: ಚುನಾವಣೆ ಗೆಲ್ಲಲು ತಿಣಕಾಡುತ್ತಿರುವ ಕಾಂಗ್ರೆಸ್ ಮಿತ್ರರು ಫಲಿತಾಂಶದ ಬಳಿಕ ಜನರಿಗೆ ಮುಖ ತೋರಿಸಲು ಪರದಾಡಬೇಕಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಲೇವಡಿ ಮಾಡಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ದಿನಗಳಿಂದ ಕಾಂಗ್ರೆಸ್ ಪಕ್ಷ ಜನರನ್ನು ಗುಲಾಮರಂತೆ ನಡೆಸಿಕೊಂಡಿದೆ. ಅಲ್ಪಸಂಖ್ಯಾತರು ಮತ್ತು ದೀನ ದಲಿತರು ಕಾಂಗ್ರೆಸ್ ಗೆ ಒತ್ತೆಯಾಗಿರುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಮೋದಿ ಸರಕಾರ ಬಂದ ಬಳಿಕ ಕಾಂಗ್ರೆಸ್ ಮುಕ್ತ ಭಾರತವಾಗುವ ಸಂಕಲ್ಪ ಮಾಡಿದರು ಎಂದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ಪರಿಣಾಮ 2019ರಲ್ಲಿಯೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಿದೆ. ಮುಂದೆಯೂ ಬಿಜೆಪಿ ಸರಕಾರವೇ ರಚನೆಯಾಗುತ್ತದೆ ಎಂದರು. ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಸರಕಾರ ಹಿಂದೆ ಬಿದಿಲ್ಲ. ಪ್ರವಾಹ ಬಂದು ಸಾಕಷ್ಟು ರಸ್ತೆ, ಸೇತುವೆ, ಬಡವರ ಮನೆ ಬಿದ್ದು ಹೋಗಿದ್ದವು. ಅದಕ್ಕೆ ಪರಿಹಾರ ಕೊಡುವ ಕೆಲಸ ನಿರಂತರವಾಗಿ ನಡೆದಿದೆ ಎಂದರು. ಇದೇ ವೇಳೆ ಕವಟಗಿಮಠ ಒಬ್ಬ ಸಜ್ಜನ ರಾಜಕಾರಣಿ. ವಿಧಾನ ಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮಗಳನ್ನು ಸುಧಾರಿಸುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರ ಗೆಲವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ಶಾಸಕ ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
from India & World News in Kannada | VK Polls https://ift.tt/31u1NHh