ಮಹಾಬಲೇಶ್ವರ ಕಲ್ಕಣಿ ಬೆಂಗಳೂರು: ಕಳೆದೊಂದು ವರ್ಷದಿಂದ '' ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2019-20ರ ಅವಧಿಯಲ್ಲಿ ಪ್ರತಿದಿನ 15 ಲಕ್ಷ ಜನರು ಪ್ರಯಾಣಿಸುವ ಗುರಿ ಇಟ್ಟುಕೊಂಡಿದ್ದ ಬಿಎಂಆರ್ಸಿಎಲ್, ಶೇ.27ರಷ್ಟು ಮಾತ್ರ ಗುರಿ ತಲುಪಿದೆ. ನಮ್ಮ ಮೆಟ್ರೋ ಮಾರ್ಗ 42 ಕಿ.ಮೀ ಇದ್ದಾಗ, ಪ್ರತಿದಿನ 4 ಲಕ್ಷ ಜನರು ಸಂಚಾರ ಮಾಡುತ್ತಿದ್ದರು. ಸದ್ಯ 56 ಕಿ.ಮೀ ವಿಸ್ತಾರವಾಗಿದೆ. ಆದರೆ, ಪ್ರಯಾಣಿಕರ ಸಂಖ್ಯೆ 3 ಲಕ್ಷಕ್ಕೆ ಕುಸಿದಿದೆ. ಇದಕ್ಕೆ ಕೋವಿಡ್ ಪ್ರಮುಖ ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಲಾಕ್ಡೌನ್ನಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಲಾಕ್ಡೌನ್ ತೆರವು ಮಾಡಿದ ನಂತರ ಬಹಳಷ್ಟು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಿದ ಪರಿಣಾಮ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯಿತು. ಈ ಕುರಿತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪಬ್ಲಿಕ್ ಟ್ರಾನ್ಸ್ಪೋರ್ಟ್ ಎಂಬ ಸ್ವಯಂಸೇವಾ ಸಂಸ್ಥೆ ಸಿದ್ಧಪಡಿಸಿದ ''ಭಾರತೀಯ ಮೆಟ್ರೊ ಯೋಜನೆಗಳ ಸಾಮರ್ಥ್ಯ; ಮುಂಬರುವ ನಗರ ರೈಲು ಯೋಜನೆಗಳಿಗೆ ಒಂದು ಪಾಠ'' ಎಂಬ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಂಸ್ಥೆಯು ದೇಶದ ಪ್ರತಿಷ್ಠಿತ ದಿಲ್ಲಿ, ಮುಂಬಯಿ, ಬೆಂಗಳೂರು ಮತ್ತು ಚೆನ್ನೈ ಮೆಟ್ರೊ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವರದಿ ತಯಾರಿಸಿದೆ. 2019-20ರ ಅವಧಿಯಲ್ಲಿ 'ನಮ್ಮ ಮೆಟ್ರೋ'ದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಪ್ರತಿ ಕಿ.ಮೀ ಗೆ 9,456ರಷ್ಟಿತ್ತು.ಮುಂಬಯಿ ಮೆಟ್ರೊದಲ್ಲಿ 40,650, ದಿಲ್ಲಿ ಮೆಟ್ರೊದಲ್ಲಿ 14,653 ಹಾಗೂ ಚೆನ್ನೈ ಮೆಟ್ರೊದಲ್ಲಿ ದೈನಂದಿನ ಪ್ರತಿ ಕಿ.ಮೀ ಗೆ 2,553 ಪ್ರಯಾಣಿಸುತ್ತಿದ್ದರು ಎಂದು ವರದಿಯಲ್ಲಿಉಲ್ಲೇಖಿಸಲಾಗಿದೆ. ಪ್ರಯಾಣಿಕರ ಇಳಿಕೆಗೆ ಕಾರಣ ಕೋವಿಡ್ ಸಮಯದಲ್ಲಿನ ಕಠಿಣ ನಿಯಮ ಜಾರಿ, ಕೇವಲ ಕಾರ್ಡ್ ಇದ್ದವರಿಗೆ ಮಾತ್ರ ಪ್ರಯಾಣದ ಅವಕಾಶ ನೀಡಿದ್ದು, ಮೆಟ್ರೊ ಅವಧಿ ಕಡಿತ ಮಾಡಿದ್ದು, ಸ್ಮಾರ್ಟ್ ಕಾರ್ಡ್ ರಿಯಾಯಿತಿಯನ್ನು ಶೇ.15ರಿಂದ ಶೇ.5ಕ್ಕೆ ಇಳಿಸಿರುವುದು, ಪ್ರಯಾಣ ದರ ಅಧಿಕವಾಗಿರುವುದು ಕೂಡ ಪ್ರಯಾಣಿಕರ ಸಂಖ್ಯೆ ತಗ್ಗಲು ಪ್ರಮುಖ ಕಾರಣವಾಗಿದೆ. ಸಮರ್ಪಕ ಸಂಪರ್ಕವಿಲ್ಲ ಮೆಟ್ರೊ ನಿಲ್ದಾಣಕ್ಕೆ ವ್ಯವಸ್ಥಿತ ಸಂಪರ್ಕ ವ್ಯವಸ್ಥೆ ಇಲ್ಲದಿರುವುದೂ ಕೂಡ ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಮತ್ತೊಂದು