ಬೆಂಗಳೂರು: ರಾಜಕೀಯ ಎಂಬುವುದೇ ಹೀಗೆ. ಇಲ್ಲಿ ಯಾರೂ ಶತ್ರುವೂ ಅಲ್ಲ, ಯಾರೂ ಮಿತ್ರರೂ ಅಲ್ಲ. ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ನಿಲುವುಗಳು ನಿರ್ಧಾರಗಳು ಬದಲಾವಣೆಯಾಗುತ್ತಿರುತ್ತವೆ. ಹೌದು, ಇತ್ತೀಚೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಪ್ರಧಾನಿ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿರುವುದು ಪ್ರಸ್ತುತ ರಾಜ್ಯದ ರಾಜಕೀಯ ಸನ್ನಿವೇಶದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ನವೆಂಬರ್ 30 ರಂದು ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಲು ದೆಹಲಿಯಲ್ಲಿದ್ದ ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕೆಲಹೊತ್ತುಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ದೇವೇಗೌಡರನ್ನು ಆತ್ಮೀಯವಾಗಿ ಪ್ರಧಾನಿ ಮೋದಿ ಬರಮಾಡಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದರು. ಆದರೆ ಇದೊಂದು ಸೌಹಾರ್ದಯುತ ಭೇಟಿ ಎಂದು ದೇವೇಗೌಡರು ಹೇಳಿದ್ದರು. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದಿದ್ದರು. ಭೇಟಿಯ ಅಸಲಿ ಉದ್ದೇಶವೇನು? *ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆಯ ಮುನ್ಸೂಚನೆಯೇ? *ಬಿಜೆಪಿಯ ಬಿಟೀಂ ಎನ್ನುವ ಕಾಂಗ್ರೆಸ್ಗೆ ಜೆಡಿಎಸ್ ನೀಡುತ್ತಾ ಟಕ್ಕರ್ ? *ಶತ್ರುಗಳ ಶತ್ರು ಮಿತ್ರ ಪಾಲಿಸಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ವರ್ಕೌಟ್ ಆಗುತ್ತಾ? *ಜಾತ್ಯತೀತ ನಿಲುವಿಗೆ ಬದ್ಧನಾಗಿದ್ದೇನೆ ಎನ್ನುತ್ತಿರುವ ದೇವೇಗೌಡರು ಕಮಲದ ಜೊತೆ ಕೈಜೋಡಿಸಲು ಮುಂದಾಗುತ್ತಾರಾ? ಪ್ರಧಾನಿಯನ್ನು ಮಾಜಿ ಪ್ರಧಾನಿಯೊಬ್ಬರು ಭೇಟಿ ಮಾಡಿ ಮಾತುಕತೆ ನಡೆಸುವುದು ಸಹಜ. ಇದರಲ್ಲಿ ಅಚ್ಚರಿ ಪಡಬೇಕಾಗಿ ಇಲ್ಲ ನಿಜ. ಆದರೆ ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಗಮಿಸಿದರೆ ಈ ಭೇಟಿಯನ್ನು ಸಹಜ ಭೇಟಿ ಎಂದು ಅಂದುಕೊಂಡು ಸುಮ್ಮನಿರುವಂತಿಲ್ಲ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ತಂತ್ರಗಾರಿಕೆಗಳು, ಲೆಕ್ಕಾಚಾರಗಳು ಶುರುವಾಗಿದೆ. ಸದ್ಯ ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂಬುವುದು ಸತ್ಯ. ಪಕ್ಷದ ಆಂತರಿಕ ಗೊಂದಲ, ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ಪಕ್ಷದ ವರ್ಚಸ್ಸನ್ನು ಕುಗ್ಗಿಸಿದೆ. ಈ ಸನ್ನಿವೇಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗುತ್ತಿದೆ. ವಿರೋಧ ಪಕ್ಷವಾಗಿ ಆಂತರಿಕ ನೂನ್ಯತೆಗಳ ಜೊತೆಗೂ ಬಿಜೆಪಿಗೆ ಚುನಾವಣೆಯಲ್ಲಿ ತಿರುಗೇಟು ನೀಡಲು ಸಜ್ಜುಗೊಳ್ಳುತ್ತಿದೆ. ಹೀಗಿದ್ದರೂ ಪೂರ್ಣಪ್ರಮಾಣದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಮತ್ತೆ ಆಧಿಕಾರಕ್ಕೆ ಬರುವ ಭರವಸೆಯೂ ಅವರಲ್ಲಿ ಇಲ್ಲ ಎಂಬುವುದು ಕೂಡಾ ಅಷ್ಟೇ ಸ್ಪಷ್ಟ. ಕಿಂಗ್ ಮೇಕರ್ ದಳಪತಿ! ಕಾಂಗ್ರೆಸ್ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಪಕ್ಷಕ್ಕೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದು ಸವಾಲಿನ ಸಂಗತಿಯೇ ಸರಿ. ಹಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಿದೆ. ಈ ನಡುವೆ ಆಪರೇಷನ್ ಹಸ್ತದ ಮೂಲಕ ಜೆಡಿಎಸ್ನ ಕೆಲವು ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. ಈ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಜೆಡಿಎಸ್ ಪಕ್ಷಕ್ಕೂ ಹೆಚ್ಚಿನ ಸ್ಥಾನ ಗೆಲ್ಲುವುದು ಬಹುದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಕಿಂಗ್ ಬದಲಾಗಿ ಕಿಂಗ್ ಮೇಕರ್ ಆಗುವುದು ಆ ಮೂಲಕ ತಮ್ಮ ಪಾಲನ್ನು ಪಡೆದುಕೊಳ್ಳುವುದು ಸದ್ಯಕ್ಕೆ ದಳಪತಿಗಳ ತಂತ್ರಗಾರಿಕೆಯಾಗಿದೆ. ‘ಕೈ’ ಹಿಡಿತದಿಂದ ಸುಸ್ತಾದ ತೆನೆ ಕಮಲ ಮುಡಿಯುತ್ತಾ? ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾನವಾಗಿತ್ತು. ಕೊನೆಗೂ ಪರಿಸ್ಥಿತಿಯ ಲಾಭ ಜೆಡಿಎಸ್ ಪಾಲಾಯಿತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಸಿಎಂ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಆದರೆ 12 ತಿಂಗಳಲ್ಲೇ ಸಂಸಾರ ಸರಿಯಾಗಿ ನಡೆಯದೆ ವಿಚ್ಛೇದನದೊಂದಿಗೆ ಅಂತ್ಯಗೊಂಡಿತು. ಇನ್ನು ಕಾಂಗ್ರೆಸ್ ಜೊತೆಗೆ ಮೈತ್ರಿಯ ಸಹವಾಸ ಬೇಡ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಜೆಡಿಎಸ್ ಸಹವಾಸ ಬೇಡ ಎಂದು ಕೈಮುಖಂಡರು ಸಾರಿ ಹೇಳಿದರು. ಈ ನಡುವೆ 20-20 ಸರ್ಕಾರ ಮಾಡಿ ದಡ ಸೇರಲು ಸಾಧ್ಯವಾಗದ ಬಿಜೆಪಿ ಜೊತೆಗೆ ಮತ್ತೆ ಜೆಡಿಎಸ್ ಮೈತ್ರಿ ಮಾಡುತ್ತಾ? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ನಡುವೆ ವಿಧಾನ ಪರಿಷತ್ ಚುನಾವಣೆ ಅಬ್ಬರ ತೀವ್ರಗೊಂಡಿದೆ. ಆದರೆ ಜೆಡಿಎಸ್ 5 ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದ ಕಡೆಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಡುವೆ ಮಾತುಕತೆ ನಡೆದಿದೆ. ಆದರೆ ಅಧಿಕೃತ ಮೈತ್ರಿಯ ಬಗ್ಗೆ ಬಹಿರಂಗ ಹೇಳಿಕೆಗಳನ್ನು ಯಾರೂ ನೀಡಿಲ್ಲ. ಪರಿಷತ್ ಚುನಾವಣೆಯಲ್ಲಿ ಮೈತ್ರಿ ಕುದುರಿದರೆ ಮುಂಬರುವ ವಿಧಾನಮಂಡಲ ಚುನಾವಣೆಯಲ್ಲೂ ಮೈತ್ರಿಯ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಜಾತ್ಯತೀತ ನಿಲುವನ್ನು ಬಿಡಲೊಪ್ಪುತ್ತಾರಾ ಗೌಡ್ರು! ದೇವೇಗೌಡರು ಸದಾ ಜಾತ್ಯತೀತ ನಿಲುವನ್ನು ಪ್ರದರ್ಶಿಸಿದವರು. ಕೋಮುವಾದಿ ಪಕ್ಷ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಬಿಜೆಪಿ ಜೊತೆಗೆ ಮೈತ್ರಿಗೆ ದೇವೇಗೌಡರು ಒಪ್ಪುತ್ತಾರಾ? ಎಂಬುವುದು ಕೂಡಾ ಅಷ್ಟೇ ಮಹತ್ವ ಪಡೆದುಕೊಂಡಿದೆ. 20-20 ಸರ್ಕಾರದ ಸಂದರ್ಭದ ಮೈತ್ರಿಗೂ ದೇವೇಗೌಡರಿಗೆ ಪೂರ್ಣ ಸಹಮತ ಇರಲಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ರಾಜಕೀಯ ಕೊನೆಯ ಗಳಿಗೆಯಲ್ಲಿ ನಿಲುವು ಬದಲಾವಣೆ ಮಾಡುತ್ತಾರಾ? ಎಂಬುವುದು ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ. ಅದೇನೇ ಇದ್ದರೂ ಈಗಾಗಲೇ ಹೇಳಿದಂತೆ ರಾಜಕೀಯದಲ್ಲಿ ಯಾರೂ ಶತ್ರುವೂ ಅಲ್ಲ, ಮಿತ್ರರೂ ಇಲ್ಲ. ಕಾಲ, ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ನಿಲುವುಗಳು, ನಿರ್ಧಾರಗಳು ಬದಲಾವಣೆ ಆದರೆ ಅಚ್ಚರಿ ಇಲ್ಲ. ಆದರೂ ಎಲ್ಲವನ್ನು ಕಾಲವೇ ನಿರ್ಧರಿಸಲಿದೆ.
from India & World News in Kannada | VK Polls https://ift.tt/3DpCGm4