ಮಳೆಯಿಂದ ಹಾಳಾದ ರಾಗಿ ಹೊಲಗಳು; ಮಾರುಕಟ್ಟೆಯಲ್ಲಿ ಏರಲಿದೆ ರಾಗಿ ಬೆಲೆ, ಮೇವೂ ದುಬಾರಿ

ವೀರಾಪುರ ಮಂಜುನಾಥ್‌ ಶಿಡ್ಲಘಟ್ಟ: ಈ ವರ್ಷ ಅತಿಯಾಗಿ ಸುರಿದ ಮಳೆಯಿಂದ ಬಹುತೇಕ ರಾಗಿ ಹೊಲಗಳು ಹಾಳಾಗಿವೆ. ಹಾಗಾಗಿ ರಾಗಿ ಕಾಳು, ರಾಸುಗಳ ಮೇವು ನಿರೀಕ್ಷಿತ ಪ್ರಮಾಣದಲ್ಲಿ ಕೈಗೆ ಸಿಗದು. ಇದರಿಂದ ರೈತರು ರಾಗಿ, ಮೇವನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಂತೆ ಮಾರುಕಟ್ಟೆ ಎಪಿಎಂಸಿಗಳಲ್ಲಿ ರಾಗಿ ಹಾಗೂ ರಾಸುಗಳ ಮೇವಿನ ಬೆಲೆ ಹೆಚ್ಚಳವಾಗುವ ಸಂಭವ ಇದೆ. ರಾಗಿ ಹಾಗೂ ಮೇವಿನ ಗುಣಮಟ್ಟದ ಆಧಾರದಲ್ಲಿ ಬೆಲೆ ಹೆಚ್ಚಳ ನಿರ್ಧಾರವಾಗಲಿದೆ. ಸಾಮಾನ್ಯವಾಗಿ ನವೆಂಬರ್‌ ಅಂತ್ಯ ಹಾಗೂ ಡಿಸೆಂಬರ್‌ ಆರಂಭದ ದಿನಗಳಲ್ಲಿ ಒಕ್ಕಣೆ ಕಾರ‍್ಯ ನಡೆಯಲಿದೆ. ಹೊಸ ರಾಗಿ ಕಾಳನ್ನು ಮನೆಯ ಕಣಜ ತುಂಬಿಸಿಕೊಂಡು, ಮೇವನ್ನು ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿಕೊಂಡು ಬಳಕೆಗೆ ಆಗುವಷ್ಟು ಬಿಟ್ಟು ಉಳಿದ ಹಳೆಯ ರಾಗಿ, ಮೇವನ್ನು ಮಾರಾಟ ಮಾಡುವುದು ವಾಡಿಕೆ. ಗ್ರಾಹಕರಲ್ಲಿ ಆತಂಕ : ಈ ವರ್ಷ ಅತಿಯಾದ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಸಿಗುತ್ತಿಲ್ಲ. ಮೇವೂ ದೊರೆಯುತ್ತಿಲ್ಲ. ಎಲ್ಲವೂ ಮಳೆಗೆ ಹಾಳಾಗಿದೆ. ಆದ್ದರಿಂದ ರೈತರು ಹಳೆಯ ರಾಗಿ, ಮೇವನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದು ಸ್ವಂತ ಬಳಕೆಗೆ ದಾಸ್ತಾನು ಮಾಡಿಕೊಳ್ಳುವುದೆ ಹೆಚ್ಚು. ಇದರಿಂದಾಗಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ, ಸಂತೆ, ಎಪಿಎಂಸಿಗಳಿಗೆ ಮಾರಾಟಕ್ಕಾಗಿ ರಾಗಿ ಬರುವ ಪ್ರಮಾಣ ಕುಸಿಯಲಿದೆ. ಮೇವಿನ ಮಾರಾಟವೂ ಅಷ್ಟಕ್ಕಷ್ಟೆ. ಇದರಿಂದ ಇವುಗಳ ಬೆಲೆ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಅತಿವೃಷ್ಟಿಯಿಂದ ಬೆಳೆ ಹಾಳು : ಜಿಲ್ಲೆಯಲ್ಲಿ ಈ ವರ್ಷ 138718 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, ನೆಲಗಡಲೆ ಪ್ರಮುಖ ಬೆಳೆಗಳೊಂದಿಗೆ ಅಲಸಂಧಿ, ಅವರೆ, ಸೂರ್ಯಕಾಂತಿ, ಹುರುಳಿ ಇನ್ನಿತರೆ ಮಿಶ್ರ ಬೆಳೆಗಳನ್ನು ಭಿತ್ತಿದ್ದು ಹೆಚ್ಚಿನ ನಿರೀಕ್ಷೆಯಿತ್ತು. ಆದರೆ ಈ ಭಾರಿಯ ಅತಿವೃಷ್ಟಿಯು ಬೆಳೆಗಳನ್ನು ಹಾಳು ಮಾಡಿಬಿಟ್ಟಿದೆ ರೈತರ ಕನಸುಗಳಿಗೂ ತಣ್ಣೀರು ಸುರಿದಿದೆ. ವಾರದ ಸಂತೆ ಹಾಗೂ ಅದಲು ಬದಲು ಮಾರುಕಟ್ಟೆಗಳಲ್ಲಿ ರಾಗಿ ಬೆಲೆ ಸಾಮಾನ್ಯವಾಗಿ 2200 ರಿಂದ 3000 ರೂ.ತನಕ ಇದೆ. ರಾಗಿಯ ಬಣ್ಣ, ದಪ್ಪ, ಗುಣಮಟ್ಟದ ಆಧಾರದಲ್ಲಿ ಬೆಲೆ ಹಾಗೂ ಬೇಡಿಕೆ ನಿರ್ಧಾರವಾಗಲಿದೆ. ರಾಗಿಯ ವಹಿವಾಟು : ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಗೌರಿಬಿದನೂರು, ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ರಾಗಿಯ ವಹಿವಾಟು ನಡೆಯಲಿದೆ. ನೆರೆಯ ಜಿಲ್ಲೆಗಳಿಂದಲ್ಲದೆ ಆಂಧ್ರದಿಂದಲೂ ರಾಗಿ ಮಾರಾಟ ಹಾಗೂ ಖರೀದಿಗಾಗಿ ಇಲ್ಲಿಗೆ ರೈತರು, ಖರೀದಿದಾರರು ಆಗಮಿಸಿ ವಹಿವಾಟು ನಡೆಸಲಿದ್ದಾರೆ. ಈ ವರ್ಷ ಹೆಚ್ಚು ರಾಗಿ, ಮೇವು ಸಿಗಲಿದ್ದು ತಮ್ಮ ಸ್ವಂತ ಬಳಕೆಗೆ ಸಾಕಾಗುವಷ್ಟು ಬಿಟ್ಟು ಉಳಿದ ರಾಗಿ ಮೇವನ್ನು ಮಾರಾಟ ಮಾಡಿ ಒಂದಷ್ಟು ಹಣವನ್ನು ಗಳಿಸುವ ಉದ್ದೇಶ ರೈತರದ್ದಾಗಿತ್ತು. ಹೆಚ್ಚಿನ ರಾಗಿ ಮೇವು ಉತ್ಪತ್ತಿಯಾಗಲಿದ್ದು ಕಡಿಮೆ ಬೆಲೆಗೆ ಖರೀಧಿಸಿ ಮನೆಯಲ್ಲಿ ಮಡಗಿಕೊಳ್ಳೋಣ ಎಂಬಾಸೆ ಗ್ರಾಹಕರದ್ದಾಗಿತ್ತು.


from India & World News in Kannada | VK Polls https://ift.tt/3xYAQHD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...