ಕಾರಣವಾಗಿದೆ. ಮೆಟ್ರೊ ಇಳಿದಾಕ್ಷಣ ಆಟೋ, ಕ್ಯಾಬ್ ಅಥವಾ ಸ್ವಂತ ವಾಹನವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಬಹಳಷ್ಟು ಮೆಟ್ರೊ ನಿಲ್ದಾಣಗಳಲ್ಲಿ ಸರಿಯಾದ ಪಾರ್ಕಿಂಗ್ ಸೌಲಭ್ಯವಿಲ್ಲ. ಪಾರ್ಕಿಂಗ್ ಸೌಲಭ್ಯವಿದ್ದೆಡೆ, ಶುಲ್ಕ ಅಧಿಕವಾಗಿರುವುದರಿಂದ ಸ್ವಂತ ವಾಹನದಲ್ಲಿಯೇ ಹೋಗಲು ಜನರು ಇಚ್ಛಿಸುವುದರಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಿದೆ. ಮತ್ತೊಂದೆಡೆ, ಗ್ರಾಹಕರನ್ನು ಸೆಳೆಯುವಲ್ಲಿ ಬಿಎಂಆರ್ಸಿಎಲ್ ಸರಿಯಾದ ಪ್ರಚಾರ ಕೂಡ ಮಾಡದೇ ಇರುವುದು ವೈಫಲ್ಯಕ್ಕೆ ಕಾರಣವಾಗಿದೆ. ದುಬಾರಿ ಕಾಮಗಾರಿ ವೆಚ್ಚ ಮೆಟ್ರೊ ಕಾಮಗಾರಿಗಾಗಿ ಭೂಸ್ವಾಧೀನ ಅಗತ್ಯವಾಗಿದ್ದು, ಇದಕ್ಕೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಈ ಕಾರಣದಿಂದ ದೇಶದಲ್ಲಿ ಮೆಟ್ರೊ ರೈಲು ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬೆಂಗಳೂರಿನ 'ನಮ್ಮ ಮೆಟ್ರೊ' ಕಾಮಗಾರಿಗೆ ಪ್ರತಿ ಕಿ.ಮೀ ಗೆ 327 ಕೋಟಿ ರೂ. ವೆಚ್ಚ ತಗಲುತ್ತಿದೆ. ಅದೇ ರೀತಿ ಮುಂಬಯಿ ಮೆಟ್ರೊಗೆ ಪ್ರತಿ ಕಿ.ಮೀ ಗೆ 390 ಕೋಟಿ ರೂ., ಚೆನ್ನೈ ಮೆಟ್ರೊಗೆ 259 ಕೋಟಿ ರೂ. ಹಾಗೂ ದಿಲ್ಲಿ ಮೆಟ್ರೊಗೆ 181 ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಮೆಟ್ರೊ ಪ್ರಯಾಣಿಕರ ಸಂಖ್ಯೆ ಇಳಿಕೆ ನಡುವೆಯೂ ನಮ್ಮ ಮೆಟ್ರೊ ಕಾಮಗಾರಿ ಭರದಿಂದ ಸಾಗುತ್ತಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಗಳು ಪೂರ್ಣಗೊಂಡಿದ್ದೇ ಆದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ. ಆದರೆ ಇದಕ್ಕೆ ಇನ್ನೂ ಆರು ವರ್ಷ ಕಾಯಬೇಕು. ಮಾರ್ಗ -ಟರ್ಮಿನಲ್ -ಕಿ.ಮೀ -ಕಾಮಗಾರಿ ಮುಕ್ತಾಯದ ಅವಧಿ
- ನೇರಳೆ ಮಾರ್ಗ- ಕೆಂಗೇರಿ-ಚಲ್ಲಘಟ್ಟ- 1.30 -ಮಾರ್ಚ್ 2023
- ನೇರಳೆ ಮಾರ್ಗ- ಬೈಯಪ್ಪನಹಳ್ಳಿ-ವೈಟ್ಫೀಲ್ಡ್- 15.50- ಡಿಸೆಂಬರ್ 2022
- ಹಸಿರು ಮಾರ್ಗ- ನಾಗಸಂದ್ರ-ಮಾದವಾರ -3.77 -ಸೆಪ್ಟೆಂಬರ್ 2022
- ಹಳದಿ ಮಾರ್ಗ -ರಾಷ್ಟ್ರೀಯ ವಿದ್ಯಾಲಯ ರಸ್ತೆ-ಬೊಮ್ಮಸಂದ್ರ(ಎಲೆಕ್ಟ್ರಾನಿಕ್ ಸಿಟಿ)- 18.82 -ಡಿಸೆಂಬರ್ 2022
- ಗುಲಾಬಿ ಮಾರ್ಗ- ಗೊಟ್ಟಿಗೆರೆ-ನಾಗಾವರ -21.25 -ಮಾರ್ಚ್ 2025
- ನೀಲಿ ಮಾರ್ಗ -ಕೇಂದ್ರಿಯ ರೇಷ್ಮೆ ಮಂಡಳಿ-ಕೆ.ಆರ್.ಪುರಂ -18.30 -ಸೆಪ್ಟೆಂಬರ್2027
- ನೀಲಿ ಮಾರ್ಗ- ಕೆ.ಆರ್.ಪುರಂ-ಕೆಂಪೇಗೌಡ ವಿಮಾನ ನಿಲ್ದಾಣ- 37.70 -ಡಿಸೆಂಬರ್ 2027
from India & World News in Kannada | VK Polls https://ift.tt/3rYQpOO