನೀಡುವ, ಅಧಿಕಾರ ವಿಕೇಂದ್ರೀಕರಣದ ಜತೆಗೆ, ಆರ್ಥಿಕ ವಿಕೇಂದ್ರೀಕರಣ ನಮ್ಮ ಗುರಿಯಾಗಿದೆ. 7,500 ಸಂಘಗಳಿಗೆ ತಲಾ 1 ಲಕ್ಷ ರೂ. ಸಹಾಯ ಧನ ಮಾರ್ಚ್‌ನಿಂದ ನೀಡಲಾಗುತ್ತದೆ. 75 ಸಾವಿರ ಗ್ರಾಮೀಣ ಯುವಕರಿಗೆ ಕೌಶಲ ತರಬೇತಿ ನೀಡಿ, ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ. 750 ಎಫ್‌ಪಿಓ ಕಂಪನಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು. ಕೇಂದ್ರ, ರಾಜ್ಯ ಸರಕಾರಗಳ ಯಾವುದೇ ಯೋಜನೆ, ಕಾರ್ಯಕ್ರಮಗಳು ಗ್ರಾಮಗಳಿಂದಲೇ ಶುರುವಾಗುತ್ತವೆ. ರಾಮಕೃಷ್ಣ ಹೆಗಡೆ, ಅಬ್ದುಲ್‌ ನಜೀರ್‌ ಸಾಬ್‌ ಅವರುಗಳು ಅಧಿಕಾರ ವಿಕೇಂದ್ರೀಕರಣಗೊಳಿಸಿ, ಗ್ರಾ. ಪಂ., ತಾ. ಪಂ., ಜಿ. ಪಂ. ಸೃಷ್ಟಿಸಿದರು. ಮುಂದೆ ವಾಜಪೇಯಿ ಅವರು ಗ್ರಾಮ ಸ್ವರಾಜ್‌ ಕಲ್ಪನೆ ನೀಡಿದರು. ಗ್ರಾಮಗಳ ಅಭಿವೃದ್ಧಿಯೇ ನಮ್ಮ ಸಂಕಲ್ಪವಾಗಿದೆ ಎಂದು ಸಿಎಂ ಹೇಳಿದರು. ಬೀದರ್‌ ರಾಜ್ಯದ ಕಿರೀಟ. ದೇವರಿಗೆ ಸಲ್ಲಬೇಕಾದ ಗೌರವವದು. ಕನ್ನಡಾಂಬೆಯ ಕಿರೀಟ ಬೀದರ್‌. ಜಿಲ್ಲೆಯ ಸಮಗ್ರ ಅಭಿವೃದ್ಧಿಯಾದರೆ ಅದು ಕಿರೀಟ ಪ್ರಾಯವಾಗುತ್ತದೆ. ಅಭಿವೃದ್ಧಿ ಮಾಡಲೆಂದೇ ನಾನು ಬಂದಿದ್ದೇನೆ. ನಿಮ್ಮಗಳ ಆಶೀರ್ವಾದ ನಮ್ಮ ಮೇಲಿರಲಿ. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ ಎಂದು ಸಿಎಂ ಹೇಳಿದರು. ರೈತರ ಮಕ್ಕಳಿಗಾಗಿ 1,000 ಕೋಟಿ ಮೀಸಲು ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ವಿದ್ಯಾ ನಿಧಿ ಸ್ಥಾಪಿಸಿ, ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್‌ಗಾಗಿ 1,000 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ 20 ಲಕ್ಷ ರೈತ ಕುಟುಂಬಗಳಿಗೆ ನೆರವು ನೀಡಲು ಸಂಕಲ್ಪ ತೊಡಲಾಗಿದೆ. ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದೂ ಬೊಮ್ಮಾಯಿ ತಿಳಿಸಿದರು. ಹಣ ಬಲ ವರ್ಸಸ್‌, ಜನ ಬಲ ಬೀದರ್‌ ಸೇರಿ ರಾಜ್ಯಾದ್ಯಂತ ಕಾಂಗ್ರೆಸ್‌ನ ಹಣ ಬಲ ವರ್ಸಸ್‌, ಬಿಜೆಪಿಯ ಜನ ಬಲದ ನಡುವೆ ಸಂಘರ್ಷ ನಡೆಯುತ್ತಿದೆ. ಕೊನೆಗೆ ಜನ ಬಲವೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ನುಡಿದರು. ಹಣದಿಂದ, ಆಸೆ ತೋರಿಸಿ ಜನರನ್ನು ಗೆಲ್ಲುವುದಲ್ಲ, ಮತದಾರರನ್ನು ಹೃದಯದಿಂದ ಗೆಲ್ಲಬೇಕು. ನಮ್ಮಲ್ಲಿ (ಬಿಜೆಪಿಯಲ್ಲಿ) ಜನಪ್ರಿಯ ನಾಯಕರು ಅಗತ್ಯವಿಲ್ಲ. ಜನೋಪಯೋಗಿ ನಾಯಕರು ಇದ್ದಾರೆ. ಕಾಂಗ್ರೆಸ್‌ನಲ್ಲಿ ಜನಪ್ರಿಯ ನಾಯಕರಿದ್ದಾರೆ. ಆದರೆ, ಅವರಿಂದ ಜನರಿಗೆ ಉಪಯೋಗವಿಲ್ಲ ಎಂದರು. ನಮ್ಮ ಅಭ್ಯರ್ಥಿ ಪ್ರಕಾಶ್‌ ಖಂಡ್ರೆ ಅವರನ್ನು ಗೆಲ್ಲಿಸಿ, ಜನೋಪಯೋಗ ಪಡೆದುಕೊಳ್ಳಬೇಕೆಂದರು. ಕಾಂಗ್ರೆಸ್‌ ಪಕ್ಷಕ್ಕೆ ವಯಸ್ಸಾಗಿದೆ! ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ವಯಸ್ಸಾಗಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ ವಿಸರ್ಜಿಸಲು ಮಹಾತ್ಮ ಗಾಂಧೀಜಿ ಹೇಳಿದ್ದರು. ಇದೀಗ ದೇಶದ ಜನತೆ ಕಾಂಗ್ರೆಸ್‌ ವಿಸರ್ಜಿಸಲು ಸಿದ್ಧರಾಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು. ತೃಣಮೂಲ ಕಾಂಗ್ರೆಸ್‌ನವರೇ ರಾಹುಲ್‌ ಗಾಂಧಿ ನಾಯಕತ್ವ ಒಪ್ಪುತ್ತಿಲ್ಲ. ಇನ್ನು ದೇಶದ ಜನ ಒಪ್ಪುತ್ತಾರಾ ಎಂದ ಸಿಎಂ, ಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ. ಅಧಿಕಾರ ಇಲ್ಲದ್ದಕ್ಕೆ ಹತಾಷರಾಗಿದ್ದಾರೆ. ಅಧಿಕಾರ ಇದ್ದಾಗ ಜನರ ಸೇವೆ ಮಾಡಿಲ್ಲ ಎಂದು ಸಿಎಂ ದೂರಿದರು. ಕಾಂಗ್ರೆಸ್‌ ಪಕ್ಷಕ್ಕೆ ಸದ್ಯಕ್ಕೆ ಚಷ್ಮಾ ಬೇಕಿದೆ. ನಮ್ಮ ದೃಷ್ಟಿ, ಗುರಿ ಸ್ಪಷ್ಟವಾಗಿದೆ. ನಮಗೆ ಬದ್ಧತೆ ಇದೆ. ಗುರಿ ಮುಟ್ಟುವ ಆತ್ಮವಿಶ್ವಾಸವೂ ಇದೆ ಎಂದು ಸಿಎಂ ಹೇಳಿದರು. ಕೆಕೆಆರ್‌ಡಿಬಿ; 3,000 ಕೋಟಿ ಕ್ರಿಯಾಯೋಜನೆಗೆ ಸೂಚನೆ 5 ವರ್ಷ ಕಾಂಗ್ರೆಸ್‌ನವರೇ ಅಧಿಕಾರದಲ್ಲಿದ್ದರು. ನಂತರ ಅವರ ಬೆಂಬಲಿತ ಸರಕಾರ ಇತ್ತು. ಆಗ ಕೆಕೆಆರ್‌ಡಿಬಿಗಾಗಿ ನೀವು ಏನು ಮಾಡಿದ್ದೀರಿ. ಒಮ್ಮೆಯೂ ನಿಗದಿತ 1,500 ಕೋಟಿ ಖರ್ಚು ಯಾಕೆ ಮಾಡಿಲ್ಲ. ಇದೀಗ ನಾನು 1,500 ಕೋಟಿಯಿಂದ 3,000 ಕೋಟಿ ಅನುದಾನ ನೀಡುವೆ. ಅದನ್ನು ಸಮರ್ಪಕವಾಗಿ ಖರ್ಚು ಮಾಡಲು ಕ್ರಿಯಾಯೋಜನೆ ರೂಪಿಸಲು ಸೂಚಿಸುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು. ಈ ಭಾಗದಲ್ಲಿ ಒಟ್ಟು 14 ಸಾವಿರ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಕೊಡಿಸಿ, ಮಂಜೂರಾತಿ ನೀಡಲಾಗಿದೆ. ಹುದ್ದೆಗಳ ಭರ್ತಿಗೆ ನನ್ನ ಸರಕಾರ ಬದ್ಧವಾಗಿದೆ. ಕೆಕೆಆರ್‌ಡಿಬಿಗೆ ಕಾಯಂ ಅಧಿಕಾರಿ ನೇಮಕ, ಬೆಂಗಳೂರಿನಿಂದ ಕೆಕೆಆರ್‌ಡಿಬಿ ಕೋಶ ಕಲಬುರಗಿಗೆ ಸ್ಥಳಾಂತರ ಸೇರಿ ಅನೇಕ ಕೆಲಸ ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು.


from India & World News in Kannada | VK Polls https://ift.tt/3dt0BpX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...